ಕರಾವಳಿ

ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ಅನುಷ್ಠಾನ ವಿರೋಧಿಸಿ ಬೆಳ್ವೆ ಗ್ರಾಮ ಹಿತರಕ್ಷಣಾ ಸಮಿತಿಯಿಂದ ಬೃಹತ್ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾ.ಪಂ ಬಳಿಯಲ್ಲಿ ಸೋಮವಾರದಂದು ಬೆಳ್ವೆ ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು ಬೆಳ್ವೆಯನ್ನು ವರದಿಯಿಂದ ಕೈಬಿಡಲು ಗ್ರಾಮಸ್ಥರು ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಕರಾವಳಿ ಜಿಲ್ಲೆಯ ಜನರಿಗೆ ಸಮುದ್ರ ಭಾಗದಲ್ಲಿ ಸಿ.ಆರ್.ಝಡ್ ಹಾಗೂ ಮಲೆನಾಡು ಹಾಗೂ ಇತರೆ ಭಾಗದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಕೃಷಿ-ಕೂಲಿಕಾರರು ವ್ಯಥೆ ಅನುಭವಿಸುವಂತಾಗಿದೆ. ಪಶ್ಚಿಮ ಘಟ್ಟ ಉಳಿಸುವುದು, ಅರಣ್ಯ ನಾಶ ತಡೆಯುವ ನೆಪದಲ್ಲಿ ಕಸ್ತೂರಿರಂಗನ್ ವರದಿ ಜಾರಿಗೊಳಿಸಲು ಮುಂದಾಗಿದ್ದು ರೈತರಿಗೆ, ಜನರಿಗೆ ಇದು ಎಷ್ಟು ಅಗತ್ಯ ಎನ್ನುವುದು ಅವಲೋಕನ ಮಾಡಿಕೊಳ್ಳಬೇಕು. ಭೌಗೋಳಿಕ ಸಮೀಕ್ಷೆ ನಡೆಸದೆ ಸ್ಯಾಟಲೈಟ್ ಸಮೀಕ್ಷೆ ಮೂಲಕ ವರದಿ ನೀಡಿ ಜನರು ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕಸ್ತೂರಿರಂಗನ್ ವರದಿ ಅನುಷ್ಠಾನ ಅವೈಜ್ಣಾನಿಕ ಎಂದು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಒಕ್ಕೋರಲ ತೀರ್ಮಾನ ಮಾಡಬೇಕು ಎಂದರು.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಈ ವರದಿ ಅನುಷ್ಠಾನಕ್ಕೆ ಬಂದರೆ ಜನರು ಜೀವನ ನಡೆಸುವುದು ಕಷ್ಟವಾಗಲಿದೆ. ಸೆ.19 ರಂದು ಎಲ್ಲಾ ಶಾಸಕರ ಸಭೆ ನಡೆಸಿ‌ ಅಭಿಪ್ರಾಯ ಸಂಗ್ರಹಿಸಿ ಸಂಪುಟದಲ್ಲಿ ಚರ್ಚೆ ನಡೆಸಿದ ಬಳಿಕ ಕಸ್ತೂರಿ ರಂಗನ್ ವರದಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡದಿರಲು ತೀರ್ಮಾನಿಸಿದೆ. ಕೇರಳ ಮಾದರಿಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ವೇ ನಡೆಸಿ ವರದಿ ತಯಾರಿಸಿ ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ನೀಡುವುದು ಸೂಕ್ತ. ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಶಾಸಕರು ಒಗ್ಗೂಡಿ ಸರಕಾರದ ಗಮನ ಸೆಳೆಯುತ್ತೇವೆ ಎಂದರು.

