ಮುಂಬೈ

: ಮಹಾರಾಷ್ಟ್ರದಲ್ಲಿ ಮಕ್ಕಳ ಕಳ್ಳರೆಂಬ ಶಂಕಿಸಿ ಐವರನ್ನು ಹೊಡೆದು ಸಾಯಿಸಿದ ಗುಂಪು

Pinterest LinkedIn Tumblr


ಮುಂಬಯಿ/ನಾಸಿಕ್‌: ಮಕ್ಕಳ ಕಳ್ಳರ ತಂಡದ ಸದಸ್ಯರೆಂದು ಶಂಕಿಸಿ ಐವರನ್ನು ಸ್ಥಳೀಯರು ಕಲ್ಲು, ದೊಣ್ಣೆಗಳಿಂದ ಬಡಿದು ದಾರುಣ ಘಟನೆ ಮಹಾರಾಷ್ಟ್ರದ ಧುಳೆ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಬುಡಕಟ್ಟು ಸಮುದಾಯ ಪ್ರಾಬಲ್ಯದ ರೈನ್‌ಪಾಡಾ ಎಂಬಲ್ಲಿ ಭಾನುವಾರ ಬೆಳಗ್ಗೆ 11.30ರ ಸುಮಾರಿಗೆ ಘಟನೆ ನಡೆದಿದೆ.

ಘಟನೆಯ ವಿವರ: ಐವರು ವ್ಯಕ್ತಿಗಳು ರಾಜ್ಯ ಸಾರಿಗೆ ಬಸ್ಸಿನಿಂದ ಇಳಿದಿದ್ದಾರೆ. ಇವರ ಪೈಕಿ ಒಬ್ಬ ವ್ಯಕ್ತಿ ಬಾಲಕಿಯನ್ನು ಮಾತನಾಡಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಿ ಭಾನುವಾರದ ಸಂತೆಗೆಂದು ಜಮಾಯಿಸಿದ್ದ ಸ್ಥಳೀಯರು, ಐವರೂ ಶಂಕಿತರನ್ನು ಮಕ್ಕಳ ಕಳ್ಳರೆಂದು ಭಾವಿಸಿ, ಮಾರಣಾಂತಿಕವಾಗಿ ಥಳಿಸಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆಯಲ್ಲಿ ಇಬ್ಬರು ಪೊಲೀಸರೂ ಗಾಯಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.

ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮಕ್ಕಳ ಕಳ್ಳರ ಗುಂಪೊಂದು ಸಕ್ರಿಯವಾಗಿದೆ ಎಂಬ ವದಂತಿ ದಟ್ಟವಾಗಿತ್ತು. ಇದನ್ನು ಆಧರಿಸಿ ಸ್ಥಳೀಯರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಬ್ಬುವ ವದಂತಿಗಳನ್ನು ನಂಬದಂತೆ ಮಹಾರಾಷ್ಟ್ರ ಗೃಹ ಸಚಿವ ದೀಪಕ್‌ ಕೇಸರ್ಕರ್‌ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

Comments are closed.