ಕರಾವಳಿ

ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಆಯೋಜನೆಯ 39ನೇ ‘ಸ್ವಚ್ಛ ಕಡಲ ತೀರ-ಹಸಿರು ಕೋಡಿ ಅಭಿಯಾನ’ ಹಾಗೂ ಶೈಕ್ಷಣಿಕ ಹಿತೈಷಿಗಳ ಸಮಾಲೋಚನಾ ಸಭೆ

Pinterest LinkedIn Tumblr

ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಇವರಿಂದ 39ನೇ ಸ್ವಚ್ಛ ಕಡಲ ತೀರ – ಹಸಿರು ಕೋಡಿ ಅಭಿಯಾನದೊಂದಿಗೆ ಶೈಕ್ಷಣಿಕ ಹಿತೈಷಿಗಳ ಸಮಾಲೋಚನಾ ಸಭೆಯು ಏ.27 ರವಿವಾರ ಜರುಗಿತು.

ಕುಂದಾಪುರದ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ್ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ಸಮುದ್ರ ತೀರ ಅತಿ ಸುಂದರವಾಗಿದೆ. ಆದರೆ ಪ್ಲಾಸ್ಟಿಕ್, ತ್ಯಾಜ್ಯ ವಸ್ತುಗಳು ಸಮುದ್ರಕ್ಕೆ ಸೇರುತ್ತಿದ್ದು, ಸಮುದ್ರದ ಲಕ್ಷಾಂತರ ಜೀವಿಗಳಿಗೆ ಹಾನಿಯಾಗುವುದಲ್ಲದೆ‌ ಸ್ವಚ್ಚತೆಗೂ ದಕ್ಕೆಯಾಗಿದೆ. ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆಗೊಳಿಸಿ ಭೂಮಿಯ ರಕ್ಷಣೆಯನ್ನು ಮಾಡಬೇಕು. ಅದರೊಂದಿಗೆ ಹೀಗೆ ಸ್ವಚ್ಛತಾ ಅಭಿಯಾನ ಮುಂದುವರೆಯಲಿ’ ಎಂದು ತಿಳಿಸಿದರು.

ಅಭಿಯಾನದ ನಂತರ ಶೈಕ್ಷಣಿಕ ಹಿತೈಷಿಗಳ ಸಮಾಲೋಚನಾ ಸಭೆಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸೈಯದ್ ಮೊಹಮ್ಮದ್ ಬ್ಯಾರಿ ಮಾತನಾಡಿ,  ಶಾಂತಿ, ಪ್ರೀತಿ, ಸೌಹಾರ್ದತೆ ಕುರಿತು ಮಾತನಾಡಿ, ನಾವು ನಮಗಾಗಿ ಕಾರ್ಯವನ್ನು ಮಾಡುವುದಲ್ಲ ಪರರಿಗಾಗಿ  ಉತ್ತಮ ಕಾರ್ಯವನ್ನು ಮಾಡಬೇಕು. ಮಕ್ಕಳನ್ನು ಪರೀಕ್ಷೆಗಾಗಿ ತಯಾರು ಮಾಡುವುದರ ಜೊತೆಗೆ,  ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಿದ್ಧಗೊಳಿಸಬೇಕು. ಮಕ್ಕಳನ್ನು ಒಳ್ಳೆಯ ಮಾನವನನ್ನಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರೆ ಅದು ನಿಜವಾದ ಜೀವನದ ಮೌಲ್ಯ. ಮಕ್ಕಳಿಗೆ ಮಾತೃ ಭಾಷೆಯ ಮೇಲೆ ಪ್ರಾಮುಖ್ಯತೆಯನ್ನು ನೀಡುವಂತೆ ಇಂಗ್ಲಿಷ್ ಭಾಷೆಯನ್ನು ಕಲಿಸಲು  ಪ್ರೇರೇಪಿಸಬೇಕು. ಬ್ಯಾರೀಸ್ ಶಾಲೆ ಮಾದರಿ ಶಾಲೆಯಾಗಬೇಕು ಎಂದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥಮಂಡಳಿಯ ಸದಸ್ಯರಾದ ಡಾಕ್ಟರ್ ಆಸಿಫ್ ಬ್ಯಾರಿ‌ ಮಾತನಾಡಿ,  ಮೌಲ್ಯಧಾರಿತ ಶಿಕ್ಷಣ ದೊರೆತರೆ ಯಾವ ಶಿಕ್ಷಿತನು ಅಡ್ಡ ದಾರಿಯನ್ನು ಹಿಡಿಯುವುದಿಲ್ಲ. ಮಕ್ಕಳು ಸತ್ಯವಂತರಾಗಿರಬೇಕು, ಪ್ರಾಮಾಣಿಕವಂತರಾಗಿರಬೇಕು. ಅಂತಹ ಶಿಕ್ಷಣ ಕೊಡುವಲ್ಲಿ ನಮ್ಮ ಸಂಸ್ಥೆ  ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಅಲ್ಲದೆ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದೇವೆ. ಪೋಷಕರು ಮತ್ತು  ಹಿತೈಷಿಗಳು ನಮ್ಮೊಂದಿಗೆ ಕೈ ಜೋಡಿಸಿದರೆ ನಾವು ಉತ್ತಮ ಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯ ಹಾಗೂ ನಮ್ಮಲ್ಲಿರುವ ಧನಾತ್ಮಕ ಅಂಶ ಮತ್ತು ಋಣಾತ್ಮಕ ಅಂಶವನ್ನು ತಿಳಿಸಬೇಕೆಂದು ಹೇಳಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ  ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಭೇದವಿಲ್ಲದೆ ನಮ್ಮೂರಿನ ಮತ್ತು ಪರ ಊರಿನ ಮಕ್ಕಳು ಕಲಿಯಬೇಕೆನ್ನುವ ಆಶಯ ನಮ್ಮ ಸಂಸ್ಥೆಯದು, ನಮ್ಮ ಸಂಸ್ಥೆ ಇನ್ನು ಹೆಚ್ಚಿನ ಬೆಳವಣಿಗೆ ಕಾಣಲು ನಿಮ್ಮ ಸಹಕಾರ ನಮಗೆ ಅಗತ್ಯ ಎಂದು ತಿಳಿಸಿದರು.

ಸಲಹಾ ಮಂಡಳಿಯ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿಗಳು, ವಿವಿಧ ಊರಿನಿಂದ ಬಂದ ನಮ್ಮ ಸಂಸ್ಥೆಯ ಹಿತೈಷಿಗಳ ಬಳಗ, ಪೋಷಕರು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಅಭಿಯಾನ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ  ಸುಮನ ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು.

ಶೈಕ್ಷಣಿಕ ಹಿತೈಷಿಗಳ ಸಮಾಲೋಚನಾ ಸಭೆಯಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಬಿ.ಎಡ್. ವಿಭಾಗದ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್. ಸ್ವಾಗತಿಸಿದರು. ಉಪನ್ಯಾಸಕ ಅನಂತ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Comments are closed.