ಕರ್ನಾಟಕ

ನಾದಿನಿ ಮೇಲಿನ ಆಸೆಗಾಗಿ ಆಕೆಯ ಪತಿಯನ್ನೇ ಹತ್ಯೆ ಮಾಡಿದ ಟೆಕ್ಕಿ..!

Pinterest LinkedIn Tumblr


ಬೆಂಗಳೂರು: ಹಾಡಹಗಲೇ ರಿಂಗ್‌ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಇರಿದು ಸಾಫ್ಟ್‌ವೇರ್‌ ಎಂಜಿನಿಯರ್‌ ಕೊಲೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಮಹದೇವಪುರ ಪೊಲೀಸರು, ಸುಪಾರಿ ನೀಡಿದ್ದ ಹೈದರಾಬಾದ್‌ ಮೂಲದ ಟೆಕ್ಕಿ ಸೇರಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪತ್ನಿಯ ಸಹೋದರಿಯನ್ನು ತನ್ನವಳನ್ನಾಗಿಸಿಕೊಳ್ಳುವ ದುರುದ್ದೇಶದಿಂದ ಆಕೆಯ ಪತಿಯನ್ನು 15 ಲಕ್ಷ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಹೈದರಾಬಾದ್‌ನ ಸತ್ಯಪ್ರಸಾದ್‌ (41) ಬಂಧಿತ ಪ್ರಮುಖ ಆರೋಪಿ. ಫೆ.3ರಂದು ಬೆಳಗ್ಗೆ 10ರ ಸುಮಾರಿಗೆ ಮಹದೇವಪುರ ರಿಂಗ್‌ ರಸ್ತೆ ಫ್ಲೈಓವರ್‌ ಬಳಿ ಸಾಫ್ಟ್‌ವೇರ್‌ ಉದ್ಯೋಗಿ ಲಕ್ಷ್ಮಣಕುಮಾರ್‌(33) ಎಂಬುವರನ್ನು ಕೊಲೆ ಮಾಡಲಾಗಿತ್ತು.

ಸತ್ಯಪ್ರಸಾದ್‌ನಿಂದ ಸುಪಾರಿ ಪಡೆದಿದ್ದ ಆರೋಪಿಗಳಾದ ಹಳೇ ಬೈಯ್ಯಪ್ಪನಹಳ್ಳಿಯ ಕ್ಯಾಬ್‌ ಚಾಲಕ ಪ್ರಶಾಂತ್‌(20), ಕಗ್ಗದಾಸಪುರದ ಪ್ರೇಮ್‌(31), ಹೊಸಕೋಟೆಯ ದಿನೇಶ್‌(26), ಶಿಡ್ಲಘಟ್ಟದ ಲೋಕೇಶ್‌(28), ಕಗ್ಗದಾಸಪುರದ ಕುಶಾಂತ್‌(30), ಸಂತೋಷ್‌(25), ಮಲ್ಲೇಶಪಾಳ್ಯದ ರವಿ(37) ಮತ್ತು ದಿನೇಶನ ಪತ್ನಿ ಸಯೀದಾ(25) ಬಂಧಿತರು. ಆರೋಪಿಗಳು ಕ್ಯಾಬ್‌ ಚಾಲನೆ ಸೇರಿದಂತೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಇವರಿಂದ ಮಾರಕಾಸ್ತ್ರಗಳು, 3 ಕಾರು, 1 ಸ್ಕೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಕೊಲೆಯಾದ ಟೆಕ್ಕಿ ಲಕ್ಷ್ಮಣ ಕುಮಾರ್‌ ಪತ್ನಿ ಶ್ರೀಜಾಳ ಜೊತೆ ಹೊರಮಾವು ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಪ್ರಮುಖ ಆರೋಪಿ ಸತ್ಯಪ್ರಸಾದ್‌ ಹೈದರಾಬಾದ್‌ನಲ್ಲಿ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾನೆ. ಲಕ್ಷ್ಮಣ ಕುಮಾರ್‌ ಪತ್ನಿ ಶ್ರೀಜಾಳ ಅಕ್ಕನನ್ನು ಸತ್ಯ ವಿವಾಹವಾಗಿದ್ದಾನೆ. ಆದರೆ, ಹಲವು ವರ್ಷಗಳಿಂದ ಶ್ರೀಜಾಳನ್ನು ಇಷ್ಟಪಡುತ್ತಿದ್ದ. ಶ್ರೀಜಾಳನ್ನು ಹೇಗಾದರೂ ಮಾಡಿ ತನ್ನವಳನ್ನಾಗಿಸಿಕೊಳ್ಳಬೇಕು ಎಂದು ಬಯಸಿದ್ದ. ಅದಕ್ಕಾಗಿ ಲಕ್ಷ್ಮಣ ಕುಮಾರನನ್ನು ಕೊಲೆ ಮಾಡಿಸಿದರೆ ಪಾಲಕರು ಮತ್ತು ಅಣ್ಣ, ತಮ್ಮಂದಿರು ಇಲ್ಲದ ಆಕೆ, ತನ್ನ ಮನೆಗೆ ಬಂದು ಇರುತ್ತಾಳೆ ಎಂಬ ದುರಾಲೋಚನೆ ಹೊಂದಿದ್ದ. ಅದಕ್ಕಾಗಿ ಹೈದರಾಬಾದ್‌ನಲ್ಲಿ ನೆಲೆಸಿದ್ದ ಬೆಂಗಳೂರಿನ ದಿನೇಶ್‌ ಎಂಬಾತನ ಮೂಲಕ ಲಕ್ಷ್ಮಣ ಕುಮಾರನ ಕೊಲೆಗೆ ಸಂಚು ರೂಪಿಸಿದ್ದ.

