ಚಿತ್ರ, ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಮಂಗಳವಾರ ಮುಸ್ಸಂಜೆ ಹೊತ್ತು, ಕೊಲ್ಲೂರಿನ ಪೊಲೀಸ್ ಠಾಣೆಯೆದುರು ಸಾವಿರಾರು ಜನರೇ ಜಮಾಯಿಸಿದ್ದರು. ಅವರೆಲ್ಲರಲ್ಲಿ ಕುತೂಹಲದ ಜೊತೆ ಆಕ್ರೋಷ ಭಾವನೆಯಿತ್ತು. ಯಾಕೇ ಗೊತ್ತಾ.. ತಮ್ಮೂರಿನ, ತಾವು ನಂಬಿದ ದೇವಿಯ ಆಲಯದಲ್ಲಿ ನಿತ್ಯ ತಿಂದುಂಡು ಅಲ್ಲಿಗೆ ದ್ರೋಹ ಬಗೆದವರ ಬಗ್ಗೆ ಸಹಿಸಲಾಗದ ಸಿಟ್ಟಿತ್ತು. ಲಕ್ಷಗಟ್ಟಲೇ ಯಾಮಾರಿಸಿದ್ದ ಹಲವರ ಪೈಕಿ ಕೆಲವರು ಈಗ ಸದ್ಯ ಪೊಲೀಸರ ಅತಿಥಿ. ಅರೆಸ್ಟ್ ಆದ ಮೂಕಾಂಬೆಯ ಚಿನ್ನಕ್ಕೆ ಕನ್ನ ಹಾಕಿದ ಖತರ್ನಾಕ್ ಖದೀಮರ ನೋಡಲು ಸೇರಿದ್ದರು ಈ ಮಂದಿ.
ಮಂಗಳವಾರ ಸಂಜೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಪ್ರೇಸ್ ಮೀಟ್ ನಡೆಸಿ ಕೊಲ್ಲೂರು ದೇವಳದ ಚಿನ್ನಾಭರಣ ಕಳ್ಳತನದ ಸಂಪೂರ್ಣ ವಿವರವನ್ನು ನೀಡಿದ್ರು. ಮಾಧ್ಯಮದ ಮಂದಿ ಜೊತೆ ಸಾವಿರಾರು ಜನ ಠಾಣೆಯಲ್ಲಿ ನೆರೆದು ಕಳ್ಳರ ಮುಖ ದರ್ಶನ ಮಾಡಿದ್ರು.
ಶಿವರಾಮಗೆ ಸಹಕಾರ ನೀಡಿದ್ದ ಗಂಗಾಧರ..!
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಲಾಕರಿನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಯಾಮಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಶಿವರಾಮ ಇನ್ನಷ್ಟು ವಂಚಕರ ಹೆಸರು ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿಯಂತೆ ಉಡುಪಿ ಎಸ್ಪಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಪೊಲೀಸರು ಕಳವು ಮಾಲಿನಲ್ಲಿ 2 ಕೆ.ಜಿ 243ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ೪ ಜನ ದೇವಳದ ಸಿಬ್ಬಂದಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವರಾಮ ಮಡಿವಾಳ ಜತೆಯಲ್ಲಿ ದೇವಳದ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ ಹೆಗ್ಡೆ, ಪ್ರಸಾದ ಆಚಾರ್, ಗಣೇಶ್ ಪೂಜಾರಿ ಹಾಗೂ ನಾಗರಾಜ್ ಶೇರುಗಾರ್ ಎನ್ನುವವರನ್ನು ಬಂಧಿಸಲಾಗಿದೆ. ಈ ಪೈಕಿಗಂಗಾಧರ ಹೆಗ್ಡೆ ಈ ಪ್ರಕರಣವನ್ನು ಮುಚ್ಚಿಹಾಕಲು ಹರಸಾಹಸವನ್ನೇ ಪಟ್ಟಿದ್ದ ಎನ್ನಲಾಗಿದೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವಂತೆ ನಾಟಕವಾಡುತ್ತಿದ್ದ ಈತ ದೇವಿಯ ಆಭರಣಕ್ಕೆ ಕನ್ನ ಹಾಕುವ ನಯವಂಚಕ ಎಂಬುದು ತಿಳಿಯುತ್ತಲೇ ಜನರು ಆತನಿಗೆ ಹಿಡಿಶಾಪ ಹಾಕ್ತಿದ್ದಾರೆ.
ಇನ್ನೂ ಇದ್ದಾರೇ ದ್ರೋಹಿಗಳು..!
