ಮಂಗಳೂರು,ಆಕ್ಟೋಬರ್.09: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಕ್ಟೋಬರ್ 10ರಿಂದ 20ರ ವರೆಗೆ ನವರಾತ್ರಿ ಉತ್ಸವ ಮತ್ತು ‘ಮಂಗಳೂರು ದಸರಾ’ಮಹೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಲಿದೆ. ಇದೇ ಸಂದರ್ಭದಲ್ಲಿ ಈ ಬಾರಿಯ “ಮಂಗಳೂರು ದಸರಾ” ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ 10,೦೦೦ ಮಂದಿಗೆ “ಆರೋಗ್ಯ ಕಾರ್ಡ್” ವಿತರಿಸುವ ಯೋಜನೆಯನ್ನು ಪರಿಚಯಿಸಲಾಗುತ್ತಿದೆ ಎಂದು ಕುದ್ರೋಳಿ ಕ್ಷೇತ್ರಾಡಳಿತ ಸಮಿತಿಯ ಖಜಾಂಚಿ ಪದ್ಮರಾಜ್ ಆರ್. ( ಅಡ್ವಕೇಟ್) ತಿಳಿಸಿದ್ದಾರೆ.
ಸೋಮವಾರ ಶ್ರೀ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ನವೀಕರಣದ ರೂವಾರಿ ಜನಾರ್ದನ ಪೂಜಾರಿಯವರ ಇಚ್ಛೆಯಂತೆ ಹಾಗೂ ನಿರ್ದೇಶನದಂತೆ ಈ ಬಾರಿ ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಗೋಕರ್ಣನಾಥ ಆರೋಗ್ಯ ಕಾರ್ಡ್, ವಿದ್ಯಾನಿಧಿ ಮತ್ತು ಸಾಮಾಜಿಕ ನಿಧಿ ಬಿಡುಗಡೆಯಾಗಲಿದೆ. ” ಆರೋಗ್ಯಕಾರ್ಡ್” ವಿತರಣೆ ಸಂಬಂಧ ನಗರದ ಎ ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಯುನಿಟಿ ಆಸ್ಪತ್ರ್ತೆ ಜತೆ ಒಪ್ಪಂದ ಮಾಡಲಾಗಿದೆ. ಈ ಅರೋಗ್ಯ ಕಾರ್ಡ್ ಹೊಂದಿದ ಪ್ರತಿಯೊಬ್ಬ ವ್ಯಕ್ತಿಗೂ ಚಿಕಿತ್ಸೆ ಹಾಗೂ ಇತರ ವೆಚ್ಚದಲ್ಲಿ ಶೇ. 25ರಷ್ಟು ರಿಯಾಯಿತಿ ಸಿಗಲಿದೆ. ಈ ಆರೋಗ್ಯಕಾರ್ಡ್ಗೆ ಅ.18 ರಂದು ಚಾಲನೆ ಸಿಗಲಿದ್ದು ಬಿಪಿಎಲ್ ಕಾರ್ಡ್ ಹೊಂದಿರುವ 1000 ಮಂದಿಗೆ ವಿತರಣೆಯಾಗಲಿದೆ ಎಂದರು.
ಮೊದಲ ಹಂತದಲ್ಲಿ1,000 ಬಿಪಿಎಲ್ ಕಾರ್ಡುದಾರರಿಗೆ ಈ ಆರೋಗ್ಯ ಕಾರ್ಡ್ ದೊರೆಯಲಿದೆ. ಶ್ರೀಕ್ಷೇತ್ರವು ಆರೋಗ್ಯ ಕಾರ್ಡ್ಗಾಗಿ ಎ.ಜೆ.ಆಸ್ಪತ್ರೆ ಹಾಗೂ ಯುನಿಟಿ ಆಸ್ಪತ್ರ್ತೆ ಜತೆ ಒಪ್ಪಂದ ಮಾಡಿಕೊಂಡಿದೆ. ಆರೋಗ್ಯ ಕಾರ್ಡ್ ಹೊಂದಿರುವವರು ಹೊರ ರೋಗಿಗಳಾಗಿ ದಾಖಲಾದರೆ ಅವರಿಗೆ ಶೇ.25 ರಷ್ಟು ರಿಯಾಯಿತಿ ದೊರೆಯಲಿದೆ. ಇದರಲ್ಲಿ ಶೇ. 10ನ್ನು ಆಸ್ಪತ್ರೆ ಭರಿಸಿದರೆ, ಉಳಿದ ಶೇ.15ನ್ನು ಶ್ರೀಕ್ಷೇತ್ರದ ವತಿಯಿಂದ ನೀಡಲಾಗುವುದು ಎಂದವರು ವಿವರಿಸಿದರು.
