ಕರಾವಳಿ

ಮಂಗಳೂರು (ರಥಭೀದಿ) ಶಾರದೆ ಮಾತೆಯ ಶೋಭಾಯಾತ್ರೆ ; ಶ್ರೀ ಮಾಹಾಮಾಯಾ ತೀರ್ಥದಲ್ಲಿ ಜಲಸ್ತಂಭನ

Pinterest LinkedIn Tumblr

ಮಂಗಳೂರು, ಆಕ್ಟೋಬರ್.21 : ಮಂಗಳೂರು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಚಾರ್ಯ ಮಠ ವಠಾರ, ಶ್ರೀ ವೆಂಕಟರಮಣ ದೇವಸ್ಥಾನ, ರಥಬೀದಿ, ಇದರ ಅತ್ಯಂತ ಪುರಾತನ ಉತ್ಸವ ಮಂಗಳೂರು ಶಾರದೆ 96ನೇ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಶಾರದಾ ಮಾತೆಯ ಶೋಭಾಯಾತ್ರೆಯು ಶನಿವಾರ ಸಂಜೆ ಬಹಳ ವಿಜೃಂಭಣೆಯಿಂದ ಜರಗಿತು.

ಶನಿವಾರ ರಾತ್ರಿ 8 ಗಂಟೆಗೆ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಶೋಭಾಯಾತ್ರೆಯು ಉತ್ಸವ ಸ್ಥಾನದಿಂದ ಹೊರಟು ಶ್ರೀ ಮಹಾಮ್ಮಾಯಿ ದೇವಸ್ಥಾನ, ಗದ್ದೆಕೇರಿ, ಕೆನರಾ ಹೈಸ್ಕೂಲ್ ಹಿಂಬದಿ ರಸ್ತೆಯಿಂದ ನವಭಾರತ ವೃತ್ತ ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರಾ ಟಾಕೀಸ್, ಬಸವನಗುಡಿ, ಚಾಮರಗಲ್ಲಿ ರಥಬೀದಿಯಾಗಿ ಸಾಗಿ ಕೊನೆಗೆ ಶ್ರೀ ಶಾರದಾ ಮಾತೆಯ ವಿಗ್ರಹ ಶ್ರೀ ಮಾಹಾಮಾಯಾ ತೀರ್ಥದಲ್ಲಿ ವಿಸರ್ಜನೆಗೊಂಡಿತು .

