ಕರ್ನಾಟಕ

ಆಸ್ತಿ ವಿವಾದ: ನ್ಯಾಯಕ್ಕಾಗಿ ಒತ್ತಾಯಿಸಿ ಎಸ್‍ಪಿ ಕಚೇರಿಯಲ್ಲೇ ವಿಷ ಕುಡಿದ ಮಹಿಳೆ!

Pinterest LinkedIn Tumblr


ಬೆಳಗಾವಿ: ಆಸ್ತಿ ವಿವಾದ ಬಗೆಹರಿಸಿ ತಮಗಿರುವ ಪ್ರಾಣ ಬೆದರಿಕೆಯಿಂದ ರಕ್ಷಣೆ ನೀಡಿ ತಮಗೆ ನ್ಯಾಯ ಕೊಡಿಸಿ ಎಂದು ಮಹಿಳೆಯೊಬ್ಬಳು ಎಸ್.ಪಿ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ನಗರದ ಅನಂತಶೈನ ಗಲ್ಲಿಯ ನಿವಾಸಿ ಬಸವ್ವ ಕೊಪ್ಪದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ತಮ್ಮ ತಂದೆಯ ಆಸ್ತಿಯನ್ನ ಬೇರೆಯವರು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ ಎಂದು ಕೋರ್ಟ್‌ಗೆ ಹೋಗಿದ್ದಕ್ಕೆ ಅದೇ ಗ್ರಾಮದ ನಿವಾಸಿ ರಾಜು ತಳವಾರ ಎಂಬಾತ ಇವರಿಗೆ ಕೇಸ್ ಮರಳಿ ಪಡೆದುಕೊಳ್ಳುವಂತೆ ಧಮ್ಕಿ ಹಾಕಿದ್ದನಂತೆ. ಹೀಗಾಗಿ ತಂದೆಯ ಆಸ್ತಿಯನ್ನು ಉಳಿಸಿಕೊಡಿ ಎಂದು ಎಸ್‍ಪಿ ಕಚೇರಿಯಲ್ಲಿ ದೂರು ನೀಡಲು ಬಂದಿದ್ದಳು.

ಎಸ್‍ಪಿ ಕಚೇರಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ನನ್ನ ದೂರಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಅಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಈ ಕುರಿತು ಎಸ್.ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಇದು ಅಕ್ಕ ತಂಗಿಯರ ಜಗಳವಾಗಿದ್ದು ಇದನ್ನ ಬಗೆಹರಿಸಿ ಕಳುಹಿಸಿಕೊಟ್ಟಿದ್ದೆವು. ಇದಕ್ಕೆ ಒಪ್ಪದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಮ್ಮ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೀಗಾಗಿ ಆಕೆಯ ಮೇಲೆ ಐಪಿಸಿ ಸೆಕ್ಷನ್ 309(ಆತ್ಮಹತ್ಯೆ ಯತ್ನ) ಅಡಿಯಲ್ಲಿ ದೂರು ದಾಖಲಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

Comments are closed.