ಸದ್ಯ ಶಿವರಾಮ ಸಹಿತ ಐವರು ಬಂಧಿತರಾಗಿದ್ದು ಈಗಾಗಲೇ ಪ್ರಕರಣದಲ್ಲಿ ಕೈಜೋಡಿಸಿದ್ದರೆನ್ನಲಾದ ಇತರ 8 ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಷ್ಟೇ ಅಲ್ಲದೇ ದೇವಸ್ಥಾನದ ಹಾಗೂ ಸಾರ್ವಜನಿಕ ಸೊತ್ತುಗಳ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕರ್ತವ್ಯ ಲೋಪ ಎಸಗಿರುವ ದೇಗುಲದ 10 ಮಂದಿ ನೌಕರರ ವಿರುದ್ದ ಸೂಕ್ತ ಕ್ರಮಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಲ್ಲದೇ, ದೇವಸ್ಥಾನದ ಪ್ರಮುಖ ಹುದ್ದೆಯಲ್ಲಿ ಇರುವವರ ಕರ್ತವ್ಯ ಲೋಪಗಳ ಕುರಿತು ವಿಚಾರಣೆ ನಡೆಯುತ್ತಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಅವರುಗಳ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಅಣ್ಣಾಮಲೈ ತಿಳಿಸಿದ್ದಾರೆ.
ಹರಕೆ ಚಿನ್ನ ಹರೋಹರ..!
ರಾಜ್ಯ ಹಾಗೂ ಹೊರರಾಜ್ಯದ ಭಕ್ತಾಧಿಗಳ ಆರಾಧ್ಯ ದೇವತೆ ಶ್ರೀ ಮೂಕಾಂಬಿಕೆಗೆ ಹರಕೆ ರೂಪವಾಗಿ ಭಕ್ತರು ಕಾಣಿಕೆ ಅರ್ಪಿಸುವುದು ಇಲ್ಲಿ ಹಿಂದಿನಿಂದಲೂ ನಡೆದು ಬಂದ ರೂಢಿ. ಮೂಕಾಂಬಿಕೆ ದೇವಸ್ಥಾನದಲ್ಲಿ ಕಾಣಿಕೆ ಅರ್ಪಿಸಲು 2 ವಿಧಾನಗಳಿದ್ದು ಕೆಲವರು ಹುಂಡಿಯಲ್ಲಿ ನೆರವಾಗಿ ತಮ್ಮ ಕಾಣಿಕೆ ಅರ್ಪಿಸಿದರೆ, ಕೆಲವರು ಸೇವಾ ಕೌಂಟರ್ ನಂಬ್ರ 1 ರಲ್ಲಿ ಆಭರಣಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಕೌಂಟರಿನಲ್ಲಿ ನೀಡುವ ಕಾಣಿಕೆಗೆ ಸ್ವೀಕೃತಿ ರಸೀದಿ ನೀಡುವ ಕ್ರಮವಿದೆ, ಆದರೆ ತಾವು ನೀಡಿದ ಕಾಣಿಕೆಗಳಿಗೆ ರಸೀದಿ ಪಡೆದುಕೊಳ್ಳದೆ ಇರುವ ಹಲವು ಭಕ್ತರು ಇದ್ದು ಇದೆಲ್ಲವೂ ಕೌಂಟರ್ ನಂ.1 ರಲ್ಲಿ ಕೆಲಸ ಮಾಡುತ್ತಿದ್ದ ಶಿವರಾಮ ಹಾಗೂ ಆತನ ಗ್ಯಾಂಗಿಗೆ ಫ್ಲಸ್ ಪಾಯಿಂಟ್ ಆಗಿತ್ತು.
70 ಲಕ್ಷಕ್ಕೂ ಅಧಿಕ ಚಿನ್ನ ವಶ?
2012 ರಿಂದ 2016 ಫೆ.29 ರ ರವರೆಗೆ ಕೌಂಟರ್ 1 ರಲ್ಲಿ ಭಕ್ತರು ನೀಡಿದ ಚಿನ್ನಾಭರಣಗಳ ಲೆಕ್ಕಾಚಾರ ಮಾಡಿದಾಗ ಅದರ ಒಟ್ಟು ತೂಕ 3 ಕೆ.ಜಿ 172 ಗ್ರಾಂ ಆಗಿತ್ತು. ಪ್ರಕರಣ ದಾಖಲಾದ ಬಳಿಕ ದೇವಸ್ಥಾನದಲ್ಲಿ ಪರಿಶೀಲನೆ ಮಾಡಿದಾಗ ಮೊದಲು 651 ಗ್ರಾಂ ಹಾಗೂ ನಂತರ 430 ಗ್ರಾಂ ಚಿನ್ನಾಭರಣ ಸಿಕ್ಕಿತ್ತು. ಆರೋಪಿ ಶಿವರಾಮ ನೀಡಿದ ಮಾಹಿತಿಯ ಆಧಾರದಲ್ಲಿ ಕೊಲ್ಲೂರು, ಕುಂದಾಪುರ, ಗಂಗೊಳ್ಳಿ , ಬೈಂದೂರು ಮುಂತಾದ ಕಡೆಗಳಲ್ಲಿ ವಿವಿಧ ಬ್ಯಾಂಕ್ ಹಾಗೂ ಸೊಸೈಟಿ, ಫೈನಾನ್ಸ್ ಮೊದಲಾದೆಡೆ ಅಡವು ಇಡಲಾಗಿದ್ದ 2 ಕೆ.ಜಿ 243 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರುವ ಚಿನ್ನಾಭರಣಗಳ ಪೈಕಿ ಇನ್ನೂ 415 ಗ್ರಾಂ ಚಿನ್ನಾಭರಣಗಳನ್ನು ಪತ್ತೆ ಮಾಡಲು ಪೊಲೀಸರು ಕಾರ್ಯಾಚರಣೆಯನ್ನು ಮುಂದುವರೆಸ್ತಾ ಇದ್ದಾರೆ.
