ಬೆಂಗಳೂರು: ನೆಲಮಂಗಲ ಸಮೀಪ ಡಿಸೆಂಬರ್ 21ರಂದು ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಜನರು ಸಾವಿಗೀಡಾದ ಘಟನೆ ನಡೆದಿದೆ.
ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟಿ. ಬೇಗೂರು ಸಮೀಪ ತಾಳೆಕೆರೆ ಎಂಬಲ್ಲಿ ಈ ಅಪಘಾತ ನಡೆದಿದೆ. ಕಾರಿನ ಮೇಲೆ ಕಂಟೇನರ್ ಲಾರಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವೇಗವಾಗಿ ಬಂದ ಲಾರಿಗಳು ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿದೆ. ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್, ಬೈಕ್ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ವೇಳೆ ಕಂಟೇನರ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಅಷ್ಟೂ ಜನರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೃತರಾದವರು ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದವರು ಎಂದು ತಿಳಿದು ಬಂದಿದೆ. ಇವರು ವಿಜಯಪುರದಲ್ಲಿ ವಾಸವಾಗಿದ್ದರು. ಇವರು ವಾರಾಂತ್ಯದಲ್ಲಿ ಐಷಾರಾಮಿ ವೋಲ್ವೋ ಕಾರಿನಲ್ಲಿ ಪ್ರವಾಸಕ್ಕೆ ಹೊರಟಿದ್ದರೆನ್ನಲಾಗಿದೆ.
ಸಾವಿಗೀಡಾದವರನ್ನು ಚಂದ್ರ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಎಂದು ಗುರುತಿಸಲಾಗಿದೆ.
ಭೀಕರ ಅಪಘಾತದಿಂದ ಭಾರೀ ವಾಹನ ಸಂಚಾರ ಇರುವ ತುಮಕೂರು – ಬೆಂಗಳೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳು ರಸ್ತೆಯಲ್ಲೇ ಬಿದ್ದಿದ್ದರಿಂದ ಹಲವು ಕಿಲೋಮೀಟರ್ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ನಂತರ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಟ್ರಾಫಿಕ್ ಪೊಲೀಸರು ಹಾಗೂ ಗ್ರಾಮಾಂತರ ಎಸ್ಪಿ, ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಕಂಟೇನರ್ ಲಾರಿ ಮೇಲೆತ್ತಿ ಕಾರಿನಲ್ಲಿದ್ದ ಮೃತ ದೇಹಗಳನ್ನು ಕಷ್ಟಪಟ್ಟು ಹೊರತೆಗೆದರು. ಲಾರಿ ಎತ್ತುವುದೇ ಹರಸಾಹಸವಾಗಿತ್ತು. ಮೂರು ಮೂರು ಕ್ರೇನ್ಗಳನ್ನು ಬಳಸಿ ಭಾರದ ಲಾರಿ ಮೇಲೆತ್ತಲಾಯಿತು.ಬಳಿಕ ಪೊಲೀಸರು ವಾಹನಗಳನ್ನು ತೆರವು ಮಾಡಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Comments are closed.