ಕುಂದಾಪುರ: ಪೊಲೀಸರು ಸಾರ್ವಜನಿಕರಿಂದ ಸಹಾಯ ಪಡೆಯುತ್ತಾರೆ. ಆದರೆ ಸಾರ್ವಜನಿಕರನ್ನು ಗೌರವಿಸುವುದಿಲ್ಲ ಎಂಬ ಆರೋಪವಿದೆ. ಆದರಿದು ತಪ್ಪು ಕಲ್ಪನೆ. ಸಾರ್ವಜನಿಕ ಸಹಕಾರವಿಲ್ಲದಿದ್ದರೆ ಪೊಲೀಸ್ ಇಲಾಖೆ ಜನರಿಗೆ ಸಹಕಾರ ನೀಡಲಾಗದು. ಕುಂದಾಪುರದ ಟ್ರಾಫಿಕ್ ಪೊಲೀಸರು ಜನಸ್ನೇಹಿಯಾಗಿರುವುದಲ್ಲದೇ, ದಾನಿಗಳನ್ನು ಗುರುತಿಸಿ ಗೌರವಿಸುವುದರ ಮೂಲಕ ಇಲಾಖೆಯ ಬಗೆಗಿನ ಇಂತಹ ತಪ್ಪು ಕಲ್ಪನೆಯನ್ನು ದೂರ ಮಾಡಿದ್ದಾರೆ ಎಂದು ಡಿ.ವೈ.ಎಸ್.ಪಿ. ಸಿ.ಬಿ.ಪಾಟೀಲ್ ಶ್ಲಾಘಿಸಿದರು.
ನಗರದ ಟ್ರಾಫಿಕ್ ಪೊಲೀಸ್ ಠಾಣಾ ನವೀಕರಣದಲ್ಲಿ ಕೈಜೋಡಿಸಿದ ದಾನಿಗಳು, ನಾಗರಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಮಾತನಾಡಿ ರಾಜ್ಯಾದ್ಯಂತ ಜನಸ್ನೇಹಿ ಪೊಲೀಸ್ ಠಾಣೆಗಳನ್ನು ಗುರುತಿಸಿ ಐ.ಎಸ್.ಐ. ಗೌರವ ನೀಡುವ ಕ್ರಮ ಜಾರಿಗೆ ಬಂದಿದೆ. ಇದರಿಂದ ಪೊಲೀಸ್ ಠಾಣೆ ಎಂದರೆ ಸಾರ್ವಜನಿಕರಲ್ಲಿರುವ ತಪ್ಪು ಅಭಿಪ್ರಾಯ, ಭಯ ದೂರವಾಗುವುದಲ್ಲದೇ, ಅಪರಾಧ ಪ್ರಮಾಣವೂ ಕಡಿಮೆಯಾಗಬಲ್ಲದು. ಕುಂದಾಪುರ ಠಾಣೆಗೂ ಶೀಘ್ರ ಐ. ಎಸ್.ಐ. ಮಾನ್ಯತೆ ಸಿಗಲಿ ಎಂದು ಹಾರೈಸಿದರು.
ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಇಮ್ರಾನ್ ಮಾತನಾಡಿ, ನಗರದಲ್ಲಿ ವಾಹನಗಳ ಸುಗಮ ಸಂಚಾರ, ಪಾರ್ಕಿಂಗ್ ಹಾಗೂ ಪಾದಚಾರಿಗಳ ಸುರಕ್ಷತೆಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ವಿವರ ನೀಡಿದರು. ಠಾಣಾ ನವೀಕರಣ ಹಾಗೂ ಸುರಕ್ಷಾ ಕ್ರಮಗಳಿಗೆ ಸಹಕಾರ ನೀಡಿದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವವರು, ಕಾನೂನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲು ಹಿಂಜರಿಯರು ಎಂದೂ ಎಚ್ಚರಿಸಿದರು.
ಟ್ರಾಫಿಕ್ ಪೊಲೀಸ್ ಠಾಣೆಯ ಪುರಾತನ ಕಟ್ಟಡವನ್ನು ಅತ್ಯಾಧುನಿಕ ರೀತಿಯಲ್ಲಿ ನವೀಕರಿಸಿ ಕೈತೋಟ, ಇಂಟರ್ಲಾಕ್ ಅಳವಡಿಕೆ ಮೊದಲಾದ ಕಾಮಗಾರಿಗಳಿಗೆ ಸಹಕರಿಸಿದ ಆರ್ಚಿಬಾಲ್ಡ್ ಕ್ವಾಡ್ರಸ್, ಶ್ರೇಯಾಂಕ್, ಸುರೇಂದ್ರ ಶೆಟ್ಟಿ, ಬ್ಯಾರೀಸ್ ಗ್ರೂಪ್, ನವೀನ್ ಶೆಟ್ಟಿ, ಕೆ.ಜಿ.ವೈದ್ಯ, ಜಯಕರ ಶೆಟ್ಟಿ, ಶಂಕರ್ ಕುಂದರ್ ಮೊದಲಾದವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರು ಕೃತಜ್ಞತೆಯ ನುಡಿಗಳನ್ನಾಡಿದರು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಸೀರ್, ಮಹಿಳಾ ಸಬ್ ಇನ್ಸ್ಪೆಕ್ಟರ್ ಸುಜಾತಾ, ಕೆ.ಸಿ. ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಇಮ್ರಾನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾನ್ಸ್ಟೇಬಲ್ ಸುರೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.