ಮುಂಬೈ

ಮುಂಬೈಯಲ್ಲಿ ರಾಹುಲ್‌ ಗಾಂಧಿಯಿಂದ 2.45 ನಿಮಿಷದ ಪತ್ರಿಕಾಗೋಷ್ಠಿ!

Pinterest LinkedIn Tumblr


ಮುಂಬಯಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಬುಧವಾರ ಮುಂಬಯಿಯಲ್ಲಿ ತನ್ನ ಚೊಚ್ಚಲ ಪತ್ರಿಕಾ ಗೋಷ್ಠಿಯನ್ನು ನಡೆಸಿದರು. ಆದರೆ ಅದು ಕೇವಲ 2 ನಿಮಿಷ 45 ಸೆಕೆಂಡುಗಳಿಗೆ ಸೀಮಿತವಾಯಿತು. ಕುತೂಹಲದಿಂದ ನೆರದಿದ್ದ ನೂರಕ್ಕೂ ಅಧಿಕ ಪತ್ರಕರ್ತರಿಗೆ ತೀವ್ರ ನಿರಾಶೆ ಉಂಟಾಯಿತು.

ಬಾಂದ್ರಾದ ತಾಣವೊಂದರಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ರಾಜ್ಯ ಮತ್ತು ನಗರ ಘಟಕದ ಪದಾಧಿಕಾರಿಗಳು ಮಾಧ್ಯಮ ಮಾಹಿತಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಅನೇಕ ಬಗೆಯ ನಿರ್ಬಂಧಗಳನ್ನು ವಿಧಿಸಲಾಯಿತು.

ಅದಾಗಿ ಒಂದು ತಾಸಿನ ಬಳಿಕ ರಾಹುಲ್‌ ಗೋಷ್ಠಿಗೆ ಆಗಮಿಸಿದರು. ಆರಂಭಿಕ ಪರಿಚಯದ ಬಳಿಕ ಪತ್ರಕರ್ತರು ರಾಹುಲ್‌ಗೆ ಒಂದು ಪ್ರಶ್ನೆಯನ್ನು ಕೇಳಿದರು : 2019ರ ಲೋಕಸಭಾ ಚುನಾವಣೆಗಳಲ್ಲಿ ನೀವು ವಿರೋಧ ಪಕ್ಷಗಳ ಮೈತ್ರಿಕೂಟದ ನಾಯಕತ್ವವನ್ನು ವಹಿಸಲು ಬಯಸುತ್ತೀರಾ ?

ಈ ಪ್ರಶ್ನೆಗೆ ಉತ್ತರ ನೀಡುವ ಬದಲು ರಾಹುಲ್‌ ತಮ್ಮ ಎಂದಿನ ಶೈಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತಾ ಪಾರ್ಟಿ ಮತ್ತು ಆರ್‌ಎಸ್‌ಎಸ್‌ ಬಗ್ಗೆ ಟೀಕಾ ಪ್ರಹಾರ ನಡೆಸಿದರು. ಇದು ಕೂಡ ಕೇವಲ ಎರಡು ನಿಮಿಷದಲ್ಲಿ ಮುಗಿದು ಹೋಯಿತು. ಅನಂತರ ರಾಹುಲ್‌ ದಿಢೀರನೆ ಎದ್ದು ನಿಂತು ಎಲ್ಲರಿಗೂ ಧನ್ಯವಾದ ಹೇಳಿ ತಮ್ಮ ಚೊಚ್ಚಲ ಪತ್ರಿಕಾ ಗೋಷ್ಠಿಯನ್ನು ಇದ್ದಕ್ಕಿದ್ದಂತೆ ಮುಗಿಸಿದರು.

ಅನೇಕ ಪತ್ರಕರ್ತರು ರಾಹುಲ್‌ ಪತ್ರಿಕಾಗೋಷ್ಠಿ ತಾಣವನ್ನು ನಿಗದಿತ ಸಮಯದೊಳಗೆ ತಲುಪಲು ಬೆಳಗ್ಗೆ 6 ಗಂಟೆಗೇ ತಮ್ಮ ಮನೆಯನ್ನು ಬಿಟ್ಟಿದ್ದರು.

ಒಬ್ಬ ಕಾಂಗ್ರೆಸ್‌ ನಾಯಕ ಹೇಳಿದರು : “ರಾಹುಲ್‌ ಜೀ ಅವರಿಗೆ ನಾಗ್ಪುರ ಮತ್ತು ನಾಂದೇಡ್‌ಗೆ ಹೋಗುವುದಕ್ಕೆ ತಡವಾಗುತ್ತಿತ್ತು; ಅವರಿಗೆ ಇತರ ಕಾರ್ಯಕ್ರಮಗಳೂ ಇದ್ದವು’.

ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ಪತ್ರಕರ್ತರಲ್ಲಿ ಕ್ಷಮೆಕೋರಿ ಇದಕ್ಕೆ ಪಿಆರ್‌ ಟೀಮೇ ಕಾರಣ ಎಂದು ದೂರಿದರು.

“ವಿದ್ಯುನ್ಮಾನ ಮಾಧ್ಯಮಕ್ಕೆ ರಾಹುಲ್‌ ಕೆಲವು ಬೈಟ್‌ಗಳನ್ನು ಮಾತ್ರವೇ ಕೊಡುತ್ತಾರೆ ಎಂದು ನಾವು ಮೊದಲೇ ತಿಳಿಸಿದ್ದೆವು; ರಾಹುಲ್‌ ಯಾವುದೇ ಪ್ರಶ್ನೆಗಳನ್ನು ಸ್ವೀಕರಿಸುವುದಿಲ್ಲ ಎಂದು ಮುದ್ರಣ ಮಾಧ್ಯಮದವರಿಗೆ ಸ್ಪಷ್ಟವಾಗಿ ಹೇಳಿದ್ದೆವು. ಕಾರ್ಯಕ್ರಮವು ವೇಳಾ ಪಟ್ಟಿಗೆ ಅನುಗುಣವಾಗಿ ನಡೆದಿದೆ’ ಎಂದು ನಿರುಪಮ್‌ ಮಾತು ಮುಗಿಸಿದರು.

Comments are closed.