ಬೈಂದೂರು: ನಾಲ್ಕು ಅಕ್ಷರ ಓದಿದ ಕೂಡಲೇ ಪಾಂಡಿತ್ಯ ಜಾಗೃತವಾಗೋದಿಲ್ಲ. ಜೀವನಾನುಭವವೇ ದೊಡ್ಡ ಪಾಂಡಿತ್ಯ ಎಂದು ಧಾರವಾಡದ ಹೆಬ್ಬಳ್ಳಿಯ ಶ್ರೀ ಬ್ರಹ್ಮಚೈತನ್ಯ ಸ್ಥಿರ ಪಾದುಕಾಶ್ರಮದ ಸದ್ಗುರು ದತ್ತಾವಧೂತ ಮಹರಾಜ್ ಅವರು ಹೇಳಿದರು.
ಗುರುವಾರ ಉಪ್ಪುಂದದ ಮಾದಯ್ಯ ಶೆಟ್ರಮನೆಯ ಮೂಲಸ್ಥಾನದ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ದೃಢ ಸಂಪ್ರೋಕ್ಷಣಾ ಪೂಜೆಯ ಅಂಗವಾಗಿ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಆಯಾ ಕಾಲದಲ್ಲಿಯೇ ಯುಗಪುರುಷರ ಅವತಾರ ವಾಗುತ್ತದೆ. ನಿಷ್ಕಲ್ಮಶ ಭಕ್ತಿಯಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಭಾವನೆ ಆರ್ದ್ರತೆಯಿಂದ ಭಕ್ತಿಯ ಭಾವನೆ ಪ್ರಕಟವಾಗುತ್ತದೆ. ವಿಶ್ವದಲ್ಲಿ ಚಿತ್ ಸ್ವರೂಪನಾದ ದೇವರು ಆನಂದಮಯನಾಗಿ ಸರ್ವ ವ್ಯಾಪಿಯಾಗಿದ್ದಾನೆ. ಭಕ್ತರಿಗೆ ಪ್ರಕಟವಾಗಬೇಕು ಎನ್ನುವ ಇಚ್ಚೆ ಇದ್ದಲ್ಲಿ ಸರ್ವಕಾಲದಲ್ಲಿಯೂ ಪ್ರಕಟವಾಗುತ್ತಾರೆ. ದೃಷ್ಟಿಯಂತೆ ಸೃಷ್ಟಿ ಇರುತ್ತದೆ. ಭಕ್ತಿ, ಶೃದ್ಧೆಯಿಂದ, ವಿಶಿಷ್ಟವಾದ ಪದ್ದತಿಯಿಂದ ದೇವರ ಪ್ರತಿಷ್ಠೆಯಾದಲ್ಲಿ, ಭಗವಂತ ಭಕ್ತರ ಪ್ರಾರ್ಥನೆಗೆ ಸ್ಪಂದಿಸುತ್ತಾರೆ.
ಗುರುವಿಗೆ ಶರಣಾಗೋದೆ ನಿಜವಾದ ಭಕ್ತಿ. ಪಾಶ್ಚಾತ್ಯ ಹಾಗೂ ಆಧುನಿಕತೆಯ ಪ್ರಭಾವ ನಮ್ಮ ಶೃದು ಪರಂಪರೆಯನ್ನು ಘಾಸಿಗೊಳಿಸುತ್ತಿದೆ. ಹೊರಗಿನ ಜಗತ್ತಿನ ಪ್ರಭಾವಕ್ಕೆ ಒಳಗಾಗಿ ನಾವು ಸ್ವಯಂ ವಶೀಕರಣಕ್ಕೆ ಒಳಗಾಗುತ್ತಿದ್ದೇವೆ. ಸತ್ಪುರುಷರಿಗೆ ಸಮಾಧಾನ ಹಾಗೂ ಸ್ಮರಣೆ ಸ್ವಾಭಾವಿಕ. ಆದರೆ ಅಸಮಾಧಾನ ವಿಸ್ಮರಣೆ ಅಸ್ವಾಭಾವಿಕ ಪ್ರಕ್ರಿಯೆಯಾಗಿದೆ ಎಂದರು.
ಹೊನ್ನಾವರ ನವೀಲಗೋಣದ ವೇದಮೂರ್ತಿ ಕಟ್ಟೆ ಶಂಕರ ಭಟ್ ಮಾತನಾಡಿದರು. ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನ ಕುಟುಂಬದ ಯು.ಸೀತಾರಾಮ ಶೆಟ್ಟಿ, ಜಲಜಾಕ್ಷಿ ಎಂ ಶೆಟ್ಟಿ, ನಾರಾಯಣ ಎಂ ಶೆಟ್ಟಿ, ಭುಜಂಗ ಎಂ ಶೆಟ್ಟಿ, ಶೀಲಾ ವಿ ಭಂಡಾರಿ, ಹರೀಶ್ಕುಮಾರ ಶೆಟ್ಟಿ, ಜ್ಯೋತಿ ಆರ್ ಶೆಟ್ಟಿ, ಪತ್ರಕರ್ತ ರಾಜೇಶ್ ಕೆ.ಸಿ, ನಾಗಯ್ಯ ಶೆಟ್ಟಿ ರತ್ನಾಕರ ಟಿ ಶೆಟ್ಟಿ ಇದ್ದರು.
Comments are closed.