ಕರ್ನಾಟಕ

ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಗಂಭೀರವಾಗಿ ಪರಿಗಣನೆ: ಅತೃಪ್ತ ಕಾಂಗ್ರೆಸ್ ನಾಯಕರಿಗೆ ವೇಣುಗೋಪಾಲ್‌ ಎಚ್ಚರಿಕೆ

Pinterest LinkedIn Tumblr


ಬೆಂಗಳೂರು: ಸಚಿವ ಸ್ಥಾನ ವಂಚಿತರು ಪ್ರತ್ಯೇಕ ಸಭೆ ನಡೆಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅಸಮಾಧಾನಿತರಿಗೆ ಎಚ್ಚರಿಕೆ ನೀಡಿದ್ದಾರೆ.

ಎಂ.ಬಿ ಪಾಟೀಲ್‌ ನೇತೃತ್ವದಲ್ಲಿ ಶುಕ್ರವಾರ ಬಂಡಾಯ ಶಾಸಕರ ಸಭೆ ನಡೆಯುವ ಬಗ್ಗೆಯೂ ಗರಂ ಆಗಿರುವ ಅವರು, ಆ ರೀತಿ ಸಭೆ ಕರೆಯಲು ಯಾರಿಗೂ ಅವಕಾಶವಿಲ್ಲ. ಅಂತಹ ಸಭೆಗಳಿಗೆ ಯಾವ ಶಾಸಕರೂ ಹೋಗಬಾರದು ಎಂದು ಹೇಳಿದ್ದಾರೆ.

ಸಂಪುಟ ರಚನೆ ಸಂದರ್ಭದಲ್ಲಿ ಮೂರು ಷರತ್ತುಗಳನ್ನು ವಿಧಿಸಲಾಗಿದ್ದು, ಮೊದಲ ಬಾರಿ ಶಾಸಕರಾದವರಿಗೆ ಅವಕಾಶ ನೀಡದಿರುವುದು, ಸಚಿವರಾದವರ ಕಾರ್ಯಕ್ಷಮತೆಯ ಬಗೆ ಆರು ತಿಂಗಳಲ್ಲಿ ಮೌಲ್ಯ ಮಾಪನ ಮಾಡುವುದು ಹಾಗೂ ಎರಡು ವರ್ಷದ ನಂತರ ಸಂಪುಟ ಪುನಾರಚನೆ ಮಾಡುವ ತೀರ್ಮಾನ ಮಾಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ಅವಕಾಶಗಳು ದೊರೆಯುತ್ತವೆ ಎಂದು ಭರವಸೆ ನೀಡಿದ್ದಾರೆ.

