ಕರ್ನಾಟಕ

ದುಬಾರಿ ಬೆಲೆಯ ಬೈಕ್‌ಗಳನ್ನು ಕದ್ದು ಮಾರಾಟ ಮಾಡಲಾಗದೆ ಸಿಕ್ಕಿ ಬಿದ್ದರು

Pinterest LinkedIn Tumblr


ಬೆಂಗಳೂರು: ದುಬಾರಿ ಬೆಲೆಯ ಬೈಕ್‌ಗಳನ್ನು ಕದ್ದ ಖದೀಮರು, ಅವುಗಳನ್ನು ಮಾರಾಟ ಮಾಡಲಾಗದೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವರ್ತೂರು ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಅತ್ತಿಬೆಲೆ ನಿವಾಸಿಗಳಾದ ಅಸ್ಮತ್‌ ಖಾನ್‌ ಅಲಿಯಾಸ್‌ ಬುಲೆಟ್‌ ಖಾನ್‌, ಮಂಜುನಾಥ್‌ ಮತ್ತು ಸಂತೋಷ್‌ ಸಿಕ್ಕಿ ಬಿದ್ದಿದ್ದಾರೆ. ಇವರಿಂದ ಸುಮಾರು 30 ಲಕ್ಷ ರೂ. ಮೌಲ್ಯದ ಒಟ್ಟು 16 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ಕೆಟಿಎಂ ಡ್ಯೂಕ್‌ ಮತ್ತು ರಾಯಲ್‌ ಎನ್‌ಫೀಲ್ಡ್‌’ ಬೈಕ್‌ಗಳನ್ನು ಕದಿಯುವುದರಲ್ಲಿ ಪಳಗಿದ್ದ ಆರೋಪಿಗಳು, ಕದ್ದ ಬೈಕ್‌ಗಳನ್ನು ಮಾರಾಟ ಮಾಡಲಾಗಿರಲಿಲ್ಲ. ಹೀಗಾಗಿ, ಕದ್ದ ಬೈಕ್‌ಗಳನ್ನು ಹೆಚ್ಚು ದಿನ ಇಟ್ಟುಕೊಳ್ಳುವುದೂ ಸುರಕ್ಷಿತವಲ್ಲ ಎಂದು ತಿಳಿದು ಅವುಗಳನ್ನು ತೋಟದ ಮನೆಗಳಲ್ಲಿ ಮತ್ತು ಪಾರ್ಕಿಂಗ್‌ ಸ್ಥಳಗಳಲ್ಲಿ ದಿನಗಟ್ಟಲೆ ನಿಲ್ಲಿಸಿ ಪಾರ್ಕಿಂಗ್‌ ಶುಲ್ಕ ಪಾವತಿಸುತ್ತಿದ್ದರು.

ಬೇರೆ ಬೈಕ್‌ಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಎನ್‌ಫೀಲ್ಡ್‌ ಮತ್ತು ಕೆಟಿಎಂ ಡ್ಯೂಕ್‌ಗಳನ್ನು ಮಾರಲು ಸಾಧ್ಯವಾಗಿರಲಿಲ್ಲ. ದುಬಾರಿ ಬೈಕ್‌ಗಳನ್ನು ಖರೀದಿಸುವವರೂ ಕೂಡ ಸಿಕ್ಕಿರಲಿಲ್ಲ. ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಬೆನ್ನತ್ತಿದಾಗ ಈ ಹಿಂದೆ ಜೈಲು ಸೇರಿದ್ದ ಅಸ್ಮತ್‌ಖಾನ್‌ ಮತ್ತು ಸಂತೋಷ್‌ ಬಿಡುಗಡೆಗೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಅವರ ಚಲನ-ವಲನದ ಮೇಲೆ ನಿಗಾ ಇಟ್ಟಾಗ ಆರೋಪಿಗಳು ಮತ್ತದೇ ಕೃತ್ಯದಲ್ಲಿ ತೊಡಗಿರುವುದು ಗೊತ್ತಾಯಿತು. ಕೆಲವು ದಿನಗಳ ಕಾಲ ಆರೋಪಿಗಳನ್ನು ಹಿಂಬಾಲಿಸಿದಾಗ ಕದ್ದ ಬೈಕ್‌ಗಳನ್ನು ಇಟ್ಟಿರುವ ಜಾಗಗಳಿಗೆ ಭೇಟಿ ನೀಡುತ್ತಿದ್ದುದು ಗಮನಕ್ಕೆ ಬಂದಿತು. ಅದರ ಆಧಾರದ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.