ಮಂಗಳೂರು ಎಪ್ರಿಲ್ 1 : ಜಲಶಕ್ತಿ ಅಭಿಯಾನದಡಿ ಮುಂದಿನ 100 ದಿನಗಳಲ್ಲಿ ಪ್ರತಿ ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆ ಮಾಡಲು ಅಗತ್ಯ ಸಿದ್ಧತೆ ಆಗಬೇಕು ಎಂದು ಜಿಲ್ಲಾ ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಗ್ರ ಕೆರೆಗಳ ಅಭಿವೃದ್ಧಿಯಡಿಯಲ್ಲಿ ಯಾವೆಲ್ಲ ಕೆರೆಗಳನ್ನು ದುರಸ್ಥಿಗೊಳಿಸಬೇಕು ಮತ್ತು ಹೂಳೆತ್ತಬೇಕು ಎಂಬುದನ್ನು ಸಮೀಕ್ಷೆ ಮಾಡಿ ಅಂತಹ ಕೆರೆಗಳನ್ನು ಅವಶ್ಯಕವಾಗಿ ತೆಗೆದುಕೊಳ್ಳಬೇಕು ಎಂದ ಅವರು ಒಂದು ಗ್ರಾಮ ಪಂಚಾಯತ್ನಲ್ಲಿ ಕನಿಷ್ಠ 1 ಅಥವಾ 2 ಹೊಸ ಕೆರೆಯ ನಿರ್ಮಾಣ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡುವುದರ ಜೊತೆಗೆ ಜಲಮೂಲಗಳಿಗೆ ಸಂಬಂಧಿಸಿದ ಅತಿಕ್ರಮಣವನ್ನು ತೆರವುಗೊಳಿಸಿ ಪುನಶ್ಚೇತನಗೊಳಿಸಬೇಕು ಎಂದರು.
ಗ್ರಾಮ ಪಂಚಾಯತ್ಗಳ ವ್ಯಾಪ್ತಿಯ ಮನೆಗಳಿಗೆ ಬಚ್ಚಲುಗುಂಡಿಗಳ ನಿರ್ಮಾಣ ಕಾಮಗಾರಿ ಮಾಡಬೇಕಾಗಿದೆ ಎಂದ ಅವರು ಈವರೆಗೆ ಬಚ್ಚಲು ಗುಂಡಿ ನಿರ್ಮಾಣ ಆಗದೇ ಇರುವ ಮನೆಗಳನ್ನು ಸಮೀಕ್ಷೆ ಮಾಡಿ ಜಲಶಕ್ತಿ ಅಭಿಯಾನದಲ್ಲಿ ಹಾಗೂ ನರೇಗಾ ಯೋಜನೆಯಡಿಯಲ್ಲಿ ಕೈಗೊಳ್ಳಬೇಕು ಎಂದರು.
ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಬರುವ ಅಸ್ಥಿತ್ವದಲ್ಲಿರುವ ಕೊಳವೆಬಾವಿಗಳು ಎಲ್ಲೆಲ್ಲಿ ಇದೆ ಎಂದು ಸಮೀಕ್ಷೆ ಮಾಡಿ ಮರುಪೂರ್ಣಗೊಳಿಸುವ ಮಾಡುವ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಘಟಕಗಳನ್ನು ನಿರ್ಮಿಸಬೇಕು
ಎಂದ ಅವರು ಗ್ರಾಮೀಣ ಭಾಗದ ವಸತಿನಿಲಯಗಳು, ಶಾಲೆಗಳು, ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಇನ್ನಿತರ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಘಕಟವನ್ನು ಗ್ರಾಮ ಪಂಚಾಯತ್ ಮೂಲಕ ನಿರ್ಮಾಣ ಮಾಡಬೇಕು ಎಂದರು.
ಅರಣ್ಯೀಕರಣ ಯೋಜನೆಯಡಿಯಲ್ಲಿ ರಸ್ತೆಗಳ ಬದಿಗಳಲ್ಲಿ ಗಿಡ ಮರಗಳನ್ನು ನೆಡಬೇಕು, ಕೆರೆ ಬದಿ, ಶಾಲೆ, ಅಂಗನವಾಡಿ, ವಸತಿ ನಿಲಯ, ರೈತರ ಜಮೀನು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಸರ್ಕಾರಿ ಸಂಸ್ಥೆಯ ಕಟ್ಟಡದ ಆವರಣದಲ್ಲಿ ಕೈತೋಟಗಳನ್ನು ನಿರ್ಮಾಣ ಮಾಡಬೇಕು ಎಂದರು.
ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಕಂಪೌಂಡ್ ನಿರ್ಮಾಣ ಕಾರ್ಯ ಗ್ರಾಮ ಪಂಚಾಯತ್ ವತಿಯಿಂದ ಆಗಬೇಕು ಎಂದರು
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ. ಆನಂದ್ ಕುಮಾರ್ ಹಾಗೂ ಮತ್ತಿತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.