ಕರ್ನಾಟಕ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಗೆ ಸಿದ್ದಲಿಂಗ ಶ್ರೀಗಳ ಹೆಸರು ನಾಮಕರಣ : ಸಿಎಂ ಎಚ್‍ಡಿ ಕುಮಾರಸ್ವಾಮಿ

Pinterest LinkedIn Tumblr

ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ಆರ್ ಡಿಪಿಆರ್)ಕ್ಕೆ ಶ್ರೀಗಳ ಹೆಸರು ನಾಮಕರಣ ಮಾಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ತೋಂಟದಚಾರ್ಯ ಶ್ರೀಗಳ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ, ಶ್ರೀಗಳ ಅಗಲಿಕೆಯಿಂದ ಆಘಾತ ಉಂಟಾಗಿದೆ. ವೈಯಕ್ತಿಕವಾಗಿ ನಾನು ಒಬ್ಬ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ. ಉತ್ತರ ಕರ್ಣಾಟಕದ ಬಗ್ಗೆ ನನಗೆ ಹಲವಾರು ಹೊಸ ವಿಚಾರಗಳನ್ನು ತಿಳಿಸಿದವರಲ್ಲಿ ಶ್ರೀಗಳು ಪ್ರಮುಖರು. ನಾಡಿಗೆ ಅವರು ಕೊಟ್ಟ ಕೊಡುಗೆ ಅಪಾರ. ಭಕ್ತರು ಗದಗ ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ಸಿದ್ದಲಿಂಗ ಶ್ರೀಗಳ ಹೆಸರು ಇಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಸಂಪುಟದಲ್ಲಿ ಚರ್ಚೆ ನಡೆಸುತ್ತೇನೆ. ಗದಗಿನ ಮಲ್ಲ ಸಮುದ್ರದ ಪಕ್ಕದಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ನಿರ್ಮಾಣವಾಗುತ್ತಿದ್ದು, ಭಕ್ತರ ಮನವಿಯನ್ನು ಸ್ವೀಕರಿಸಿದ್ದೇನೆ ಎಂದರು.

ಶ್ರೀಗಳ ಅಗಲಿಕೆ ಸುದ್ದಿ ಕೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಶ್ರೀಗಳ ಅಗಲಿಕೆಯಿಂದ ಸಮಾಜಕ್ಕೆ ಆಗಿರುವ ನಷ್ಟಕ್ಕಿಂತ ಹೆಚ್ಚು ನನಗೆ ನಷ್ಟ ಆಗಿದೆ. ಅವರು ಕೇವಲ ಉತ್ತರ ಕರ್ಣಾಟಕದ ಸ್ವಾಮೀಜಿ ಅಲ್ಲ. ಇಡೀ ನಾಡಿನ ಶ್ರೀಗಳು. ಅವರ ಕಾರ್ಯಗಳನ್ನು ನಾಗನೂರು ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಾರೆ. ಈ ಕುರಿತ ನಂಬಿಕೆ ನನಗಿದೆ. ಅಲ್ಲದೇ ಇಬ್ಬರ ನಡುವೇ ಅವಿನಾಭಾವ ಸಂಬಂಧ ಇದ್ದು, ನನ್ನ ಮೊದಲ ಗ್ರಾಮ ವಾಸ್ತವ್ಯ ನಾಗನುರು ಮಠದಿಂದಲೇ ಆರಂಭ ಮಾಡಿರುವೆ. ನಾಗನುರು ಶ್ರೀಗಳು ತೋಂಟದಚಾರ್ಯ ಮಠವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿ ಎಂದು ಹಾರೈಸಿದರು.

Comments are closed.