ಲಕ್ಷ್ಮಣ ಕುಮಾರನ ಕೊಲೆ ಮಾಡಿಸಿದರೆ 15 ಲಕ್ಷ ರೂ. ಜೊತೆಗೆ ಹೈದರಾಬಾದ್‌ನಲ್ಲಿ ಒಂದು ಫ್ಲ್ಯಾಟ್‌ ಕೊಡುವುದಾಗಿ ಭರವಸೆ ನೀಡಿ ದಿನೇಶ್‌ ಜೊತೆಗೆ ಡೀಲ್‌ ಕುದುರಿಸಿದ್ದ. ಲಕ್ಷ್ಮಣ ಕುಮಾರನ ಫೋಟೋವನ್ನು ಫೇಸ್‌ಬುಕ್‌ನಿಂದ ಡೌನ್‌ಲೋಡ್‌ ಮಾಡಿ, ಆತನ ಸ್ಕೂಟರ್‌ ನೋಂದಣಿ ಸಂಖ್ಯೆ ಮತ್ತು ವಿಳಾಸ ಸಹಿತ ದಿನೇಶನಿಗೆ ನೀಡಿದ್ದ. ಸತ್ಯನಿಂದ ಒಂದೂವರೆ ಲಕ್ಷ ರೂ. ಮುಂಗಡ ಪಡೆದ ದಿನೇಶ್‌, ಪತ್ನಿ ಸಯೀದಾಳೊಂದಿಗೆ ಬೆಂಗಳೂರಿಗೆ ಬಂದಿದ್ದ.

