ಕರ್ನಾಟಕ

ಖಾಸಗಿಯವರ ಬಳಿ ಪಡೆದ ಸಾಲ ಮನ್ನಾಕ್ಕೆ ಋಣಮುಕ್ತ ಯೋಜನೆ: ಕುಮಾರಸ್ವಾಮಿ

Pinterest LinkedIn Tumblr


ಮಂಡ್ಯ: ಖಾಸಗಿಯವರ ಬಳಿ ಪಡೆದ ಸಾಲವನ್ನೂ ಮನ್ನಾ ಮಾಡುವ ಸಂಬಂಧ ಋಣಮುಕ್ತ ಯೋಜನೆ ಶೀಫ್ರದಲ್ಲೇ ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಳವಳ್ಳಿಯಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಅವರು, ಕೆಲ ದಿನಗಳಲ್ಲಿ ಯೋಜನೆ ಜಾರಿಗೊಳಿಸುವ ಸಂಬಂಧ ಅಗತ್ಯ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಸರಕಾರ ಉರುಳಲಿದೆ ಎಂಬ ಅನುಮಾನ ಅನಗತ್ಯ. ಮೈತ್ರಿ ಸರಕಾರದಲ್ಲೇ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದೇನೆ. ಸಹಕಾರಿ ಸಂಘಗಳು ರೈತರಿಗೆ 10,300 ಕೊಟಿ ಸಾಲ ಕೊಟ್ಟಿವೆ. ಇದರಲ್ಲಿ 9,700 ಕೋಟಿ ಸಾಲ ಮನ್ನಾ ಮಾಡಿದ್ದೇನೆ. . ಉಳಿದ 600 ಕೋಟಿ ರೂ. ಮನ್ನಾ ಮಾಡಿದರೆ ಸಂಪೂರ್ಣ ಮನ್ನಾ ಮಾಡಿದಂತಾಗುತ್ತದೆ ಎಂದು ಹೇಳಿದರು.

ನ.1ರಿಂದ ಹಿರಿಯ ನಾಗರೀಕರಿಗೆ ಮಾಸಿಕ 600 ರೂ. ಬದಲಾಗಿ 1 ಸಾವಿರ ರೂ. ಪಿಂಚಣಿ ಸಿಗಲಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಮುಂದಿನ ತಿಂಗಳಿನಿಂದಲೇ ಇದು ಜಾರಿಯಾಗಲಿದೆ. ಅಂತೆಯೇ ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಗೆ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಲೋಡ್‌ ಶೆಡ್ಡಿಂಗ್‌ ಕುರಿತು ಹರಿದಾಡಿಡುತ್ತಿರುವ ಸುದ್ದಿಯನ್ನು ಅಲ್ಲಗಳೆದ ಕುಮಾರಸ್ವಾಮಿ, ನಾಡಿನ ಜನರನ್ನು ಕತ್ತಲೆಗೆ ದೂಡುವ ವ್ಯಕ್ತಿ ನಾನಲ್ಲ. ಈ ಬಗ್ಗೆ ತಪ್ಪಾದ ಮಾಹಿತಿ ರವಾನೆಯಾಗುತ್ತಿದೆ ಎಂದ ಅವರು, ಮೈತ್ರಿ ಸರಕಾರ ತರುವ ಯೋಜನೆಗಳು, ಮುಂತಾದ ಜನಪರ ಕಾರ್ಯಕ್ರಮಗಳ ವಿರುದ್ಧ ಬಿಜೆಪಿ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದೆ. 12 ವರ್ಷಗಳ ಹಿಂದೆ ಮೈತ್ರಿ ಸರಕಾರ ಇದ್ದಾಗಲೂ ಈ ಮಟ್ಟಿಗೆ ಅಪಪ್ರಚಾರ ಮಾಡುತ್ತಿರಲಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ನಮಾಜ್‌ಗೆ ಗೌರವ

ಭಾಷಣದ ಆರಂಭದಲ್ಲಿ ನಮಾಜ್ ಶುರು ಆಗುತ್ತಿದ್ದಂತೆ ಭಾಷಣ ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಭಾಷಣದ ಮಧ್ಯೆ ಮಸೀದಿಯಿಂದ ನಮಾಜ್ ಕೇಳಿಸುತ್ತಿದ್ದಂತೆ ಮಾತನ್ನು ನಿಲ್ಲಿಸಿ ಗೌರವ ಸಲ್ಲಿಸಿದರು. ಆ ಬಳಿಕ ಮಹಿಳೆಯೊಬ್ಬರು ಮನವಿ ಕೊಡಲು ಆಗಮಿಸುತ್ತಿದ್ದಂತೆ ಭಾಷಣ ನಿಲ್ಲಿಸಿ ಮನವಿ ಸ್ವೀಕಾರಿಸಿದರು ಮಹಿಳೆಯ ಪತಿ ಸಲೂನ್ ಅಂಗಡಿಗೆ ಮಾಡಿರುವ ಕೈ ಸಾಲದ ಬಗ್ಗೆ ಮನವಿ ಸ್ವೀಕಾರ ಮಾಡಿ, ಪರಿಹಾರದ ವಿಚಾರ ಪ್ರಸ್ತಾಪ ಮಾಡಿದರು.

Comments are closed.