ಮಂಗಳೂರು ಶಾರದೆ ನಡೆದು ಬಂದ ದಾರಿ : 96 ವರ್ಷಗಳ ಇತಿಹಾಸ

ಶಾರದಾ ಉತ್ಸವವು ಸಾರ್ವಜನಿಕವಾಗಿ ಆರಂಭಗೊಂದು ಪ್ರಸ್ತುತ 96ನೇ ವರ್ಷದ ಶಾರದಾ ಉತ್ಸವ ವೈಭವವಾಗಿ ನಡೆಯುತ್ತಿದ್ದು, ಮಂಗಳೂರಿನಲ್ಲಿ ಆರಂಭಗೊಂಡ ಪ್ರಥಮ ಶಾರದಾ ಉತ್ಸವ ಎಂಬ ಖ್ಯಾತಿ ಪಡೆದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಗರದ ಮಹಾಜನರ ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ಅತ್ಯಂತ ಮಹತ್ವ ಪಡೆದಿದ್ದ ಈ ಉತ್ಸವ ಬಳಿಕ ಸಾರ್ವಜನಿಕ ಉತ್ಸವವಾಗಿ ಮೂಡಿಬಂದು ಕರಾವಳಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ಯಾವಾತಳು ಮಲ್ಲಿಗೆಯ ಹೂ, ಚಂದ್ರ, ಮಂಜಿನ ಹನಿ, ಮುತ್ತಿನಮಾಲೆಗಳ ಬಣ್ಣದಂತೆ ಬಿಳುಪಾಗಿರುವಳೋ; ಯಾವಾಕೆ ಸ್ವಚ್ಛವಾದ ವಸ್ತ್ರವನ್ನು ಧರಿಸಿರುವಳೋ; ಯಾವಾಕೆಯ ಹಸ್ತವು ವೀಣೆಯೆನ್ನುವ ವರದಂಡದಿಂದ ಅಲಂಕೃತವಾಗಿರುವುದೋ; ಯಾವಾತಳು ಬಿಳಿಯ ತಾವರೆಯ ಮೇಲೆ ಆರೂಢಳಾಗಿರುವಳೋ; ಯಾವಾಕೆ ಬ್ರಹ್ಮ, ವಿಷ್ಣು, ಮಹೇಶ್ವರರೇ ಮೊದಲಾದ ದೇವಾನುದೇವತೆಗಳಿಂದ ಸದಾ ಪೂಜಿಸಲ್ಪಡುವಳೋ; ಯಾವಾತಳು ಜಡತ್ವವನ್ನು ಶೇಷರಹಿತವನ್ನಾಗಿಸುವಳೋ ಅಂತಹಾ ಭಗವತಿಯಾದ ಸರಸ್ವತಿಯು ನಮ್ಮೆಲ್ಲರನ್ನೂ ಕಾಪಾಡಲಿ. ಇದು ಶಾರದೆಯ ಕುರಿತು ಇರುವ ಶ್ಲೋಕ. ಈ ಶ್ಲೋಕದಂತೆ ನಾನಾ ರೀತಿಯಲ್ಲಿ ಅಲಂಕಾರ ಮಾಡಿ ಪೂಜಿಸಿಕೊಂಡು ಬರುತ್ತಿರುವ ಶಾರದೆ ಎಂದರೆ ಮಂಗಳೂರಿನ ಕಾರ್‍ಸ್ಟ್ರೀಟ್ ಶ್ರೀ ವೆಂಕಟರಮಣ ದೇವಸ್ಥಾನದ ಶಾರದಾ ಮಹೋತ್ಸವ ಕೂಡ ಒಂದು.

ಧಾರ್ಮಿಕ ವಿಧಿ ವಿಧಾನದಂತೆ ವೈವಿಧ್ಯಮಯ ಅಲಂಕಾರ, ಮಂತ್ರ – ತಂತ್ರ, ಆರತಿ, ಅರ್ಚನೆ, ಪುಷ್ಪಾರ್ಚನೆ ಹೀಗೆ ನಾನಾ ರೀತಿಯಲ್ಲಿ ಪೂಜಿಸಿ ಆರಾಧಿಸಿಕೊಂಡು ಬರುತ್ತಿರುವ ಈ ಶಾರದೆಯು `ಮಂಗಳೂರು ಶಾರದಾ ಮಹೋತ್ಸವ’ ಎಂದೇ ಖ್ಯಾತಿ ಪಡೆದಿದೆ. ಈ ಉತ್ಸವ ತುಳುನಾಡಿನ ವೈಶಿಷ್ಟ್ಯ ಪೂರ್ಣ ಆಚರಣೆ ಎಂಬ ಹೆಗ್ಗಳಿಕೆ ಪಡೆದಿದೆ. ಇದೀಗ ಮಂಗಳೂರು ಶಾರದಾ ಮಹೋತ್ಸವಕ್ಕೆ 96ನೇ ವರ್ಷದ ಸಂಭ್ರಮ.

ಮೂಲದೌ ಸ್ಥಾಪಯದ್ದೇ ಶ್ರವಣಾಂತೆ ವಿಸರ್ಜನಂ ಎಂಬಂತೆ ಮೂಲ ನಕ್ಷತ್ರದ ಮೊದಲ ಪಾದದಲ್ಲಿ ಶ್ರೀ ಶಾರದಾ ದೇವಿಯನ್ನು ಪ್ರತಿಷ್ಠಾಪಿಸಿ ಶ್ರಾವಣ ನಕ್ಷತ್ರದ ಅಂತ್ಯಪಾದದಲ್ಲಿ ವಿಸರ್ಜನಾ ಪೂಜೆಯು ಇಲ್ಲಿ ನಡೆಯುತ್ತಿದೆ.

