ಕರಾವಳಿ

ಸುರತ್ಕಲ್ ಬಳಿ ತೋಡಿನಲ್ಲಿ ಮೃತದೇಹ ಪತ್ತೆ ಪ್ರಕರಣ : ಕೊಲೆ ಆರೋಪಿಗಳಿಬ್ಬರ ಸೆರೆ

Pinterest LinkedIn Tumblr

ಮಂಗಳೂರು, ಜೂನ್. 06: ಕಳೆದ ಐದು ದಿನಗಳ ಹಿಂದೆ ಸುರತ್ಕಲ್ ಬಳಿಯ ತೋಡಿನಲ್ಲಿ ಎರಡು ತುಂಡು ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮೃತ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮರಿಯಪ್ಪ (45) ಎಂದು ಗುರುತಿಸಲಾಗಿದ್ದು, ಇವರನ್ನು ಹತ್ಯೆಗೈದು ತೋಡಿಗೆ ಎಸೆದ ಆರೋಪಿಗಳಾದ ಬಾಗಲಕೋಟೆ ಹುನುಗುಂದ ತಾಲೂಕಿನ ಗೌಡಪ್ಪ ಗೌಡ ಸಣ್ಣಗೌಡ್ರ (55) ಮತ್ತು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹುಲ್ಲಪ್ಪ ಬಸಪ್ಪಸೂಡಿ (28) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಶನಿವಾರ (ಜೂ. 2) ಬೆಳಿಗ್ಗೆ ಸುರತ್ಕಲ್ ಸಮೀಪದ ಚೊಕ್ಕಬೆಟ್ಟು ಸೇತುವೆ ಅಡಿಭಾಗದ ತೋಡಿನಲ್ಲಿ ಮರಿಯಪ್ಪರ ಮೃತದೇಹದ ಒಂದು ಭಾಗ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದೇ ದಿನ ಮಧ್ಯಾಹ್ನ 2-45 ಗಂಟೆಗೆ ಮೃತ ದೇಹದ ಉಳಿದ ಸೊಂಟದಿಂದ ಕೆಳಗಿನ ಭಾಗವು ತೋಡಿನಲ್ಲಿ ಪತ್ತೆಯಾಗಿತ್ತು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವು ದಾಖಲಾಗಿತ್ತು.

ಸುರತ್ಕಲ್ ಪೊಲೀಸ್ ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡು ಮೃತನ ಸಂಬಂಧಿಕರನ್ನು ಪತ್ತೆ ಮಾಡಿ, ಮೃತ ಮರಿಯಪ್ಪರು ಗೌಡಪ್ಪ ಮತ್ತು ಸಣ್ಣಗೌಡ್ರು ಎಂಬವರ ಜೊತೆ ವಾಸ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದಿದ್ದರು.ಈ ಮಾಹಿತಿಯ ಆಧಾರದ ಮೇಲೆ ಗೌಡಪ್ಪ ಗೌಡ, ಸಣ್ಣಗೌಡ್ರು ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರೋಪಿಗಳ ತೀವ್ರ ವಿಚಾರಣೆ ಸಂದರ್ಭ ಹಣಕಾಸು ವಿಚಾರವಾಗಿ ಆರೋಪಿಗಳು ಮರಿಯಪ್ಪರನ್ನು ಹತ್ಯೆಮಾಡಿ ತೋಡಿಗೆ ಎಸೆದಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಮತ್ತು ಆರೋಪಿಗಳಿಬ್ಬರು ಒಂದೇ ಕೊಠಡಿಯಲ್ಲಿ ವಾಸವಿದ್ದು, ಮೃತ ಮರಿಯಪ್ಪ ಆರೋಪಿ ಸಣ್ಣಗೌಡ್ರ ಬಳಿ ಹಣ ತೆಗೆದಿರಿಸಲು ಕೊಟ್ಟಿದ್ದರು. ಸುಮಾರು ಹತ್ತು ಸಾವಿರದಷ್ಠು ಹಣವನ್ನು ಸಣ್ಣಗೌಡ್ರು ಮರಿಯಪ್ಪರಿಗೆ ನೀಡಬೇಕಾಗಿದ್ದು, ಮರಿಯಪ್ಪರು ಪದೇ ಪದೇ ಹಣ ಹಿಂತಿರುಗಿಸುವಂತೆ ಕೇಳುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರು ಸೇರಿ ಮರಿಯಪ್ಪರವರನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಪ್ರಸ್ತುತ ಆರೋಪಿಗಳಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಪ್ರಭಾರ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ನಾಯಕ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಕೆ.ಜಿ ರಾಮಕೃಷ್ಣ, ಸುರತ್ಕಲ್ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.

Comments are closed.