ಬೆಂಗಳೂರು: ಅಂತರ್ಜಾಲದಲ್ಲಿ ಗಿಣಿ ಕೊಳ್ಳಲು ಹೋದ ನಗರದ ಮಹಿಳೆಯೊಬ್ಬರು 71,500 ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ.
ಸರ್ಜಾಪುರ ರಸ್ತೆಯ ವಿಜಯ ಕುಮಾರ್ ಲೇ ಔಟ್ ನಿವಾಸಿಯಾಗಿರುವ 32 ವರ್ಷದ ಶ್ರೀಜಾ. ಡಿ ಪ್ರಾಣಿ ಪ್ರಿಯರಾಗಿದ್ದು, ಆನ್ಲೈನ್ ಖರೀದಿಗೆ ಪ್ರಯತ್ನಿಸುವಾಗ ಕೆಲ ಸಾಮಾನ್ಯ ಮುನ್ನೆಚ್ಚರಿಕೆ ಪಾಲಿಸದ್ದರಿಂದ 71,500 ರೂಪಾಯಿ ವಂಚನೆಗೊಳಗಾಗಿದ್ದಾರೆ. ಮತ್ತೀಗ ತಮ್ಮ ಭಾವನೆಗಳ ಜತೆ ಆಟವಾಡಿದ್ದಲ್ಲದೇ ಹಣವನ್ನು ಲೂಟಿ ಹೊಡೆದ ವಂಚಕನನ್ನು ಬಂಧಿಸುವಂತೆ ಅವರು ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಅಂತರ್ಜಾಲದಲ್ಲಿ ಗಿಣಿಯನ್ನು ಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಬಾಬ್ಬಿ ಎಂಬಾತ ಸಂಪರ್ಕಕ್ಕೆ ಸಿಕ್ಕಿದ. ಆತ ತನ್ನ ಫೇಸ್ಬುತ್ ಖಾತೆ ಮತ್ತು ವಾಟ್ಸ್ಆ್ಯಪ್ ನಂಬರ್ ಹಂಚಿಕೊಂಡಿದ್ದರಿಂದ ನಂಬಿಕೆಗೆ ಅರ್ಹ ವ್ಯಕ್ತಿ ಎಂದುಕೊಂಡೆ. ಹೀಗಾಗಿ ಆತ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ನೆಟ್ ಬ್ಯಾಂಕ್ ಮೂಲಕ ಹಣ ವರ್ಗಾಯಿಸಿದೆ. ಬಳಿಕ ಆಕೆಗೆ ಗಿಣಿಯೂ ಸಿಗಲಿಲ್ಲ. ಹಣವೂ ಮರಳಿ ಸಿಗಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಬಾಬ್ಬಿ ಸಂಪರ್ಕಕ್ಕೆ ಸಿಗದಾದಾಗ ಶ್ರೀಜಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಆರೋಪಿ ವಿರುದ್ಧ ವಂಚನೆ ಪ್ರಕರಣ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2000ದ ಅಡಿಯಲ್ಲಿ ಹಲವು ಸೆಕ್ಷನ್ಸ್ಗಳ ಅನ್ವಯ ಪ್ರಕರಣ ದಾಖಲಾಗಿದೆ.
ಅಂತರ್ಜಾಲದಲ್ಲಿ ಖರೀದಿ ಮಾಡುವಾಗ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಮುಖತಃ ಭೇಟಿಯಾಗುವ ಮುನ್ನ ಯಾವುದೇ ವ್ಯವಹಾರಗಳಿಗೆ ಕೈ ಹಾಕಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡುತ್ತಲೇ ಇರುತ್ತಾರೆ.
Comments are closed.