ಕುಂದಾಪುರ: ದಲಿತ ಮಹಿಳೆಯ ಕಪಾಲಕ್ಕೆ ಹೊಡೆದ ಸಚಿವ ವಿ. ಸೋಮಣ್ಣ ರಾಜೀನಾಮೆ ನೀಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಕುಂದಾಪುರ ತಾಲೂಕು ಸಮಿತಿ ಒತ್ತಾಯಿಸಿದೆ.
ನ್ಯಾಯ ಕೇಳಿಬಂದ ಒಬ್ಬ ಬಡ ದಲಿತ ಮಹಿಳೆಗೆ ತನ್ನ ಸಚಿವಗಿರಿಯ ದರ್ಪದಿಂದ ಕಪಾಲಕ್ಕೆ ಹೊಡೆದು ಅವಾಚ್ಯ ಶಬ್ದದಿಂದ ನಿಂದಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿರುವ ಧುರಾಹಂಕಾರಿ ಸಚಿವ ವಿ.ಸೋಮಣ್ಣ ರಾಜೀನಾಮೆ ಪಡೆದು ಸಚಿವ ಸ್ಥಾನದಿಂದ ವಜಾಗೊಳಿಸಿ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂದು ದ.ಸಂ.ಸ ಆಗ್ರಹಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರ ಮೇಲಿನ ಹಲ್ಲೆ ಅತ್ಯಾಚಾರ, ಕೊಲೆಗಳು ಹೆಚ್ಚಾಗಿದ್ದರೂ ಕೂಡ ಕುರುಡರಂತೆ ವರ್ತಿಸುವ ರಾಜ್ಯ ಸರ್ಕಾರದ ಆಡಳಿತ ವೈಖರಿಯು ದಲಿತ ಪರ ಕಾಳಜಿ ಕೇವಲ ರಾಜಕೀಯ ಉದ್ದೇಶ ಎಂಬುದನ್ನು ತೋರಿಸುತ್ತದೆ. ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರೇ ಈ ರೀತಿಯಲ್ಲಿ ಹೆಣ್ಣೆಂಬ ಕಿಂಚಿತ್ತೂ ಗೌರವವಿಲ್ಲದೆ ವರ್ತಿಸುತ್ತಿರುವುದು ಸರಿಯಲ್ಲ. ಅಮಾಯಕ ದಲಿತ ಮಹಿಳೆಗೆ ಹೊಡೆದಿರುವುದು ಇವರು ಎಂತಹ ಸುಸಂಸ್ಕೃತದವರೆಂದು ಹೇಳುತ್ತದೆ. ಇಂತಹ ಗಂಭೀರವಾದ ಘಟನೆಯನ್ನು ತಿಳಿದು ತಿಳಿಯದಂತಿರುವ ಕರ್ನಾಟಕದ ಮುಖ್ಯಮಂತ್ರಿಗಳ ವರ್ತನೆ ಅನುಮಾನ ಮೂಡಿಸುತ್ತದೆ. ನಮ್ಮ ಎಸ್ಸಿ ಎಸ್ಟಿ ದಲಿತ ನಾಯಕರು ತಮ್ಮದೇ ಸಮುದಾಯದ ಹೆಣ್ಣುಮಗಳ ಮೇಲೆ ತಮ್ಮದೇ ಸರ್ಕಾರದ ಸಚಿವರು ಹಲ್ಲೆ ಮಾಡಿದರು ಬಾಯಿ ಮುಚ್ಚಿಕೊಂಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನಾತ್ಮಕ ಮೀಸಲಾತಿ ಪಡೆಯಲು ಯೋಗ್ಯರೇ ಎಂದು ನಿಮ್ಮ ನಿಮ್ಮ ಆತ್ಮ ಸಾಕ್ಷಿಯನ್ನು ಪ್ರಶ್ನೆ ಮಾಡಿಕೊಂಡು ಮುಂದೆ ಏನು ಮಾಡಬೇಕೆಂದು ಯೋಚಿಸಿ ಜಾತಿ ಧರ್ಮದ ಹೆಸರಲ್ಲಿ ಪ್ರತಿನಿತ್ಯ ದಲಿತ ಸಮುದಾಯವನ್ನು ಅವಮಾನಕರ ರೀತಿಯಲ್ಲಿ ನಡೆಸಿಕೊಳ್ಳುವ ಕೆಟ್ಟ ವ್ಯವಸ್ಥೆಯ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ( ರಿ) ಕುಂದಾಪುರ ತಾಲೂಕು ಸಮಿತಿ ಸಂಚಾಲಕ ಕೆ.ಸಿ ರಾಜು ಬೆಟ್ಟಿನಮನೆ ಪತ್ರಿಕೆ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ.
Comments are closed.