ಸಂಪುಟ ವಿಸ್ತರಣೆಯ ನಂತರ ಪಕ್ಷದಲ್ಲಿ ಉಂಟಾಗಿರುವ ಗೊಂದಲ ನಿವಾರಣೆ ಕುರಿತು ಅತೃಪ್ತರನ್ನು ಕರೆದು ಮಾತನಾಡಿದ ಅವರು, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಅವಕಾಶ ಸಿಗದವರು ಸಹಕರಿಸಬೇಕು. ಲೋಕಸಭೆ ಚುನಾವಣೆ ಗುರಿ ಇಟ್ಟುಕೊಂಡು ಪಕ್ಷದ ನಿರ್ಧಾರ ಕೈಗೊಂಡಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು. ಹೈಕಮಾಂಡ್‌ ಎಲ್ಲವನ್ನು ಗಮನಿಸುತ್ತಿದೆ. ಪಕ್ಷ ನಿಷ್ಠರು ಹಾಗೂ ಪಕ್ಷ ಸಂಘಟನೆ ಮಾಡಿದವರಿಗೆ ನ್ಯಾಯ ಖಂಡಿತವಾಗಿ ಸಿಗಲಿದೆ. ಸ್ವಲ್ಪ ನಿಧಾನವಾಗಬಹದು ಆದರೆ, ಅನ್ಯಾಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಮುಖಂಡರ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಪಕ್ಷಕ್ಕೆ ಸೀಮಿತ ಸ್ಥಾನಗಳು ದೊರೆತಿವೆ. ಸಚಿವ ಸ್ಥಾನ ಸಿಗದಿರುವಾಗ ನಿರಾಸೆಯಾಗುವುದು ಸಹಜ. ಆದರೆ, ಪಕ್ಷದ ಹೊರತಾಗಿ ಶಾಸಕರು ಪ್ರತ್ಯೇಕ ಸಭೆಗಳನ್ನು ನಡೆಸಿ ಪಕ್ಷಕ್ಕೆ ತೊಂದರೆ ಕೊಡುವ ಕೆಲಸ ಮಾಡಿದರೆ ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್‌ ಮತ್ತು ಎಚ್‌.ಡಿ. ರೇವಣ್ಣ ನಡುವಿನ ಗೊಂದಲದ ಕುರಿತು ಪ್ರತಿಕ್ರಿಯಿಸಿರುವ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲಗಳು ಇರುತ್ತವೆ. ಅವುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಇದಕ್ಕೂ ಮೊದಲು ಸಚಿವ ಸ್ಥಾನ ವಂಚಿತರಾಗಿರುವ ಎಚ್‌.ಕೆ. ಪಾಟೀಲ್‌, ಸತೀಶ್‌ ಜಾರಕಿಹೊಳಿ, ಎಂ.ಬಿ. ಪಾಟೀಲ್‌, ಪರಮೇಶ್ವರ್‌ ನಾಯ್ಕ, ವಿ. ಮುನಿಯಪ್ಪ, ತನ್ವೀರ್ ಸೇಠ್ ಸಿ.ಎಸ್‌.ಶಿವಳ್ಳಿ, ಡಾ. ಅಜಯ್‌ ಧರ್ಮಸಿಂಗ್‌ ಅವರು ವೇಣುಗೋಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅತೃಪ್ತರ ಭಾವನೆಗಳನ್ನು ಆಲಿಸಿರುವ ವೇಣುಗೋಪಾಲ್‌ ಶೀಘ್ರವೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿಸಿ ಅವರ ಬೇಡಿಕೆಗಳಿಗೆ ಸೂಕ್ತ ಮನ್ನಣೆ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ನಡೆದ ಘಟನೆಗಳ ಬಗ್ಗೆ ವೇಣುಗೋಪಾಲ್‌ಗೆ ಮಾಹಿತಿ ನೀಡಿದ್ದೇನೆ. ನನ್ನ ಜೊತೆ ಇದ್ದ ಶಾಸಕರ ಅಭಿಪ್ರಾಯ ಅವರ ಗಮನಕ್ಕೆ ತಂದಿದ್ದೇನೆ. ರಾಹುಲ್‌ ಗಾಂಧಿ ಭೇಟಿ ಮಾಡಿಸುವ ಭರವಸೆ ನೀಡಿದ್ದಾರೆ. ನನ್ನ ಸಾಮರ್ಥ್ಯ ಏನು ಎನ್ನುವುದು ಕಾಂಗ್ರೆಸ್‌ ನಾಯಕರು ಮತ್ತು ರಾಜ್ಯದ ಜನತೆಗೆ ಗೊತ್ತಿದೆ.
– ಎಚ್‌.ಕೆ. ಪಾಟೀಲ್‌, ಅತೃಪ್ತ ಶಾಸಕರ ಪಡೆಯ ನಾಯಕ

ನಾನು ಯಾವುದೇ ಸಭೆಯನ್ನು ಕರೆದಿಲ್ಲ. ಎಲ್ಲೂ ಸಭೆ ನಡೆಸುತ್ತಿಲ್ಲ. ಸಭೆ ನಡೆಯುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಸಚಿವಾಕಾಂಕ್ಷಿಯೂ ಅಲ್ಲ.
– ಎಂ.ಬಿ. ಪಾಟೀಲ್‌, ಅತೃಪ್ತ ಶಾಸಕ.

ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗಬೇಕಿತ್ತು. ಎರಡನೇ ಹಂತದಲ್ಲಿ ಸಿಗುವ ಭರವಸೆ ಇದೆ. ನಾನು ಉತ್ತರ ಕರ್ನಾಟಕ ಭಾಗದ ಹಿರಿಯ ಶಾಸಕ. ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಅದನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಿದರೆ ಅನುಕೂಲ. ಈ ವಿಷಯದಲ್ಲಿ ಹೈ ಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ.
– ಸಿ.ಎಸ್‌.ಶಿವಳ್ಳಿ, ಕುಂದಗೋಳ ಶಾಸಕ.

ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ನಾಯಕರನ್ನು ಮುಗಿಸುವ ಯತ್ನ ನಡೆದಿದೆ. ಜಮೀರ್‌ ಅಹಮದ್‌, ಯು.ಟಿ. ಖಾದರ್‌ ರಾಜ್ಯ ಮಟ್ಟದಲ್ಲಿ ನಮ್ಮ ಸಮುದಾಯ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿಲ್ಲ. ಜಮೀರ್‌ ಅಹಮದ್‌ ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಬೇರೆ ಪಕ್ಷದಿಂದ ಬಂದವರಿಗೆ ಸಚಿವ ಸ್ಥಾನ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ಮುಸ್ಲಿಂ ನಾಯಕತ್ವ ನಿರ್ವಹಿಸುವಂತವರಿಗೆ ಇನ್ನೊಂದು ಸಚಿವ ಸ್ಥಾನ ನೀಡಬೇಕು.
– ತನ್ವೀರ್ ಸೇಠ್, ನರಸಿಂಹ ರಾಜ ಕ್ಷೇತ್ರದ ಶಾಸಕ.

Comments are closed.