ಕರಾವಳಿ

ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ ಆಯೋಜಿಸಿದ ಬೇಸಿಗೆ ಶಿಬಿರ ‘ಮಂಥನ’ದಲ್ಲಿ 1064 ವಿದ್ಯಾರ್ಥಿಗಳು ಭಾಗಿ | ಮಕ್ಕಳು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಬೇಸಿಗೆ ಶಿಬಿರಗಳು ಸಹಕಾರಿ: ಕೆ. ಜಯಪ್ರಕಾಶ್ ಹೆಗ್ಡೆ

Pinterest LinkedIn Tumblr

ಕುಂದಾಪುರ: ಶಿಕ್ಷಣ ಎಂದರೆ ಕೇವಲ ಅಕ್ಷರ ಅಭ್ಯಾಸವಲ್ಲ. ಕ್ರೀಡೆ, ಕಲೆ ಮುಂತಾದ ಚಟುವಟಿಕೆಗಳು ಅದರ ಭಾಗವಾದರೆ ಮಾತ್ರ ಮಕ್ಕಳ ಒಳಗಿರುವ ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿ. ರಜಾದಿನಗಳನ್ನು ಸದುಪಯೋಗ ಪಡಿಸಿಕೊಂಡು ಇನ್ನಷ್ಟು ಕ್ರಿಯಾಶೀಲರಾಗಲು ಬೇಸಿಗೆ ಶಿಬಿರಗಳು ಉತ್ತಮ ಆಯ್ಕೆ ಆಗಿದೆ. ಮಕ್ಕಳಿಗೆ ಶಾಲಾ ಮಟ್ಟದಲ್ಲಿಯೇ ದುಶ್ಚಟಗಳಿಂದ ,ಕೆಟ್ಟ ಹವ್ಯಾಸಗಳಿಂದ ದೂರವಿರಿಸುವ ಅರಿವು‌ ಮೂಡಿಸುವ ಕಾರ್ಯಕ್ರಮಗಳನ್ನ ಆಯೋಜಿಸಿದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಇಂತಹ ಬೇಸಿಗೆ ಶಿಬಿರಗಳು ಮಕ್ಕಳು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಹಕಾರಿ ಎಂದು ಮಾಜಿ ಸಚಿವ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ತಾಲೂಕಿನ ಯಡಾಡಿ-ಮತ್ಯಾಡಿ ಸುಜ್ಞಾನ ಪದವಿ ಪೂರ್ವ  ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಆಯೋಜಿಸಿದ ಬೇಸಿಗೆ ಶಿಬಿರ ‘ಮಂಥನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಖ್ಯಾತ ಚಲನಚಿತ್ರ ನಟಿ ಸಂಗೀತಾ ಶೃಂಗೇರಿ ಮಾತನಾಡಿ, ದ್ವೇಷವನ್ನು ಬಿಟ್ಟು ಮನುಷ್ಯತ್ವಕ್ಕೆ ಹೆಚ್ಚು ಬೆಲೆ ಕೊಟ್ಟು ಬದುಕುವ, ಮಾನವೀಯ ಮೌಲ್ಯಗಳಿಗೆ ಹೆಚ್ಚು ಮಾನ್ಯತೆ ದೊರೆಯುವ ಸಮಾಜ ನಮ್ಮದಾಗಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಮಾನವೀಯ ಮೌಲ್ಯಗಳನ್ನು ಕಲಿಸಲು ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ಸಾಧಕ ವ್ಯಕ್ತಿಯ ಯಶಸ್ಸಿನ ಹಿಂದೆ ಅವರ ಅವಿರತ ಶ್ರಮ ಮತ್ತು ಪ್ರಯತ್ನ ಅಡಗಿರುತ್ತದೆ. ಸೋಲು ಮತ್ತು ಗೆಲುವುಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಯಶಸ್ಸು ಪಡೆಯಲು ಪ್ರಯತ್ನಿಸಿದರೆ ಸಾಧಕರಾಗಬಹುದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಸಂಸ್ಥೆ ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಬೇಸಿಗೆ ಶಿಬಿರಗಳನ್ನು ಗ್ರಾಮೀಣ ಪರಿಸರದ ಸಾವಿರಾರು ಮಕ್ಕಳು ಅದರ ಪ್ರಯೋಜನವನ್ನು ಪಡೆದಿದ್ದಾರೆ. ಈ ಬೇಸಿಗೆ ಶಿಬಿರ ‘ಮಂಥನ’ದ ಮೂಲಕ ಮಕ್ಕಳಿಗೆ ವಿಶೇಷ ತರಬೇತಿಗಳನ್ನು ನೀಡಿ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರತರಬೇಕೆನ್ನುವುದು ಇದರ ಉದ್ದೇಶ. ಮಕ್ಕಳು ಶಿಬಿರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಕ್ಕಳ ವ್ಯಕ್ತಿತ್ವ ವಿಕಸನ ಹೊಂದಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಅರುಣ್ ಕುಮಾರ್ ಹೆಗ್ಡೆ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಶೆಟ್ಟಿ ಮಾತನಾಡಿದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿದರು. ಕನ್ನಡ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ವಂದಿಸಿದರು.

ಉಚಿತ ಬೇಸಿಗೆ ಶಿಬಿರದ ವಿಶಿಷ್ಟತೆಗಳು: ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ  ‘ಮಂಥನ’ ಉಚಿತ ಬೇಸಿಗೆ ಶಿಬಿರವು ಏಪ್ರಿಲ್ 20ರಿಂದ ಏಪ್ರಿಲ್ 26ರ ತನಕ ನಡೆಯಲಿದೆ. 7 ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರದಲ್ಲಿ 1064 ಮಕ್ಕಳು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.  ವಿವಿಧ ಕಲೆ, ಸಾಹಿತ್ಯ, ಕ್ರೀಡೆ, ನಾಟಕ, ಅಭಿನಯ ತರಬೇತಿ, ಅರ್ಚರಿ ಟ್ರೈನಿಂಗ್, ಸಾಹಸ ಆಟಗಳು ಹೀಗೆ 30ಕ್ಕೂ ಅಧಿಕ ಚಟುವಟಿಕೆಗಳ ತರಬೇತಿಯನ್ನು ಒಳಗೊಂಡಿದೆ. ಸುಮಾರು 50ಕ್ಕೂ ಅಧಿಕ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.  ಊಟ, ಉಪಹಾರ, ವಾಹನ ಸೌಲಭ್ಯ, ಅಗತ್ಯವಿರುವವರಿಗೆ ಹಾಸ್ಟೆಲ್ ಸೌಲಭ್ಯ ಎಲ್ಲವೂ ಉಚಿತವಾಗಿದ್ದು ಕರಾವಳಿ ಭಾಗದಲ್ಲೇ ಒಂದು ವಿಶೇಷ ಬೇಸಿಗೆ ಶಿಬಿರ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Comments are closed.