ಮಂಗಳೂರು: ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆ ತೆರಳಿದ್ದ ಯಾತ್ರಾರ್ಥಿಗಳು ಗೋವಾ ಬೀಚ್ಗೆ ತಲುಪಿದ ಘಟನೆ ಬಸ್ ಚಾಲಕನ ಅಜಾರುಗತೆಯಿಂದ ನಡೆದಿದೆ.
ಕೇರಳದ ರಾಜಧಾನಿ ತಿರುವನಂತಪುರದಿಂದ ಕೊಲ್ಲೂರು ದೇವಸ್ಥಾನ ದರ್ಶನ ಮಾಡಲು ಹೊರಟಿದ್ದ ಯಾತ್ರಾರ್ಥಿಗಳು ಗೋವಾ ತಲುಪಿದ್ದಾರೆ. ಮೇ 15ರ ಸಂಜೆ ತಿರುವನಂತಪುರದಿಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಕೆ-ಸ್ವಿಫ್ಟ್ ಬಸ್ ಕೊಲ್ಲೂರಿಗೆ ಹೊರಟಿತ್ತು.
ಈ ಸಂದರ್ಭ ಎರ್ನಾಕುಳಂ ತನಕ ಓರ್ವ ಚಾಲಕನಿದ್ದು, ಅಲ್ಲಿಂದ ಇನ್ನೋರ್ವ ಚಾಲಕ ಬಸ್ಸನ್ನೇರಿ ಕರ್ತವ್ಯ ಆರಂಭಿಸಿದ್ದರು. ಬಸ್ ಮಂಗಳೂರು ಮೂಲಕ ಕುಂದಾಪುರಕ್ಕೆ ತಲುಪಿತು. ಅಲ್ಲಿಂದ ಕೊಲ್ಲೂರಿಗೆ ತೆರಳಲು (ಹೆಮ್ಮಾಡಿ ಬಳಿ) ಬಲಕ್ಕೆ ತಿರುವು ಪಡೆದುಕೊಳ್ಳಬೇಕು. ಆದರೆ ಕೊಲ್ಲೂರು ಬಗ್ಗೆ ಯಾವುದೇ ಮಾಹಿತಿ ಇಲ್ಲದ ಚಾಲಕ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್ಸನ್ನು ಚಲಾಯಿಸಿದ.
ಸೋಮವಾರ ಬೆಳಗ್ಗೆ ಬಸ್ನಲ್ಲಿದ್ದವರು ಎಚ್ಚೆತ್ತು ನೋಡಿದಾಗ ಬಸ್ ಸಮುದ್ರ ಕಿನಾರೆಯಲ್ಲಿದ್ದು ಬಹುತೇಕ ವಿದೇಶೀಯರು ಓಡಾಡುತ್ತಿದ್ದರು. ಮೂಕಾಂಬಿಕೆಯ ದರ್ಶನಕ್ಕೆಂದು ಹೊರಟ ತಾವು ಗೋವೆಗೆ ತಲುಪಿದ್ದೇವೆ ಎಂಬುದು ತಿಳಿಯಿತು ಎಂದು ವರದಿಯಾಗಿದೆ.
ಚಾಲಕನೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದರು. ಗೂಗಲ್ ಮ್ಯಾಪ್ ದಾರಿ ತಪ್ಪಿಸಿದೆ ಎಂದು ಹೇಳಿ ಚಾಲಕ ಪಾರಾಗಲು ಯತ್ನಿಸಿದ. ಬಳಿಕ ಪ್ರಯಾಣಿಕರನ್ನು ಕೊಲ್ಲೂರಿಗೆ ಕರೆದೊಯ್ದ. ದೇವರ ದರ್ಶನ ಪಡೆದ ಪ್ರಯಾಣಿಕರು ಊರಿಗೆ ವಾಪಸಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
Comments are closed.