ಮಂಗಳೂರಿನ ದಯಾನಂದ ಆಚಾರ್ಯ ಎಂಬವರು ರಥಬೀದಿಯಲ್ಲಿ ವಿದ್ಯಾಬೋಧಿನಿ ಪಾಠ ಶಾಲೆಯನ್ನು ಆರಂಭಿಸಿ ವೇದಾಧ್ಯಯನ ಮತ್ತು ಸಂಸ್ಕøತ ಶಿಕ್ಷಣವನ್ನು ಕಲಿಸುತ್ತಿದ್ದರು. ಇದೇ ಸಮಯದಲ್ಲಿ ಆಚಾರ್ಯ ಅವರು ವಿದ್ಯಾರ್ಥಿಗಳಿಗಾಗಿ ಪುಸ್ತಕ ಪೂಜೆಯನ್ನು ಆರಂಭಿಸುವ ಮೂಲಕ 1905ರಲ್ಲಿ ಮೊದಲ ಬಾರಿಗೆ ಶಾರದಾ ಪೂಜೆಯನ್ನು ಆರಂಭಿಸಿದರು ಎಂಬ ಪ್ರತೀತಿ ಇದೆ. ಆನಂತರದ ದಿನಗಳಲ್ಲಿ ಅಂದರೆ 1922ರಲ್ಲಿ ಶಾರದಾದೇವಿಯ ಉತ್ಸವವು ಆಚಾರ್ಯ ವಸಂತ ಮಂಟಪದಲ್ಲಿ ಸಾರ್ವಜನಿಕ ಸಮಿತಿಯೊಂದಿಗೆ ವಿಜೃಂಭಣೆಯಿಂದ ಆಚರಣೆಗೆ ಬಂತು.

ಉತ್ಸವವು ಸಾರ್ವಜನಿಕವಾಗಿ ಆರಂಭಗೊಂದು ಪ್ರಸ್ತುತ 96ನೇ ವರ್ಷದ ಶಾರದಾ ಉತ್ಸವ ವೈಭವವಾಗಿ ನಡೆಯುತ್ತಿದ್ದು, ಮಂಗಳೂರಿನಲ್ಲಿ ಆರಂಭಗೊಂಡ ಪ್ರಥಮ ಶಾರದಾ ಉತ್ಸವ ಎಂಬ ಖ್ಯಾತಿ ಪಡೆದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಗರದ ಮಹಾಜನರ ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ಅತ್ಯಂತ ಮಹತ್ವ ಪಡೆದಿದ್ದ ಈ ಉತ್ಸವ ಬಳಿಕ ಸಾರ್ವಜನಿಕ ಉತ್ಸವವಾಗಿ ಮೂಡಿಬಂದು ಕರಾವಳಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ಇಲ್ಲಿನ ಶಾರದಾ ಉತ್ಸವಕ್ಕೆ ಶತಮಾನದ ಇತಿಹಾಸವಿದ್ದರೂ ಆರಂಭದ ಆಚರಣೆಗೆ ಸಾಕಷ್ಟು ದಾಖಲೆಗಳು ಲಭ್ಯವಾಗುತ್ತಿಲ್ಲ. ಆದರೆ ಜನರ ಜೀವನ ಮಟ್ಟ ಸುಧಾರಿಸಿದಂತೆ ಉತ್ಸವ ಹೆಚ್ಚು ಹೆಚ್ಚು ವೈಭವಯುತವಾಗಿ ನಡೆಯಲು ಆರಂಭವಾಯಿತು. ಬಳಿಕ ನಡೆದ ಎಲ್ಲ ಶಾರದಾ ಮಹೋತ್ಸವಗಳ ಬಗ್ಗೆ ಇಂದು ದೇವಸ್ಥಾನದ ಆಡಳಿತ ಸಮಿತಿಯ ಹಿರಿಯರು ತಮ್ಮ ಹಿಂದಿನ ಉತ್ಸವಗಳ ಸವಿನೆನಪನ್ನು ಮೆಲುಕು ಹಾಕುತ್ತಾರೆ.