ಉಡುಪಿ ಜಿಲ್ಲಾ ರೈತಸಂಘದ ಅಧ್ಯಕ್ಷ, ವಿಧಾನಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, 2013ನೇ ಇಸವಿಯಲ್ಲಿ ಕಸ್ತೂರಿರಂಗನ್ ಜ್ವರ ಈ ಭಾಗದಲ್ಲಿ ಕಾಣಿಸಿಕೊಂಡು ಪ್ರತಿಭಟನೆ ನಡೆಸಲಾಗಿತ್ತು. ಸರಕಾರಗಳು ಬದಲಾದರೂ ಕೂಡ ಅಂದಿನಿಂದ ಇಂದಿನವರೆಗೂ ಯಾವುದೇ ಬದಲಾವಣೆಯೂ ಆಗಿಲ್ಲ. ಕೇರಳದಲ್ಲಿ ಒಂದು ಹಂತದಲ್ಲಿ ಸರಿಯಾದ ಸಮಸ್ಯೆ ನಮ್ಮ ರಾಜ್ಯದಲ್ಲಿ ಸರಿಯಾಗಿಲ್ಲ. ಅರಣ್ಯ ಭೂಮಿ, ಕೃಷಿಭೂಮಿ, ಜನವಸತಿ ಪ್ರದೇಶಗಳ ಗುರುತಿಸುವಿಕೆ ಸರ್ವೇ ಸಮರ್ಪಕವಾಗಿ ನಡೆದಿಲ್ಲ. ಇನ್ನೂ ಕೂಡ ಕಾಲ ಮಿಂಚಿಲ್ಲ. ಸಂಘಟಿತ ಹೋರಾಟದ ಮೂಲಕ ಮುನ್ನೆಡೆದರೆ ರೈತಸಂಘದ ಬೆಂಬಲ ಖಂಡಿತವಾಗಿ ಇದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿ ಪಾ. ಸಲೀಂ ಜೋಸೇಫ್ ಮಾಹಿತಿ ನೀಡಿದರು. ಉಡುಪಿ ಜಿಲ್ಲಾ ರೈತಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ಹೋರಾಟಗಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಮಾತನಾಡಿದರು. ಬೆಳ್ವೆ ಗ್ರಾ.ಪಂ ಅಧ್ಯಕ್ಷೆ ರಾಧಾ, ಬೆಳ್ವೆ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಜಿಲ್ಲಾ ರೈತಸಂಘದ ವಂಡ್ಸೆ ವಲಯದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು ಉಪಸ್ಥಿತರಿದ್ದರು.

ಪ್ರವೀಣ್ ಸ್ವಾಗತಿಸಿ, ಸುದರ್ಶನ್ ಮತ್ತು ಸಂತೋಷ್ ನಿರೂಪಿಸಿ, ಪ್ರಶಾಂತ್ ವಂದಿಸಿದರು.

ಕಸ್ತೂರಿರಂಗನ್ ವರದಿಯಿಂದ ಜನರಿಗೆ ಸಮಸ್ಯೆಯಾಗದಂತೆ ಕೇರಳದಲ್ಲಿ ಭೌತಿಕ ಸರ್ವೇ ನಡೆದಿದೆ. ಜನರನ್ನು ಒಕ್ಕಲೆಬ್ಬಿಸುವುದಿಲ್ಲ ಎನ್ನುವುದು ವರದಿಯಲ್ಲಿ ಎಷ್ಟು ಸ್ಪಷ್ಟವಾಗಿದೆಯಾದರೂ ಜನರಿಗೆ ಬದುಕಲು ಕಷ್ಟವಾಗುವುದು‌ ಮಾತ್ರ ಖಂಡಿತ. ಅಧಿಕಾರಿಗಳು ಜನರಿಗೆ ತಪ್ಪು ಮಾಹಿತಿ ನೀಡಬಾರದು. 35 ಗ್ರಾಮಗಳು ಈ ವರದಿಯಿಂದ ಸಮಸ್ಯೆಗೊಳಗಾಗಲಿದ್ದು ನಿಯಮಾನುಸಾರ, ಕಾನೂನಾತ್ಮಕ ಹೋರಾಟ ಅಗತ್ಯ. ಜನಶಕ್ತಿಗಿಂತ ಮಿಗಿಲಾದ ಯಾವ ಶಕ್ತಿ ಇಲ್ಲ ಎಂಬುದನ್ನು ಸರಕಾರಕ್ಕೆ ತೋರಿಸಬೇಕು.
– ಪಾ. ಸಲೀಂ ಜೋಸೇಫ್ (ಹೋರಾಟಗಾರ)

Comments are closed.