ಕರ್ನಾಟಕ

ಭಾರೀ ಮಳೆ: ಕೆರೆಯಂತಾದ ಬೆಂಗಳೂರು ರಸ್ತೆಗಳು

Pinterest LinkedIn Tumblr


ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬುಧವಾರ ಜೋರು ಮಳೆಯಾಗಿದೆ. ರಾಜ್ಯ ರಾಜಧಾನಿಯ ವಿಧಾನಸೌಧ, ಕಾರ್ಪೋರೇಷನ್​ ವೃತ್ತ, ಬಸವನಗುಡಿ ಸೇರಿದಂತೆ ಹಲವು ಭಾಗಗಳಲ್ಲಿ ಭರ್ಜರಿ ಮಳೆಯಾಗಿದ್ದು, ರಸ್ತೆಗಳೆಲ್ಲ ಕೆರೆಗಳಂತಾದ ದೃಶ್ಯ ಕಂಡುಬಂದಿತು.

ಬಂಗಾಳಕೊಲ್ಲಿ, ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶ, ಕೋಲಾರ, ರಾಮನಗರ, ಚಾಮರಾಜನಗರದಲ್ಲಿ ಸಾಧಾರಣ ಮಳೆಯಾಗಿದೆ. ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಭಾಗಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಉತ್ತಮ‌ ಮಳೆಯಾಗಲಿದೆ. ಇಂದು ರಾತ್ರಿ ರಾಜ್ಯದಲ್ಲಿ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದ್ದಾರೆ.

ಇಂದು ಸಂಜೆ ಸುರಿದ ಮಳೆಯಿಂದ ವಿಧಾನಸೌಧದ ಮೊದಲ ಮಹಡಿಯಲ್ಲಿ ಕೆರೆಯಂತೆ ನಿಂತಿದ್ದ ಮಳೆ ನೀರಿನಿಂದ ಪರದಾಡುವಂತಾಯಿತು. ವಿಧಾನಸೌಧದ ಪ್ರವೇಶ ದ್ವಾರಗಳಲ್ಲೂ ಮಳೆ ನೀರು ನಿಂತಿದ್ದರಿಂದ ಕಾರು ಚಾಲಕರು ಕೂಡ ಕಷ್ಟಪಡಬೇಕಾಯಿತು. ಹಾಗೇ, ನಗರದ ಪ್ರಮುಖ ರಸ್ತೆಗಳಲ್ಲಿ ಚರಂಡಿಗೆ ಇಳಿಯದ ನೀರು ರಸ್ತೆ ಮೇಲೆ ನುಗ್ಗಿದ್ದರಿಂದ ರಸ್ತೆ ಮೇಲೇ ನೀರು ಜೋರಾಗಿ ಹರಿದುಹೋಗುತ್ತಿತ್ತು.

ರಾಮನಗರದಲ್ಲೂ ಜೋರು ಮಳೆ:

ರೇಷ್ಮೆನಗರಿ ರಾಮನಗರ ತಾಲ್ಲೂಕಿನಲ್ಲಿಯೂ ಜೋರು ಮಳೆಯಾಗಿದ್ದು, ಮಳೆಯಿಂದಾಗಿ ಸಿ.ಎಂ. ಕುಮಾರಸ್ವಾಮಿ ಕಾರ್ಯಕ್ರಮವನ್ನು ಸ್ವಲ್ಪ ಕಾಲ ನಿಲ್ಲಿಸಲಾಯಿತು. ಬಿಡದಿ ಬಳಿಯ ಕೇತುಗಾನಹಳ್ಳಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಜೆಡಿಎಸ್ ಮುಖಂಡರು ಸೇರಿದ್ದರು.

ಮಳೆಯಿಂದಾಗಿ ತೋಟದಲ್ಲಿ ಹಾಕಿದ್ದ ಶಾಮಿಯಾನ ಪೂರ್ತಿ ಒದ್ದೆಯಾದ ಕಾರಣ ಸಭೆಯನ್ನು ನಿಲ್ಲಿಸಲಾಯಿತು. ಕಾರ್ಯಕರ್ತರು ಮಳೆಯಲ್ಲಿ ನಿಲ್ಲಲು ಸಾಧ್ಯವಾಗದೆ ಸುರಕ್ಷಿತ ಸ್ಥಳಗಳನ್ನು ಹುಡುಕಿ ಆಸರೆ ಪಡೆದರು. ಮಳೆ ಕಡಿಮೆಯಾದ ನಂತರ ಸಿಎಂ ಸಭೆ ಮುಂದುವರಿಸಿದರು.

ದೇವರ ನಾಡಿಗೆ ಮತ್ತೆ ಸಂಕಷ್ಟ..!
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣದಿಂದ ಕರಾವಳಿ ಭಾಗದಲ್ಲಿ ದೊಡ್ಡ ಚಂಡಮಾರುತ ಸೃಷ್ಟಿಯಾಗುವ ಭೀತಿ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 7 ಮತ್ತು 8ರಂದು ಬಹಳ ತೀವ್ರತರದ ಚಂಡಮಾರುತ ಆರ್ಭಟಸಲಿದೆಯಂತೆ. ಈ ಹಿಂದೆ ಮಳೆ, ಪ್ರವಾಹದಿಂದ ಜರ್ಝರಿತಗೊಂಡು ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಕೇರಳ ರಾಜ್ಯಕ್ಕೆ ಈ ವಾರ ಮತ್ತೆ ಪ್ರವಾಹ ವಕ್ಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಕ್ಟೋಬರ್ 6ರ ನಂತರ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ತುರ್ತು ಕಾರ್ಯಾಚರಣೆ ಕೇಂದ್ರವು ಕಟ್ಟುನಿಟ್ಟು ಸೂಚನೆ ರವಾನಿಸಿದೆ.

Comments are closed.