ಮೂಲ ನಕ್ಷತ್ರದ ಮೊದಲ ಪಾದದಲ್ಲಿ ಪ್ರತಿಷ್ಠಾಪನೆಗೊಳ್ಳುವ ಶಾರದಾ ದೇವಿಯನ್ನು ಪ್ರತಿದಿನ ಲಲಿತೋಪಾಖ್ಯಾನದಲ್ಲಿ ಬಿಂಬಿಸಿರುವ ಅವತಾರಗಳಲ್ಲಿ ಅಲಂಕರಿಸಲಾಗುತ್ತಿದೆ. ಮೊದಲು ವೀಣಾಪಾಣಿಯಾದ ಶಾರದೆಯು ಬಳಿಕ ಕೈಯಲ್ಲಿ ಗಧೆ, ತ್ರಿಶೂಲ, ವಿವಿಧ ಆಯುಧಗಳನ್ನು ಹಿಡಿದು ಸಿಂಹವಾಹಿನಿಯಾಗುತ್ತಾಳೆ. ಕೈಯಲ್ಲಿ ರಾಕ್ಷಸ ಶಿರವನ್ನು ಹಿಡಿದು, ಕೆನ್ನಾಲಿಗೆಯನ್ನು ಚಾಚಿ ಮಹಾಕಾಳಿಯಾಗುತ್ತಾಳೆ. ಶಂಖ, ಗದಾಹಸ್ತ, ಪದ್ಮಾಸನ ಹಾಕಿದ ಮಹಾಲಕ್ಷ್ಮಿಯಾಗುತ್ತಾಳೆ. ಮಲ್ಲಿಗೆ ಜಡೆಯೊಂದಿಗೆ ಸರ್ವಾಭರಣ ಭೂಷಿತಳಾಗಿ ಸಾಕ್ಷಾತ್ ದೇವಿಯಂತೆ ಶೋಭಿಸಿ ಭಕ್ತರಿಗೆ ಭಾವುಕತೆ ಹಾಗೂ ಸಂತೋಷದ ಮೆರುಗನ್ನು ನೀಡುವ ವೈಶಿಷ್ಟ್ಯವನ್ನು ಕಾಣಬಹುದು.

ಈ ಶಾರದಾ ಉತ್ಸವದ ಮತ್ತೊಂದು ವಿಶೇಷವೆಂದರೆ ಶಾರದೆಯ ಒಂದೇ ಮೂರ್ತಿಗೆ ನಾನಾ ಬಗೆಯ ಅಲಂಕಾರವನ್ನು ಮಾಡಲಾಗುತ್ತದೆ. ನವರಾತ್ರಿ ಉತ್ಸವ ಹತ್ತುದಿನ ಆಚರಿಸಲ್ಪಟ್ಟರೆ ಇಲ್ಲಿನ ಶಾರದೆಯನ್ನು ಮಹಾಕಾಳಿಯಾಗಿ ಅಲಂಕರಿಸಲಾಗುತ್ತಿದೆ. ಅತ್ಯಂತ ಆಕರ್ಷಕವಾಗಿ ಇಡೀ ಮೂರ್ತಿಯ ಸ್ವರೂಪವನ್ನೇ ಬದಲಾಯಿಸಲಾಗುತ್ತದೆ. ಭಕ್ತರಿಗೆ ಭಾವುಕತೆ ಹಾಗೂ ಸಂತೋಷದ ಮೆರುಗನ್ನು ನೀಡುವ ಅಪರೂಪದ ವೈಶಿಷ್ಟ್ಯವನ್ನು ಇಲ್ಲಿ ಕಾಣಬಹುದಾಗಿದೆ.

ಮಂಗಳೂರು ಶಾರದೆಯ ಮತ್ತೊಂದು ವೈಶಿಷ್ಟ್ಯವೆಂದರೆ ಶಾರದಾ ಮಾತೆಯ ಶೋಭಾಯಾತ್ರೆ. ಶ್ರೀದೇವಿಯ ಉತ್ಸವ ಸ್ಥಾನದಿಂದ ಹೊರಟು ಶ್ರೀ ವೆಂಟಕರಮಣ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಪುಷ್ಪದಿಂದ ಅಲಂಕೃತಗೊಂಡ ಲಾಲಕಿಯಲ್ಲಿ ಆಸೀನಳಾಗಿ, ಭಕ್ತರು ಆ ಲಾಲಕಿಯನ್ನು ತಮ್ಮ ಭುಜದಲ್ಲಿರಿಸಿ ಶೋಭಾಯಾತ್ರೆಯ ಉದ್ದಕ್ಕೂ ಕೊಂಡೊಯ್ಯುವ ದೃಶ್ಯ ಅತ್ಯಂತ ಮನೋಹರ.

