ಕರಾವಳಿ

ಉಡುಪಿಯ ಪೊಲೀಸ್ ಶ್ವಾನ ‘ಐಕಾನ್’ ನಿವೃತ್ತಿ: ಸನ್ಮಾನಿಸಿ ಬೀಳ್ಕೊಡುಗೆ ನೀಡಿದ ಎಸ್ಪಿ ಡಾ. ಅರುಣ್ ಕೆ.

Pinterest LinkedIn Tumblr

ಉಡುಪಿ ಜಿಲ್ಲೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದ ‘ಐಕಾನ್’

ಉಡುಪಿ: ಕಳೆದ 10 ವರ್ಷ 25 ದಿನಗಳಿಂದ ಉಡುಪಿ ಜಿಲ್ಲೆಯ ಪೊಲೀಸ್‌ ಶ್ವಾನದಳದಲ್ಲಿ ಸ್ಪೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನ ‘ಐಕಾನ್‌’ ನಿವೃತ್ತಿ ಹೊಂದಿದ್ದು ಅಧಿಕಾರಿಗಳು, ಸಿಬ್ಬಂದಿಗಳು, ಶ್ವಾನದಳ ಸಿಬ್ಬಂದಿ ಸಮ್ಮುಖದಲ್ಲಿ ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್ ಕೆ. ಅವರು ಶ್ವಾನವನ್ನು ಪ್ರಶಂಸನೆ ಮಾಡಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.

ಉಡುಪಿ& ಹೊರಜಿಲ್ಲೆಯಲ್ಲಿ 417 ಕೇಸ್ ಪತ್ತೆ ಮಾಡಿದ್ದ ‘ಐಕಾನ್’
ಲ್ಯಾಬ್ರಡಾರ್‌ ರಿಟ್ರೀವರ್‌ ತಳಿಯ ಶ್ವಾನವು 2014 ಆ.5 ರಂದು ಜನಿಸಿ, 2014 ನವೆಂಬರ್ 5 ರಂದು ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಂಡಿದ್ದು ಗಣೇಶ ಎಂ. ಅವರು ಹ್ಯಾಂಡ್ಲರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ನ.25ರಿಂದ 2015 ಆ.30 ರವರೆಗೆ ಸಿ.ಎ.ಆರ್‌ ಸೌತ್‌ ಆಡುಗೋಡಿಯಲ್ಲಿ ಸ್ಪೋಟಕ ಪತ್ತೆ ಬಗ್ಗೆ 9 ತಿಂಗಳು ಕಠಿಣ ತರಬೇತಿಯನ್ನು ಪಡೆದು ಉಡುಪಿ ಜಿಲ್ಲೆಯಲ್ಲಿ ಹಾಗೂ ಹೊರ ಜಿಲ್ಲೆಯಲ್ಲಿ ಸುಮಾರು 417 ಕ್ಕಿಂತ ಅಧಿಕ ವಿಶೇಷ ಕರ್ತವ್ಯ ನಿರ್ವಹಿಸಿದ್ದು ‘ಐಕಾನ್’ ಶ್ವಾನವು ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ವಿದೇಶಿ ಗಣ್ಯರು ಹಾಗೂ ಗಣ್ಯಾತಿಗಣ್ಯರ ಆಗಮನದ ಸಂದರ್ಭದಲ್ಲಿ ಹಾಗೂ ಏರ್‌ ಶೋ, ಜಿ-20 ಶೃಂಗಸಭೆ, ದತ್ತ ಜಯಂತಿ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿ, ಸಾಗರ ಕವಚ ಹಾಗೂ ಪ್ರತಿನಿತ್ಯದ ಕರ್ತವ್ಯದಲ್ಲಿ ಮಲ್ಪೆ ಬಂದರು, ಕಾಪು ಲೈಟ್‌ಹೌಸ್‌, ಮಣಿಪಾಲ ಯೂನಿವರ್ಸಿಟಿ, ರೈಲ್ವೇ ನಿಲ್ದಾಣ, ನಾಗಾರ್ಜುನ, ಮೈಸೂರು ದಸರಾ, ನ್ಯಾಷನಲ್‌ ನಾರ್ಕೋಟಿಕ್ಸ್‌ ಕಾನ್ಫರೆನ್ಸ್‌, ಬ್ರಹ್ಮಾವರದಲ್ಲಿ ಕಚ್ಚಾ ಬಾಂಬ್‌ ಪತ್ತೆ ಇತ್ಯಾದಿ ಸಂಧರ್ಭಗಳಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಯಾವುದೇ ವಿಧ್ವಂಸಕ ಕೃತ್ಯ ನಡೆಯದಂತೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದೆ. ಅಲ್ಲದೆ 2020 ಫೆ.22ರಂದು ನಡೆದ ಪೊಲೀಸ್ ಕರ್ತವ್ಯ ಕೂಟದಲ್ಲಿ ಬೆಳ್ಳಿಯ ಪದಕ ಪಡೆದು, ಉಡುಪಿ ಜಿಲ್ಲೆಗೆ ಹಾಗೂ ಪೊಲೀಸ್‌ ಇಲಾಖೆಗೆ ಗೌರವವನ್ನು ತಂದು ಕೊಟ್ಟಿದೆ.

ಬೀಳ್ಕೊಡುಗೆ: ನಿವೃತ್ತಿ ಹೊಂದಿದ ಶ್ವಾನ ‘ಐಕಾನ್’ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ಪೊಲೀಸ್‌ ಅಧೀಕ್ಷಕ ಡಾ. ಅರುಣ್‌ ಕೆ., ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಪರಮೇಶ್ವರ ಹೆಗಡೆ, ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಪ್ರಭು ಡಿ.ಟಿ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಉಪಾಧೀಕ್ಷಕ ತಿಮ್ಮಪ್ಪ ಗೌಡ ಜಿ., ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ನಿರೀಕ್ಷಕ ಎಸ್. ರವಿಕುಮಾರ್‌ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.