ಕ್ಷೇತ್ರದಲ್ಲಿ ಅ.10 ರಿಂದ ನವರಾತ್ರಿ ಆರಂಭಗೊಳ್ಳಲಿದ್ದು, ಅದೇ ಸಂಧರ್ಭ ಅರೋಗ್ಯಕಾರ್ಡ್ ಗೆ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.. ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ಬಿಪಿಎಲ್ ಪಡಿತರ ಚೀಟಿಯೊಂದಿಗೆ ಅರ್ಜಿ ಪಡೆದು ಕಾರ್ಡ್ ಪಡೆದುಕೊಳ್ಳಬಹುದು. ಸದ್ಯಕ್ಕೆ ಎರಡು ಆಸ್ಪತ್ರೆಗಳ ಜತೆಗೆ ಒಡಂಬಡಿಕೆ ಮಾಡಲಾಗಿದ್ದು,ಒಂದು ವರ್ಷದ ಒಳಗೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳೊಂದಿಗೆ ಈ ಯೋಜನೆಯನ್ನು ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು.ಪದ್ಮರಾಜ್ ಆರ್ ತಿಳಿಸಿದರು.
ಇನ್ನು ವಿದ್ಯಾನಿಧಿ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಜಿಲ್ಲೆಯಲ್ಲಿ ನಡೆದ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ಸಾಮಾಜಿಕ ನಿಧಿಯ ಮೂಲಕ ಪರಿಹಾರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಆಕ್ಟೋಬರ್ 10ರಿಂದ 20ರ ವರೆಗೆ ‘ಮಂಗಳೂರು ದಸರಾ’ಮಹೋತ್ಸವ :
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಕ್ಟೋಬರ್ 10ರಿಂದ 20ರ ವರೆಗೆ ನವರಾತ್ರಿ ಉತ್ಸವ ಮತ್ತು ‘ಮಂಗಳೂರು ದಸರಾ’ಮಹೋತ್ಸವ ಜರಗಲಿದ್ದು, ಅ.10ರಂದು ಬೆಳಗ್ಗೆ 8:30ಕ್ಕೆ ಗುರು ಪ್ರಾರ್ಥನೆಯೊಂದಿಗೆ ನವರಾತ್ರಿ ಮಹೋತ್ಸವ ಪ್ರಾರಂಭಗೊಳ್ಳಲಿದೆ.
ಅಂದು 11:50ಕ್ಕೆ ಮಹಾಗಣಪತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ಪ್ರತಿಷ್ಟಾಪನೆ ನಡೆಯಲಿದೆ. ನವರಾತ್ರಿ ಮಹೋತ್ಸವವನ್ನು ಕರ್ಣಾಟಕ ಬ್ಯಾಂಕ್ನ ಮ್ಯಾನೆಜಿಂಗ್ ಡೈರೆಕ್ಟರ್ ಮಹಾಬಲೇಶ್ವರ ರಾವ್ ಉದ್ಘಾಟಿಸಲಿದ್ದಾರೆ.
ಅಕ್ಟೋಬರ್.14ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಅ.19ರಂದು ದಸರಾ ಮೆರವಣಿಗೆ ನಡೆಯಲಿದೆ ಎಂದು ಪದ್ಮರಾಜ್ ಆಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಕಾರ್ಯದರ್ಶಿ ಮಾಧವ ಸುವರ್ಣ, ಅಭಿವೃದ್ಧಿ ಸಮಿತಿ ಸದಸ್ಯರಾದ ಊರ್ಮಿಳಾ ರಮೇಶ್ ಕುಮಾರ್, ಡಾ.ಬಿ.ಜಿ. ಸುವರ್ಣ, ರಾಧಾಕೃಷ್ಣ, ಡಾ. ಅನಸೂಯಾ, ದೇವೇಂದ್ರ ಪೂಜಾರಿ, ಶೇಖರ ಪೂಜಾರಿ, ಡಿ.ಡಿ. ಕಟ್ಟೆಮಾರ್, ಶೇಖರ ಪೂಜಾರಿ, ಚಿತ್ತರಂಜನ್ ಮುಂತಾದವರು ಉಪಸ್ಥಿತರಿದ್ದರು.
__Sathish Kapikad
Comments are closed.