ಕರಾವಳಿ

ಪ್ರಕಾಶ್ ಶೆಟ್ಟಿ ಬಂಟ ಸಮಾಜದ ಜತೆಗೆ ಇತರ ಸಮಾಜದವರನ್ನು ಪ್ರೀತಿಸುವ ವ್ಯಕ್ತಿ: `ಪ್ರಕಾಶಾಭಿನಂದನೆ’ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಅಮರನಾಥ ಶೆಟ್ಟಿ

Pinterest LinkedIn Tumblr

ಮಂಗಳೂರು, ಡಿಸೆಂಬರ್.05 : ಬಂಟ ಸಮಾಜದ ಜತೆಗೆ ಇತರ ಸಮಾಜದವರನ್ನೂ ಪ್ರೀತಿಸುವ ಕೆ.ಪ್ರಕಾಶ್ ಶೆಟ್ಟಿ ಅವರ ಹೃದಯ ಶ್ರೀಮಂತಿಕೆಯಿಂದ ಅವರು ಬಂಟ ಸಮಾಜದಲ್ಲಿ ಮೇಲ್ಪಂಕ್ತಿಯ ನಾಯಕರಾಗಿ ಗುರುತಿಸಿದ್ದಾರೆ. ತಾನು ಮಾಡುವ ಸಮಾಜ ಮುಖಿ ಕೆಲಸ ಕಾರ್ಯಕ್ಕೆ ಪ್ರಚಾರ ಬಯಸದೆ ಇರುವ ಅವರು ದಿ. ಸುಂದರ ರಾಮ ಶೆಟ್ಟಿ, ವಿನಯ ಹೆಗ್ಡೆಯವರಂತೆ ಸಮಾಜದಲ್ಲಿ ಗೌರವದ ಸ್ಥಾನಮಾನವನ್ನು ಪಡೆದಿದ್ದಾರೆ ಎಂದು ಮಾಜೀ ಸಚಿವ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜೀ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ತಿಳಿಸಿದರು.

ಡಿ. 25ರಂದು ಬಂಗ್ರ ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್‌ ಮೈದಾನದಲ್ಲಿ ನಡೆಯುವ ಪ್ರಕಾಶಾಭಿನಂದನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಂಗಳೂರಿನ ಸಾಯಿ ಪ್ಯಾಲೇಸ್ ಹೊಟೇಲ್‌ನ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಮಾಜದ ಮೇಲೆ ಅವರಿಗಿರುವ ಕಾಳಜಿ ಮತ್ತು ಪ್ರೀತಿಯಿಂದ ಅನೇಕ ಬಂಟರ ಭವನಗಳಿಗೆ ಪ್ರಕಾಶ್ ತನ್ನಿಂದಾದ ಸಹಾಯ ಮಾಡಿದ್ದಾರೆ. ಇದು ಅವರಿಗೆ ಸಮಾಜದ ಮೇಲೆ ಇರುವ ಗೌರವ ಮತ್ತು ಕಾಳಜಿಯನ್ನು ತೋರಿಸುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಕಾಶಾಭಿನಂದನೆ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಪ್ರಕಾಶಾಭಿನಂದನೆ ಯಲ್ಲಿ ನಡೆಯುವುದು ವ್ಯಕ್ತಿ ಪೂಜೆ ಅಲ್ಲ, ಅದು ವ್ಯಕ್ತಿತ್ವದ ಪೂಜೆ. ಪ್ರಕಾಶ್ ಶೆಟ್ಟಿ ಸಮಾಜಕ್ಕೊಂದು ಆದರ್ಶ. ಅವರು ಮಾಡಿದ ಕೆಲಸಗಳು ಇತರರಿಗೆ ಸ್ಫೂರ್ತಿ ತುಂಬುವಂತದ್ದು, ಈ ನಿಟ್ಟಿನಲ್ಲಿ ಅವರನ್ನು ಗೌರವಿಸುವ ಸಂದರ್ಭದಲ್ಲಿ ಇಡೀ ಸಮಾಜ ಒಟ್ಟಾಗಬೇಕು. ಪ್ರಕಾಶ್ ಶೆಟ್ಟಿ ತನ್ನ ೬೦ ವರ್ಷಗಳ ಸಾರ್ಥಕ ಬದುಕಿನಲ್ಲಿ ಏಳು ಬೀಳುಗಳನ್ನು ಕಂಡಿದ್ದಾರೆ. ಇಂದು ಅವರು ಯಶಸ್ವಿ ಉದ್ಯಮಿಯಾಗಿ, ಸಮಾಜದಲ್ಲೊಬ್ಬ ಶ್ರೇಷ್ಠ ನಾಯಕರಾಗಿ ಮೂಡಿಬಂದಿದ್ದಾರೆ. ಪ್ರಕಾಶಾಭಿನಂದನೆಯಲ್ಲಿ 60 ಅಶಕ್ತರಿಗೆ ಆರ್ಥಿಕ ನೆರವು, 60 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಹಾಗೂ 18 ಮಂದಿ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು.

ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಮಿತಿಯ ಸಂಚಾಲಕ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ಮಾತನಾಡಿ ಮೂರು ತಿಂಗಳ ಹಿಂದೆ ಕಾರ್ಯ ರೂಪಕ್ಕೆ ಬಂದ ಪ್ರಕಾಶಾಭಿನಂದನೆ ಕಾರ್ಯಕ್ರಮದ ಕುರಿತು ಈಗಾಗಲೇ 50ಕ್ಕೂ ಮಿಕ್ಕಿದ ಸಭೆಗಳನ್ನು ಆಯೋಜಿಸಲಾಗಿದೆ. ಮುಂಬಯಿ, ಬೆಂಗಳೂರು ಸಹಿತ ಕರಾವಳಿ ಜಿಲ್ಲೆಯ ಎಲ್ಲಾ ಬಂಟರ ಸಂಘಗಳಲ್ಲೂ ಸಭೆಗಳನ್ನು ಆಯೋಜಿಸಿ ವಿವಿಧ ಸಮಿತಿ ಗಳನ್ನು ರಚಿಸಲಾಗಿದೆ. ಪ್ರಾಕಾಶಾಭಿನಂದನೆ ಆಡಂಬರದ ಕಾರ್ಯಕ್ರಮ ಅಲ್ಲ. ಸಮಾಜ ದವರನ್ನು ಒಟ್ಟು ಸೇರಿಸಿ ಸಮಾಜಕ್ಕೊಂದು ಸಂದೇಶ ಸಾರುವ ಕಾರ್ಯಕ್ರಮ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಕೆ ಪ್ರಕಾಶ್ ಶೆಟ್ಟಿ ಅವರು ಬಂಟ ಸಮಾಜಕ್ಕೆ ನೀಡಿದ ಕೊಡುಗೆ ಬಹಳಷ್ಟಿದೆ. ಹೀಗಾಗಿ ಸಮಾಜ ಭಾಂದವರೆಲ್ಲ ಅವರನ್ನು ಗೌರವಿಸುವ ಪ್ರಕಾಶಾಭಿನಂದನೆ ಯಲ್ಲಿ ಪಾಲ್ಗೊಳ್ಳುವ ಮೂಲಕ ಋಣ ಸಂದಾಯ ಮಾಡುವ ಅಗತ್ಯವಿದೆ. ಪ್ರಕಾಶಾಭಿನಂದನೆಯ ಮೂಲಕ ಸಮಸ್ತ ಬಂಟರು ಒಗ್ಗಟ್ಟಾಗಿ ಮುಂದೆ ಸಾಗುವ ಅಗತ್ಯ ಇದೆ ಎಂದವರು ತಿಳಿಸಿದರು.

ಇನ್ನೊರ್ವ ಮುಖ್ಯ ಅತಿಥಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ ಪ್ರಕಾಶ್ ಶೆಟ್ಟಿ ಓರ್ವ ಉದ್ಯಮಿಯಾಗಿದ್ದು ಕೊಂಡು ಸಮಾಜದ ಮೇಲೆ ಕಾಳಜಿಯಿಂದ ಕೆಲಸ ಮಾಡಿದ್ದಾರೆ. ಪ್ರಕಾಶ್ ಅವರು ದೊಡ್ಡ ಸಾಧನೆಯ ಮೂಲಕ ಸಾರ್ಥಕ ಬದುಕು ಕಂಡವರು. ಹೀಗಾಗಿ ಯೋಗ್ಯ ವ್ಯಕ್ತಿಗೆ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಸಮಾಜದಲ್ಲಿರುವ ಇತರ ಗಣ್ಯರಿಗೂ ಈ ಕಾರ್ಯಕ್ರಮ ಸ್ಪೂರ್ತಿಯಾಗಲಿ ಎಂದರು.

ಸಮಿತಿಯ ಉಪಾಧ್ಯಕ್ಷ ಸುರತ್ಕಲ್ ಬಂಟರ ಸಂಘದ ಮಾಜೀ ಅಧ್ಯಕ್ಷ ಎಂ. ದೇವಾನಂದ ಶೆಟ್ಟಿ ಮಾತನಾಡಿ ಅಂದು ಬಂಟ ಸಮಾಜದಲ್ಲಿ ಸುಂದರ ರಾಮ್ ಶೆಟ್ಟಿ ಮೇರು ವ್ಯಕ್ತಿಯಾಗಿದ್ದರೆ, ಇಂದು ಕೆ. ಪ್ರಕಾಶ್ ಶೆಟ್ಟಿ ಸಮಾಜದ ಕಣ್ಮಣಿಯಾಗಿದ್ದಾರೆ ಎಂದರು.

ಸಮಾರಂಭದಲ್ಲಿ ವಿವಿಧ ಸಮಿತಿಯ ಪದಾಧಿಕಾರಿಗಳಾದ ಎಂ. ಸುರೇಶ್ಚಂದ್ರ ಶೆಟ್ಟಿ, ಮನೋಹರ ಶೆಟ್ಟಿ, ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಕೋಶಾಧಿಕಾರಿ ಸುರೇಶ್ ಶೆಟ್ಟಿ ಪಡುಬಿದ್ರೆ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.

Comments are closed.