ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಶನಿಕಾಟ ಪ್ರಾರಂಭವಾದಂತೆ ಕಾಣ್ತಿದೆ. ಸರ್ಕಾರ ಯಾವಾಗ ಬೀಳುತ್ತೋ ಅನ್ನೋ ಆತಂಕ ಜೆಡಿಎಸ್ ನಾಯಕರಿಗೆ ತಲೆಬಿಸಿ ತಂದಿಟ್ಟಿದೆ. ಅದರಲ್ಲೂ ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಶಾಸಕರು ನೀಡುತ್ತಿರುವ ದಿನಕ್ಕೊಂದು ಹೇಳಿಕೆಗಳು ಅವರನ್ನು ಇನ್ನಿಲ್ಲದಂತೆ ಕಾಡುತ್ತಿವೆ.
ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು ಪರೋಕ್ಷವಾಗಿ ಸರ್ಕಾರದ ವಿರುದ್ಧ ದಿನಕ್ಕೊಂದು ಹೇಳಿಕೆಗಳನ್ನು ನೀಡ್ತಿದ್ದಾರೆ. ದೋಸ್ತಿ ಪಕ್ಷದ ಶಾಸಕರ ಈ ಹೇಳಿಕೆಗಳೇ ಇದೀಗ ಜೆಡಿಎಸ್ ವರಿಷ್ಠರನ್ನು ನಿದ್ರೆ ಮಾಡದಂತೆ ಮಾಡಿವೆ.
ಕಳೆದ ಮೂರ್ನಾಲ್ಕು ದಿನದ ಹಿಂದೆಯಷ್ಟೇ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ನಮಗೆ ಕೆಲವೊಂದು ಸಮಸ್ಯೆಗಳಾಗುತ್ತಿದ್ದು,ಇದನ್ನು ಬಗೆಹರಿಸಿಕೊಳ್ಳೋಕೆ ನಾವು ಹಲವು ಶಾಸಕರು ಸಭೆ ಸೇರ್ತಿದ್ದೇವೆ ಅಂತ ಹೇಳಿಕೆ ನೀಡಿದ್ದರು. ಇದು ಸಾಕಷ್ಟು ರಾದ್ಧಾಂತಕ್ಕೂ ಕಾರಣವಾಗಿತ್ತು. ಪಕ್ಷದ ಅಧ್ಯಕ್ಷರು ಹೇಳಿಲ್ಲ, ಶಾಸಕಾಂಗಪಕ್ಷದ ನಾಯಕರು ಹೇಳಿಲ್ಲ, ಆದರು ಕಾಂಗ್ರೆಸ್ ಶಾಸಕರು ಸಭೆ ಸೇರೋದು ಅಂದರೆ ಏನು ಎಂಬ ಪ್ರಶ್ನೆಯನ್ನು ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರ ಮುಂದಿಟ್ಟಿದ್ದರು.
ಹೀಗಾಗಿ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿತ್ತು. ಎಲ್ಲವೂ ಸುಖಾಂತ್ಯವಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಎಸ್.ಟಿ.ಸೋಮಶೇಖರ್ ಇವತ್ತು ಮತ್ತೆ ಸಮಾನ ಮನಸ್ಕ ಶಾಸಕರ ಸಭೆಯನ್ನು ನಡೆಸ್ತೇವೆ ಅಂತ ಹೇಳಿಕೆ ಕೊಟ್ಟಿದ್ದಾರೆ.
ಕೈ ಶಾಸಕರ ಈ ಹೇಳಿಕೆ ಜೆಡಿಎಸ್ ನಾಯಕರಿಗೆ ಮತ್ತೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತೊಂದು ಕಡೆ ಇದರ ಹಿಂದೆ ಸಿದ್ದರಾಮಯ್ಯ ಕೈವಾಡ ಇದ್ಯಾ ಅನ್ನೋ ಅನುಮಾನವೂ ಕೂಡ ವ್ಯಕ್ತವಾಗ್ತಿದೆ.
ನಿಗಮ ಮಂಡಳಿಗಳಲ್ಲಿ ನಾವು ಡಮ್ಮಿ ಪೀಸ್ ಆಗಿದ್ದೇವೆ, ಎಲ್ಲವೂ ಸಿಎಂ ಅಣತಿಯಂತೆ ನಡೆಯುತ್ತಿದೆ ಎಂಬ ಅಸಮಾಧಾನ ಕಾಂಗ್ರೆಸ್ ಶಾಸಕರದ್ದು. ಆದರೆ ಪರೋಕ್ಷವಾಗಿ ಕೈ ಶಾಸಕರನ್ನು ಮುಂದೆ ಬಿಟ್ಟು ಆಟವಾಡ್ತಿರೋದು ಮಾಜಿ ಸಿಎಂಸಿದ್ದರಾಮಯ್ಯ ಅನ್ನೋದು ಜೆಡಿಎಸ್ ನಾಯಕರಿಗೂ ಗೊತ್ತಿದೆ. ಹೀಗಾಗಿ ನೀವು ಚಾಪೆ ಕೆಳಗೆ ತೂರಿದ್ರೆ ನಾವು ರಂಗೋಲಿ ಕೆಳಗೆ ನುಗ್ತೇವೆ ಅನ್ನೋ ಮನಸ್ಥಿತಿಗೆ ಬಂದಿದ್ದಾರೆ. ಸಚಿವ ಜಿಟಿಡಿ, ಸಾ.ರಾ.ಮಹೇಶ್ ಮುಂದೆ ಬಿಟ್ಟು ದೇವೇಗೌಡರೂ ಗೇಮ್ ಆಡೋಕೆ ಶುರುಮಾಡಿದ್ದಾರೆ.
ಒಟ್ಟಿನಲ್ಲಿ ಒಂದುಕಡೆ ಸೋಮಶೇಖರ್ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರ ಕೆಡವೋಕೆ ತೆರೆಮರೆಯಲ್ಲೇ ಸಿದ್ಧತೆ ನಡೆಸಿದ್ದಾರೆ. ಸರ್ಕಾರ ಬೀಳಿಸಿ ಪ್ರತಿಪಕ್ಷ ನಾಯಕನಾಗೋಕೆ ರೆಡಿಯಾಗಿದ್ದಾರೆ. ಮತ್ತೊಂದು ಕಡೆ ನಾವೂ ಕಡಿಮೆಯಿಲ್ಲವೆಂದು ಜೆಡಿಎಸ್ ನಾಯಕರೂ ಜಿಟಿಡಿ ಮುಂದೆ ಬಿಟ್ಟು ಸಿದ್ದರಾಮಯ್ಯಗೆ ಗುನ್ನ ಇಡೋಕೆ ನೋಡ್ತಿದ್ದಾರೆ. ಈ ರಾಜಕೀಯ ಮೇಲಾಟದಲ್ಲಿ ಯಾರ ಕೈ ಮೇಲಾಗುತ್ತೆ. ಯಾರ ಕೈ ಕೆಳಗಿಳಿಯುತ್ತೆ ಅನ್ನೋದನ್ನು ಕಾದುನೋಡ್ಬೇಕಿದೆ.
Comments are closed.