ಲಾಡ್ಜ್‌ನಲ್ಲಿ ಸ್ಕೆಚ್‌: ದೇವನಹಳ್ಳಿಯಲ್ಲಿರುವ ಲಾಡ್ಜ್‌ನಲ್ಲಿ ಉಳಿದುಕೊಂಡ ದಿನೇಶ್‌, ಸುಪಾರಿ ಕೊಲೆಗೆ ಉಳಿದ ಆರೋಪಿಗಳಿಗೆ ಹಣದ ಆಮಿಷವೊಡ್ಡಿ ಸೇರಿಸಿಕೊಂಡಿದ್ದ. ಜ.30ರಂದು ಸಂಜೆ 6ರಿಂದ 11ರವರೆಗೆ ಲಕ್ಷ್ಮಣ ಮನೆ ಬಳಿ ಕಾಯ್ದ ಆರೋಪಿಗಳಿಗೆ ಆತ ಸಿಕ್ಕಿರಲಿಲ್ಲ. ಹೀಗಾಗಿ, ಮರುದಿನ ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಹೊರಮಾವು ರಸ್ತೆಯಲ್ಲಿ ಸಂಚು ರೂಪಿಸಿ ಕುಳಿತಿದ್ದರೂ ಸಿಕ್ಕಿರಲಿಲ್ಲ. ಆದರೆ, ಫೆ.3ರಂದು ಹೊರಮಾವು ಬಸ್‌ ನಿಲ್ದಾಣದ ಬಳಿ ಕಾರು ಮತ್ತು ಬೈಕ್‌ನಲ್ಲಿ ಲಕ್ಷ್ಮಣ ಬರುವಿಕೆಗೆ ಆರೋಪಿಗಳು ಕಾಯುತ್ತಿದ್ದರು. 9.35ಕ್ಕೆ ಲಕ್ಷ್ಮಣ ಮನೆಯಿಂದ ಕಚೇರಿಗೆ ಸ್ಕೂಟರ್‌ನಲ್ಲಿ ಹೊರಟಿದ್ದರು. ರಿಂಗ್‌ ರಸ್ತೆ ಫ್ಲೈಓವರ್‌ ಬಳಿ ಹಿಂಬಾಲಿಸಿಕೊಂಡು ಹೋಗಿ ಅಡ್ಡ ಹಾಕಿದ್ದ ಆರೋಪಿಗಳು, ಚಾಕು, ಚೂರಿಯಿಂದ ಅಟ್ಟಾಡಿಸಿ ಇರಿದು ಪರಾರಿಯಾಗಿದ್ದರು. ಈ ಸಂಬಂಧ ಲಕ್ಷ್ಮಣನ ಸಹೋದರ ರಾಜಶೇಖರ್‌ ಮಹದೇವಪುರ ಠಾಣೆಗೆ ದೂರು ನೀಡಿದ್ದರು. ಸಿಸಿ ಕ್ಯಾಮೆರಾಗಳು, ಮೊಬೈಲ್‌ಫೋನ್‌ ಟವರ್‌ ಲೊಕೇಷನ್‌ ಆಧರಿಸಿ ಇನ್ಸ್‌ಪೆಕ್ಟರ್‌ ಅಶ್ವತ್ಥ ನಾರಾಯಣಸ್ವಾಮಿ ನೇತೃತ್ವದ ತಂಡ ಕೊಲೆ ಪ್ರಕರಣವನ್ನು ಪತ್ತೆ ಮಾಡಿದೆ.

ಹಿಂದೆಯೂ 2 ಬಾರಿ ಕೊಲೆಗೆ ಯತ್ನ

ಕೆಲ ತಿಂಗಳ ಹಿಂದೆ ಸತ್ಯನಿಂದ 3 ಲಕ್ಷ ರೂ.ಗೆ ಸುಪಾರಿ ಪಡೆದ ದಿನೇಶ್‌, ಬೆಂಗಳೂರಿಗೆ ಬಂದು ತನ್ನ ಚಿಕ್ಕಪ್ಪ ಅಂಥೋಣಿ ಮಾರ್ಕ್ ಮೂಲಕ ಲಕ್ಷ್ಮಣನ ಕೊಲೆ ಮಾಡಿಸಲು ಹಣ ನೀಡಿದ್ದ. ಹಣ ಪಡೆದವರು ಸಂಪರ್ಕಕ್ಕೆ ಸಿಗದೆ ಹೊರಟು ಹೋಗಿದ್ದರು. ಆದಾದ ಬಳಿಕ ಸ್ನೇಹಿತ ಪ್ರದೀಪ್‌ ಎಂಬಾತನ ನೆರವು ಪಡೆದು 2019ರ ಜು.17ರಂದು ಬೆಳಗ್ಗೆ 7ರ ಸುಮಾರಿಗೆ ಲಕ್ಷ್ಮಣ ಕುಮಾರ್‌ ವಾಸವಿದ್ದ ಅಪಾರ್ಟ್‌ಮೆಂಟ್‌ ಬಳಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಆಗ ತಪ್ಪಿಸಿಕೊಂಡಿದ್ದ ಲಕ್ಷ್ಮಣ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಪತ್ತೆಯಾಗಿರಲಿಲ್ಲ ಎಂದು ವೈಟ್‌ಫೀಲ್ಡ್‌ ಡಿಸಿಪಿ ಅನುಚೇತ್‌ ತಿಳಿಸಿದರು.

Comments are closed.