ಕುಂದಾಪುರ: ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ಗುಮ್ಮೊಲ ಎಂಬಲ್ಲಿ ಸೀತಾನದಿ ಸಮೀಪದ ಬಿದಿರು ಪೊದೆಯಲ್ಲಿ ಎರಡು ದಿನಗಳ ಹಿಂದೆ ಅಪರಿಚಿತ ಮಹಿಳೆಯೋರ್ವಳ ಕೊಳೆತ ಶವ ದೊರೆತಿದ್ದು ಆಕೆಯ ಕುಟುಂಬಿಕರು ಬಂದು ಗುರುತು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಆಕೆ ಕುಂದಾಪುರದ ಜಪ್ತಿ ಗ್ರಾಮದ ಸಮೀಪದ ನಚ್ಚೂರಿನ ಉಷಾ(29)ಎಂದು ಗುರುತಿಸಲಾಗಿದೆ.
ಯಾರು ಈ ಉಷಾ:
ನಚ್ಚೂರಿನವರಾದ ಉಷಾ ವಿವಾಹಿತೆಯಾಗಿದ್ದು ಗಂಡನನ್ನು ತ್ಯಜಿಸಿದ್ದಾರೆ ಎನ್ನಲಾಗಿದೆ, ಹಾಗೂ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಜೀವನ ನಿರ್ವಹಣೆಗಾಗಿ ಉಷಾ ಅವರು ಬೆಳ್ವೆ ಸಮೀಪದ ಗೇರು ಬೀಜದ ಕಾರ್ಖಾನೆ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಆಕೆ ನಾಪತ್ತೆಯಾಗಿದ್ದರು. ಆಕೆ ಬಳಸುತ್ತಿದ್ದ ಮೊಬೈಲ್ ಕೂಡ ಸ್ವೀಚ್ ಆಫ್ ಸ್ಥಿತಿಯಲ್ಲಿ ಬರುತ್ತಿದೆ ಎನ್ನುವ ಕಾರಣಗಳೇ, ಪತ್ತೆಯಾದ ಶವ ಆಕೆಯದ್ದಾ ಎನ್ನುವ ಅನುಮಾನಗಳಿಗೆ ಕಾರಣವಾಗಿತ್ತು.
ಇದೇ ಅನುಮಾನದ ನೆಲೆಯಲ್ಲಿ ತನಿಖೆಗೆ ಮುಂದಾಗಿದ್ದ ಪೊಲೀಸರು ಉಷಾ ಮನೆಗೆ ತೆರಳಿ ಮಾಹಿತಿ ಪಡೆಯುವ ಸಂದರ್ಭ ಆಕೆ ತಾಯಿ, ನ.23 ರ ಬಳಿಕ ಉಷಾ ಮನೆಗೂ ಬಂದಿಲ್ಲ ಹಾಗೂ ದೂರವಾಣಿ ಕರೆಯನ್ನು ಮಾಡಿಲ್ಲ. ಮನೆಯಿಂದ ಹೊರಗೆ ಆಕೆ ಹೋಗಿದ್ದ ಸಂದರ್ಭದಲ್ಲಿ ಆಕೆ ಮನೆಗೆ ದೂರವಾಣಿ ಕರೆಯನ್ನು ಮಾಡುತ್ತಿದ್ದಳು ಎನ್ನುವುದನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಆಕೆಯ ಸಹೋದರರು ಬುಧವಾರ ಊರಿಗೆ ಅಗಮಿಸಿ ಪೊಲೀಸರ ವಶದಲ್ಲಿ ಇರುವ ಮೃತ ಮಹಿಳೆ ಧರಿಸಿರುವ ಬಟ್ಟೆಗಳನ್ನು ಪರಿಶೀಲನೆ ನಡೆಸಿ ವಿವಿಧ ಆಯಾಮಗಳಲ್ಲಿ ಪತ್ತೆಮಾಡಿ ಅದು ಉಷಾ ಶವವೆಂದು ಖಾತ್ರಿಪಡಿಸಿದ್ದಾರೆ.
ಕೊಲೆಯಾಗಿದೆ..?
ಮೃತ ಮಹಿಳೆ ಉಷಾ ಎಂಬುದು ಸದ್ಯ ಸಾಭೀತಾಗಿದೆ, ಆದರೇ ಆಕೆ ಕೊಲೆಯಾಗಿರಬಹುದೇ ಎನ್ನುವ ಬಲವಾದ ಶಂಕೆ ಇರುವುದರಿಂದ ಪೊಲೀಸರು ಈ ನಿಟ್ಟಿನಲ್ಲಿ ತನಿಖೆಯನ್ನು ಕೇಂದ್ರಿಕರಿಸಿದ್ದು ಈಗಾಗಲೇ ಪ್ರಕರಣದಲ್ಲಿ ಸಂಶಯಾಸ್ಪದ ಕೆಲವು ವ್ಯಕ್ತಿಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳೀಯ ಭಾಗದಲ್ಲಿ ಹಲವು ಮಾತುಗಳು ಈ ಪ್ರಕರಣದ ಬಗ್ಗೆ ಕೇಳಿಬರುತ್ತಿದೆಯಾದರೂ ತನಿಖೆ ಬಳಿಕವೇ ಇದಕ್ಕೆಲ್ಲಾ ಉತ್ತರ ಸಿಗಲಿದೆ. ಕುಂದಾಪುರದ ಡಿವೈಎಸ್ಪಿ ಎಂ.ಮಂಜುನಾಥ ಶೆಟ್ಟಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ ಅವರ ಮಾರ್ಗದರ್ಶನದಲ್ಲಿ ಶಂಕರನಾರಾಯಣ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ವರದಿ- ಯೋಗೀಶ್ ಕುಂಭಾಸಿ
ಇದನ್ನೂ ಓದಿ:
ಕುಂದಾಪುರ: ಬಿದಿರು ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಕೊಲೆ ಮಾಡಿ ಎಸೆದ ಶಂಕೆ