ಕ್ರೀಡೆ

ಕೊಹ್ಲಿಯಿಂದ ಫೇಸ್‌ಬುಕ್ ಲೈವ್‌ನಲ್ಲೂ ಫಿಟ್ನೆಸ್ ಪಾಠ!

Pinterest LinkedIn Tumblr


ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ತಲ್ಲೀನವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಬಿಡುವಿನ ಸಮಯದಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಭಾಗವಹಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ದೈಹಿಕ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಒತ್ತಿ ಹೇಳಿರುವ ವಿರಾಟ್, ಜನರಿಗೆ ಮೊಬೈಲ್ ಫೋನ್ ಮತ್ತು ಗ್ಯಾಡ್ಜೆಟ್‌ಗಳಲ್ಲಿ ಕಡಿಮೆ ಸಮಯವನ್ನು ಕಳೆಯಲು ಸಲಹೆ ಮಾಡಿದ್ದಾರೆ.

ಇತ್ತೀಚೆಗಿನ ಸಮೀಕ್ಷೆಯ ಪ್ರಕಾರ ದೇಶದಾದ್ಯಂತ ಒಟ್ಟು ಜನಸಂಖ್ಯೆಯ ಕನಿಷ್ಠ 1/3ರಷ್ಟು ಜನರು ಯಾವುದೇ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿಲ್ಲ ಎಂಬುದನ್ನು ಬಹಿರಂಗಪಡಿಸಲಾಯಿತು. ಇದಕ್ಕುತ್ತರವಾಗಿ ಕೊಹ್ಲಿ, “18 ನಗರಗಳಲ್ಲಿ ಸುಮಾರು 3000 ಜನರನ್ನು ನಾವು ಸಮೀಕ್ಷೆ ಮಾಡಿದ್ದೇವೆ. ಇದು ದೊಡ್ಡ ಪ್ರಮಾಣದಲ್ಲಿ ಏನು ನಡೆಯುತ್ತಿದೆ ಎಂಬುದರ ಸಣ್ಣ ಚಿತ್ರವನ್ನು ವರ್ಣಿಸುತ್ತದೆ. ಆ ಜನರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಒಂದು ವರ್ಷದಲ್ಲಿ ಯಾವುದೇ ಚಟುವಟಿಕೆಯನ್ನು ಮಾಡಿಲ್ಲ. ಒಂದು ವೇಳೆ ನಾನು ಸಹ ಹಾಗೆ ಮಾಡಿದ್ದರೆ, ಬಹುಶ: ಎಲ್ಲಿಯೂ ತಲುಪತ್ತಿರಲಿಲ್ಲ” ಎಂದರು.

ಇಂದಿನ ದಿನಗಳಲ್ಲಿ ದೈಹಿಕ ಚಟುವಟಿಕೆಗಳ ಕೊರತೆಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಮಯ ಕಳೆಯುವುದನ್ನು ದೂಷಿಸಿದರು. “ನಾವು ಇಂಟರ್‌ನೆಟ್ ಬ್ರೌಸ್ ಮಾಡುವ ಮೂಲಕ ಇತರರ ಜೀವನವನ್ನು ನೋಡುವುದರಲ್ಲಿ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುತ್ತೇವೆ. ತಂತ್ರಜ್ಞಾನವು ಒಳ್ಳೆಯದು, ಆದರೆ ವಾಸ್ತವದಿಂದ ಜನರನ್ನು ದೂರ ಮಾಡುತ್ತಿದೆ. ಹಿಂದೆಲ್ಲ ವೀಡಿಯೋ ಗೇಮ್‌ಗಾಗಿ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಈಗ ಫೋನ್‌ಗಳ ಮೂಲಕ ನೀವು ಮಲಗಬಹುದು ಆದರೆ ಮತ್ತೆ ಎದ್ದೇಳಬೇಕೆಂದಿಲ್ಲ” ಎಂದು ವಿವರಿಸಿದರು.

ಅದೇ ಹೊತ್ತಿಗೆ ದೈಹಿಕ ಚಟುವಟಿಕೆಗಳನ್ನು ಆರಂಭಿಸಲು ಕಂಫರ್ಟ್ ಜೋನ್‌ಗಾಗಿ ಕಾಯಬಾರದು ಎಂಬುದನ್ನು ಉಲ್ಲೇಖಿಸಿದರು. “ಈಗ ಜನರು ಒಂದು ದಿನ ಆಡುತ್ತಾರೆ. ಆದರೆ ಸಣ್ಣ ಪುಟ್ಟ ನೋವುಂಟಾದರೆ ಬಿಟ್ಟು ಬಿಡುತ್ತಾರೆ. ಆದರೆ ದೈಹಿಕ ವ್ಯಾಯಾಮ ಮುಂದುವರಿಸಿದರೆ, ಜೀವನದಲ್ಲಿ ನಿಮಗೆ ಬೇಕಾದುದನ್ನು ಎಲ್ಲವನ್ನು ಮಾಡಬಹುದು. ಹಾಗಾಗಿ ಕಂಫರ್ಟ್ ಜೋನ್‌ಗಾಗಿ ಕಾಯಬಾರದು” ಎಂದು ವಿವರಿಸಿದರು.

ಮಾತು ಮುಂದುವರಿಸಿದ ಕೊಹ್ಲಿ, “ಕ್ರೀಡೆಗಳಲ್ಲಿ ಆಸಕ್ತಿ ಇದ್ದರೆ, ಅವನು ಅಥವಾ ಅವಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸರಿಯಾದ ಸೌಲಭ್ಯಗಳು ಸಿಗುವ ವರೆಗೂ ಕಾಯಬಾರದು” ಎಂಬುದನ್ನು ಒತ್ತಿ ಹೇಳಿದರು.

“ನಾನು ಬೆಳೆದು ಬಂದಾಗ ನಾನು ಕಾಲೊನಿಯಲ್ಲಿದ್ದೆ. ಸರಿಯಾದ ಕ್ರಿಕೆಟ್ ಮೈದಾನಕ್ಕಾಗಿ ನಾವು ಕಾಯಲಿಲ್ಲ. ಓರ್ವ ವೃತ್ತಿಪರ ಕ್ರೀಡಾಳು ಆಗಿರದ ಹೊರತು ನೀವು ಸರಿಯಾದ ಮೂಲ ಸೌಲಭ್ಯಗಳನ್ನು ನಿರೀಕ್ಷಿಸಬಾರದು” ಎಂದು ನುಡಿದರು.

ಕ್ರೀಡಾ ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಜನರಿಗೆ ಸಂತೋಷವನ್ನುಂಟು ಮಾಡಲಿದೆ ಎಂದವರು ಬೊಟ್ಟು ಮಾಡಿದರು. “ನಾನು ಅನೇಕ ಕ್ರೀಡೆಗಳನ್ನು ಆಡಿದ್ದೇನೆ. ಇವೆಲ್ಲವೂ ಆನಂದದ ವಿಚಾರ. ಇದು ವೃತ್ತಿಯಾಗಬೇಕೆಂದಿಲ್ಲ. ದೈಹಿಕ ಚಟುವಟಿಕೆಗಳ ಮೂಲಕ ನಿಮ್ಮಲ್ಲೇ ಉತ್ತಮ ಭಾವನೆಯುಂಟಾಗಲಿದೆ. ನಿಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಲಿದ್ದು, ಆರೋಗ್ಯವಂತರಾಗುವಿರಿ” ಎಂದು ಹೇಳಿದರು.

Comments are closed.