ಕುಂದಾಪುರ: ಹೊಳೆಯಲ್ಲಿ ಮೀನು ಹಿಡಿಯಲೆಂದು ಹೋಗಿ ಸೆ.16 ಗುರುವಾರ ಸಂಜೆಯಿಂದ ನಾಪತ್ತೆಯಾದ ಮೀನುಗಾರನ ಶೋಧ ಕಾರ್ಯ ಮುಂದುವರಿದೆ. ಗಂಗೊಳ್ಳಿ ಬಂದರು ಸಮೀಪ ನಿನ್ನೆ ಸಂಜೆ ಈ ಘಟನೆ ನಡೆದಿದ್ದು ಇಂದಿನ ಮುಸ್ಸಂಜೆ ತನಕ ಹುಡುಕಾಟ ನಡೆಸಲಾಯಿತು.
ಗಂಗೊಳ್ಳಿ ಮಲ್ಯರಬೆಟ್ಟು ನಿವಾಸಿ ದೇವೇಂದ್ರ ಖಾರ್ವಿ @ರವಿ (35) ನಾಪತ್ತೆಯಾದ ಮೀನುಗಾರ.
ಘಟನೆ ವಿವರ:
ಗುರುವಾರ ಸಂಜೆ 6.30 ಕ್ಕೆ ಮನೆಯಿಂದ ಮೀನುಗಾರಿಕೆಗೆ ತೆರಳಿದ ದೇವೇಂದ್ರ ಅವರು ರಾತ್ರಿ 9 ಗಂಟೆಯಾದರೂ ವಾಪಾಸ್ ಮರಳಿ ಬಂದಿರಲಿಲ್ಲ. ರಾತ್ರಿ ಮನೆಯವರು ಕರೆ ಮಾಡಿದಾಗ ಪ್ರತಿಕ್ರಿಯೆ ಬಾರದಿದ್ದಾಗ ಹುಡುಕಾಟ ನಡೆಸಿದ್ದು ಬಂದರು ಬಳಿ ಹೊಳೆಯಲ್ಲಿ ದೋಣಿ ಸಿಕ್ಕಿದೆ. ಮೀನುಗಾರಿಕೆ ನಡೆಸುವಾಗ ಆಯತಪ್ಪಿ ನೀರಿಗೆ ಬಿದ್ದಿರುವ ಶಂಕೆಯಿಂದ ರಾತ್ರಿಯಿಂದ ಶುಕ್ರವಾರ ಸಂಜೆ ತನಕವೂ ಹುಡುಕಾಡ ನಡೆಸಲಾಯಿತು. ಮುಳುಗು ತಜ್ಞರು, ಅಗ್ನಿಶಾಮಕ ದಳದವರು ಕೂಡ ಶೋಧ ಕಾರ್ಯದಲ್ಲಿ ಭಾಗಿಯಾದರು.
ಘಟನಾ ಸ್ಥಳಕ್ಕೆ ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್ ಹಾಗೂ ಸಿಬ್ಬಂದಿಗಳು, ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಮೀನುಗಾರರ ಮುಖಂಡ ರಾಮಪ್ಪ ಖಾರ್ವಿ ಘಟನಾ ಸ್ಥಳಕ್ಕಾಗಮಿಸಿದ್ದರು.
Comments are closed.