ಕುಂದಾಪುರ: ಕಾಂಗ್ರೆಸ್ ಅಭ್ಯರ್ಥಿ ಮಾಡುವ ಆರೋಪಕ್ಕೆ ಬೆಲೆಯಿಲ್ಲ, ಅದು ಅವರ ಕರ್ತವ್ಯವಾಗಿದ್ದು ಎದುರಾಳಿಯ ಮೇಲೆ ಆರೋಪ ಮಾಡುವುದು ಸಹಜ ಪ್ರಕ್ರಿಯೆಯಾಗಿದೆಯೇ ಹೊರತು ಬಿಜೆಪಿ ಅಬ್ಯರ್ಥಿ ಪರ ಅವರು ಮಾತನಾಡಲ್ಲ. ಅವರು ಕ್ಷೇತ್ರದಲ್ಲಿ ಅಭಿವೃದ್ದಿಯೇ ಆಗಿಲ್ಲ ಎನ್ನುವುದು ಕೇವಲ ಆರೋಪವಾಗಿದೆ. ಆದರೇ ನಮ್ಮ ಕ್ಷೇತ್ರದ ಜನರಿಗೆ ಅಭಿವೃದ್ಧಿ ಕಾರ್ಯಗಳ ಮಾಹಿತಿಯಿದೆ. ಈ ಹಿಂದಿನ ಅಭಿವೃದ್ಧಿ ಕಾರ್ಯಗಳು ಕೈಹಿಡಿಯುತ್ತದೆ, ಜನರು ಆಶಿರ್ವಾದ ಮಾಡುತ್ತಾರೆಂದು ಕುಂದಾಪುರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರದ ವಿಧಾನಸೌಧದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ನಾನು ಸದ್ಯ ಬಿಜೆಪಿಯ ಅಧಿಕ್ರತ ಅಭ್ಯರ್ಥಿ. ಬಿಜೆಪಿಯಲ್ಲಿನ ಬಣದ ಬಗ್ಗೆ ಮಾತನಾಡಲ್ಲ, ಅದನ್ನು ಪಕ್ಷದ ಮುಖಂಡರು ಶಮನ ಮಾಡಬೇಕು. ಮಕ್ಕಳಿಬ್ಬರ ಜಗಳವನನ್ನು ಅಧ್ಯಾಪಕರೇ ಸರಿಪಡಿಸಬೇಕು. ಎಲ್ಲವೂ ಬಗೆಹರಿಯುವ ವಿಶ್ವಾಸವಿದೆ. ಪಕ್ಷ ಎಲ್ಲಿ ಕರೆದರೂ ಪ್ರಚಾರಕ್ಕೆ ತೆರಳುವೆ. ಅದು ಯಾವುದೇ ಕ್ಷೇತ್ರವಾದರೂ ಓಕೆ ಎಂದರು.
ಪರಿಕ್ಷೆಗೆ ಕುಳಿತವನು ನಾನು. ಈ ಬಾರಿಯೂ ಕುಳಿತಿದ್ದು ಅಂಕವನ್ನು ಮತದಾರರೇ ತಿರ್ಮಾನಿಸುತ್ತಾರೆ. ಪ್ರತಿ ಬಾರಿ ಪರಿಕ್ಷೆಗೆ ಕುಳಿತಾಗಲೂ ಹೆಚ್ಚುಹೆಚ್ಚು ಅಂಕ ಲಭಿಸಿದೆ. ಪ್ರಚಾರದ ಬಗ್ಗೆ ಇನ್ನೂ ಕೂಡ ಆಲೋಚನೆ ಮಾಡಿಲ್ಲ. ರಾಜ್ಯ ನಾಯಕರು ಬರುವ ಬಗ್ಗೆ ತೀರ್ಮಾನ ಆಗಿಲ್ಲ. ಪ್ರಚಾರದ ವೇಳೆ ಜನರಿಗೆ ಕೇವಲ ನೀರು ಮಜ್ಜಿಗೆ ಮಾತ್ರವೇ ನೀಡುತ್ತಿದ್ದೇವೆ. ಗೆಲವಿನ ಅಂತರ ಜನರೇ ತಿರ್ಮಾನಿಸಬೇಕಿದೆ. ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ದಿ ಕಾರ್ಯಗಳನು ಪರಾಮರ್ಷಿಸಿದರೇ ಎಲ್ಲವೂ ತಿಳಿಯುತ್ತದೆಂದು ನುಡಿದರು. ಬೈಂದೂರಿಗೆ ಹೋಲಿಸಿದ್ರೆ ಕುಂದಾಪುರ ಕ್ಷೇತ್ರದಲ್ಲಿ ಅಭಿವೃದ್ದಿ ಕುಂಠಿತವಾಗಿದೆಯೆನ್ನುವ ಆರೋಪವನ್ನು ಅವರು ತಳ್ಳಿಹಾಕಿದರು.
ಬೆಂಬಲಿಗರೊಂದಿಗೆ ಮಿನಿವಿಧಾನ ಸೌಧ ಕಛೇರಿಗೆ ಬಂದ ಹಾಲಾಡಿ ಬಳಿಕ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಮುಖಂಡರಾದ ಸದಾನಂದ ಬಳ್ಕೂರು, ಟಿ.ಬಿ ಶೆಟ್ಟಿ, ಮಂಜು ಬಿಲ್ಲವ ಎಸಿ ಕಚೇರಿಯೊಳಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಕಿರಣ್ ಕೊಡ್ಗಿ, ಭಾಸ್ಕರ್ ಬಿಲ್ಲವ, ಪ್ರಭಾಕರ, ಸುನೀಲ್ ಶೆಟ್ಟಿ ಹೇರಿಕುದ್ರು, ಸತೀಶ್ ಪೂಜಾರಿ ವಕ್ವಾಡಿ ಮೊದಲಾದವರು ಇದ್ದರು.
ಚಿತ್ರ, ವರದಿ- ಯೋಗೀಶ್ ಕುಂಭಾಸಿ
Comments are closed.