ಕದ್ದ ಹಣ ಜುಗಾರಿ, ಕುಡಿತಕ್ಕೆ…
ಆರೋಪಿಯೊಂದಿಗೆ ಕೈ ಜೋಡಿಸಿರುವ ಇತರೇ ಆರೋಪಿಗಳು ಪ್ರಾರಂಭದಲ್ಲಿ ಶಿವರಾಮನ ಬಳಿ ಕೈ ಸಾಲ ಪಡೆದುಕೊಳ್ಳುತ್ತಿದ್ದು, ಕೊನೆಕೊನೆಗೆ ಭಕ್ತರು ಶ್ರೀ ದೇವಿಗೆ ನೀಡಿದ ಚಿನ್ನಾಭರಣಗಳನ್ನೆ ಬಂಡವಾಳವನ್ನಾಗಿಸಿಕೊಂಡು ಅಡವು ಸಾಲ ಪಡೆದುಕೊಂಡು ಮಜಾ ಮಾಡುತ್ತಿದ್ದರು ಎನ್ನಲಾಗಿದೆ. ಕದ್ದ ಹಣದಲ್ಲಿ ನಿತ್ಯ ಕುಡಿತ, ಕ್ರಿಕೆಟ್ ಬೆಟ್ಟಿಂಗ್, ಜೂಜು, ಮಟ್ಕಾ ಮುಂತಾದ ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದರೆನ್ನಲಾಗಿದೆ.
ಅಣ್ಣಾಮಲೈಗೆ ಜೈ….
ಕೊಲ್ಲೂರು ಠಾಣೆಯೆದುರು ನಡೆದ ಪತ್ರಿಕಾಗೋಷ್ಟಿ ಸಂದರ್ಭ ಸಾವಿರಾರು ನಾಗರೀಕರು ನೆರೆದಿದ್ದರು. ಆರೋಪಿಗಳನ್ನು ಶೀಘ್ರ ಬಂಧಿಸಿ ಅಕ್ರಮವನ್ನು ಬಯಲಿಗೆಳೆದ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರನ್ನು ಶ್ಲಾಘಿಸಿದ ಜನರು ಎಸ್ಪಿ ಅವರಿಗೆ ಜೈಕಾರ ಹಾಕಿದರು ಅಲ್ಲದೇ ಕೊಲ್ಲೂರು ದೇವಸ್ಥಾನದ ಅವ್ಯವಸ್ಥೆ ವಿರುದ್ಧ ದಿಕ್ಕಾರ ಕೂಗಿದರು.
ಇದನ್ನೂ ಓದಿರಿ-
ಕೊಲ್ಲೂರು ಮೂಕಾಂಬಿಕೆ ಚಿನ್ನ; ಗುಮಾಸ್ತ ಇಟ್ಟಿದ್ದ ಅಡಮಾನ; ಹಣದಲ್ಲಿ ಸ್ನೇಹಿತರೊಂದಿಗೆ ನಿತ್ಯ ಮಾಡ್ತಿದ್ದ ಮಧ್ಯಪಾನ!
ಕೊಲ್ಲೂರು ಮೂಕಾಂಬಿಕೆಯ 30 ಲಕ್ಷಕ್ಕೂ ಅಧಿಕ ಚಿನ್ನಕ್ಕೆ ಕನ್ನ ಹಾಕಿದ ಗುಮಾಸ್ತ; ಆತನ ಹಿಂದೆ ಯಾರಿದ್ದಾರೆ?
ಕೊಲ್ಲೂರು ಮೂಕಾಂಬಿಕೆ ಚಿನ್ನಕ್ಕೆ ಕನ್ನ ಹಾಕಿ ಪರಾರಿಯಾದ ದೇವಳದ ಸಿಬ್ಬಂದಿ..!?