ಕರಾವಳಿ

ಕೊಲ್ಲೂರು ಸಮೀಪ ಮುದೂರಿನಲ್ಲಿ ಕುರಿಗಳ ತಿಂದು ಕಾಟ ಕೊಡುತ್ತಿದ್ದ ‘ಕರಿ ಚಿರತೆ’ ಸೆರೆ!

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಮುದೂರು ಗ್ರಾಮದ ಸೂಲಬೇರು ಎಂಬಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟ ಬೋನಿಗೆ ಕಪ್ಪು ಚಿರತೆಯೊಂದು ಸಿಕ್ಕಿಬಿದ್ದಿದೆ.

ಕಳೆದ ಹಲವಾರು ದಿನಗಳಿಂದ ಮರ್ಕಡಿ ಜೋಸ್ ಎಂಬವರ ಮನೆಯಲ್ಲಿ ಸಾಕಿದ ಸುಮಾರು 22 ಮೇಕೆಗಳನ್ನು ಹಿಡಿದು ತಿಂದಿದ್ದ ಡೇಂಜರಸ್ ಕರಿ ಚಿರತೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮರ್ಕಡಿ ಜೋಸ್ ದೂರು ನೀಡಿದ್ದರು. ಅದರಂತೆಯೇ ಅಧಿಕಾರಿಗಳು ಜೋಸ್ ಅವರ ಮನೆಯ ಹತ್ತಿರದ ತೋಟದಲ್ಲಿ ಬೋನು ಇಟ್ಟಿದ್ದು ಇದೀಗ ಚಿರತೆ ಸಿಕ್ಕಿಬಿದ್ದಿದೆ. ಕಪ್ಪು ಚಿರತೆಯನ್ನು ಹಿಂದೆಂದು ಈ ಭಾಗದಲ್ಲಿ ನೋಡಿದ ನಿದರ್ಶನಗಳಿಲ್ಲ. ಕಪ್ಪು ಚಿರತೆಯು ಉಳಿದ ಪ್ರಾಣಿಗಳಿಂತ ಅತೀ ವಿರಳ ಹಾಗು ಅತೀ ಕ್ರೂರ ಪ್ರಾಣಿ ಎನ್ನಲಾಗಿದೆ.

ಕುಂದಾಪುರ ವಲಯಾರಣ್ಯಾಧಿಕಾರಿ ಶರತ್ ಶೆಟ್ಟಿ ನೇತ್ರತ್ವದಲ್ಲಿ ಜಡ್ಕಲ್ ಮುದೂರು ವನಪಾಲಕರಾದ ಸಂತೋಷ ಹಾಗು ಸಿಬ್ಬಂದಿಗಳು ಗ್ರಾಮಸ್ಥರ ಸಹಕಾರದಿಂದ ಚಿರತೆಯನ್ನು ಸುರಕ್ಷಿತ ತಾಣಕ್ಕೆ ಕೊಂಡೊಯ್ದರು.

ಇಲಾಖೆಯವರು ಕ್ರಮಕೈಗೊಳ್ಳಿ…..
ಈ ಭಾಗದಲ್ಲಿ ಚಿರತೆ ಹಾಗು ಹುಲಿಗಳ ಕಾಟ ಹೆಚ್ಚಾಗಿದ್ದು ಪ್ರತೀ ದಿನ ಒಬ್ಬೊಬ್ಬರ ಮನೆಯಿಂದ ಹಸು ಮೇಕೆಗಳನ್ನು ಹಿಡಿಯುತ್ತಿದ್ದು ಗ್ರಾಮದಲ್ಲಿ ಭಯದ ವಾತವರಣ ಉಂಟಾಗಿದೆ ಜಡ್ಕಲ್, ಮುದೂರಿನಲ್ಲಿ ಹಸು ಮೇಕೆಗಳನ್ನು ಸಾಕಿಕೊಂಡು ಹೈನುಗಾರಿಕೆಯನ್ನೆ ತಮ್ಮ ಜೀವನೋಪಾಯವಾಗಿ ಬದುಕು ಸಾಗಿಸುವ ಜನರೇ ಹೆಚ್ಚಾಗಿದ್ದು ಚಿರತೆ ಹಾಗು ಹುಲಿಗಳ ಕಾಟದಿಂದ ಕಂಗೆಟ್ಟ ಜನರಿಗೆ ಸೂಕ್ತ ಪರಿಹಾರ ನೀಡಿ ಅಗತ್ಯ ಕ್ರಮವಹಿಸಬೇಕಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದಲ್ಲದೇ ಗ್ರಾಮಸ್ಥರ ಅಪೇಕ್ಷೆಯಂತೆ ಇನ್ನೂ ಮುಂದೆಯು ಈ ಭಾಗದಲ್ಲಿ ಬೋನು ಇಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Comments are closed.