ಲಾಲಕಿಯಲ್ಲಿ ವೀರಾಜಮಾನವಾಗಿರುವ ಶಾರದೆಯನ್ನು ವೀಕ್ಷಿಸಲು ಶೋಭಾಯಾತ್ರೆ ಸಾಗುವ ಬೀದಿಗಳ ಇಕ್ಕೆಲಗಳಲ್ಲೂ ಸಹಸ್ರಾರು ಭಕ್ತಾದಿಗಳು ನೆರೆದಿರುತ್ತಾರೆ. ಆಕರ್ಷಕ ಸುಡುಮದ್ದು ಪ್ರದರ್ಶನ, ವಿವಿಧ ಟ್ಯಾಬ್ಲೋಗಳು, ವಾದ್ಯವೃಂದ, ಹುಲಿವೇಷ ಕುಣಿತ ಮೆರವಣಿಗೆಗೆ ಮತ್ತಷ್ಟು ರಂಗು ತಂದುಕೊಡುತ್ತದೆ. ಮಂಗಳೂರು ಶಾರದೆಯ ಆಕರ್ಷಣೆಯೇ ಹುಲಿವೇಷ. ಇಲ್ಲಿ ವೇಷ ಹಾಕಿದ ತಂಡಗಳಿಗೆ ವಿಶೇಷ ಮರ್ಯಾದೆ ನೀಡುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಹುಲಿವೇಷಧಾರಿಗಳು ಧಾರ್ಮಿಕ ಕಟ್ಟುಪಾಡುಗಳಲ್ಲಿ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ಸೇವಾ ರೂಪದಲ್ಲಿ ನವರಾತ್ರಿಯ ಸಂದರ್ಭದಲ್ಲಿ ವೇಷಧಾರಿಗಳು ರಸ್ತೆಯ ಉದ್ದಗಲಕ್ಕೂ ಕಾಣ ಸಿಗುತ್ತಾರೆ. ವೇಷಧಾರಿಗಳು ತಾವು ತೊಡುವ ವೇಷ ಹರಕೆಯ ರೂಪದಲ್ಲೂ ಇರುತ್ತದೆ. `ನಿನ್ನ ಸೇವೆ ಮಾಡುವೆ’ ಎಂದು ಹರಕೆ ಹೊತ್ತು ಶ್ರೀ ಮಾತೆಯ ಚರಣಗಳಿಗೆ ಸಮರ್ಪಿಸಿ ವೇಷಧಾರಿಗಳು ಪುನೀತರಾಗುತ್ತಾರೆ.

ಅಬಾಲ ವೃದ್ಧರು, ಸ್ತ್ರೀ-ಪುರುಷರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಉತ್ಸಾಹಿ ತರುಣರಿಂದ ಶ್ರೀದೇವಿಯ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ದಾರಿಯುದ್ದಕ್ಕೂ ಭುಜ ಸೇವೆಯ ಮೂಲಕ ಸಾಗುವ ಶೋಭಾಯಾತ್ರೆ ಇದಾಗಿದ್ದು, ಈ ಭವ್ಯ ಶೋಭಾಯಾತ್ರೆ ಹಾಗೂ ಶಾರದಾ ಮಾತೆಯನ್ನು ನೋಡಲು ಸಹಸ್ರಾರು ಜನರು ದೇಶ ವಿದೇಶಗಳಿಂದ ಬಂದು ಪಾಲ್ಗೊಂಡು ಕೃತಾರ್ಥರಾಗುತ್ತಾರೆ.

ಶ್ರೀ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿದವು.

ಚಿತ್ರಗಳು : ಮಂಜು ನೀರೇಶ್ವಾಲ್ಯ

Comments are closed.