ಮಂಗಳೂರು: ಸಿಟಿಜನ್ಸ್ ಕೌನ್ಸಿಲ್ ವತಿಯಿಂದ ‘ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ವಿರುದ್ಧ ಸಮರ’ ಕುರಿತು ಉಪನ್ಯಾಸ ಕಾರ್ಯಕ್ರಮ ಶನಿವಾರ ನಗರದ ಸಂಘನಿಕೇತನದಲ್ಲಿ ನಡೆಯಿತು. ದೇಶದ ಅತಿ ದೊಡ್ಡ ಹಗರಣಗಳನ್ನು ಬಯಲಿಗೆಳೆದ ಮತ್ತು ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾದ ಹಿರಿಯ ಭಾಜಪಾ ನಾಯಕ ಡಾ .ಸುಬ್ರಹ್ಮಣಿಯನ್ ಸ್ವಾಮಿಯವರು “war against curreption and terrarism” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ದೇಶದ ತೆರಿಗೆ ವಂಚಿಸಿ ವಿದೇಶಗಳಲ್ಲಿ ಇಟ್ಟಿರುವ ಕಪ್ಪು ಹಣದ ಜೊತೆಗೆ ಹಗರಣ ಹಾಗೂ ಕ್ರಿಮಿನಲ್ ಚಟುವಟಿಕೆ ಮೂಲಕ ಪಡೆದು ವಿದೇಶದಲ್ಲಿರಿಸಲಾದ 120 ಲಕ್ಷ ಕೋಟಿ ರೂ. ಕೆಂಪು ಹಣವನ್ನು ಕೂಡ ಆರು ತಿಂಗಳೊಳಗೆ ದೇಶಕ್ಕೆ ಬರಲಿದೆ ಎಂದು ಡಾ .ಸುಬ್ರಹ್ಮಣಿಯನ್ ಸ್ವಾಮಿ ಹೇಳಿದರು.
ದೇಶದ ತೆರಿಗೆ ವಂಚಿಸಿದ ಹಣವನ್ನು ಕಪ್ಪು ಹಣ ಎಂದು ಹೇಳಬಹುದು. ಹಗರಣ ಹಾಗೂ ಅಪರಾಧ ಚಟುವಟಿಕೆಗಳ ಮೂಲಕ ಪಡೆದ ಹಣ ಕೆಂಪು ಹಣವಾಗಿದೆ. ಇಂತಹ ಹಣದ ನಿಯಂತ್ರಣಕ್ಕೆ ಅಮೆರಿಕ ಸೇರಿದಂತೆ ಎಲ್ಲಾ ದೇಶಗಳು ಕೈಜೋಡಿಸಲಿದೆ ಎಂದರು.
ಡಿಸೆಂಬರ್ ಅಂತ್ಯದೊಳಗೆ ಸೋನಿಯಾ ಜೈಲಿಗೆ…
‘ನ್ಯಾಶನಲ್ ಹೆರಾಲ್ಡ್’ ಪ್ರಕರಣದಲ್ಲಿ ಡಿಸೆಂಬರ್ ಅಂತ್ಯದೊಳಗೆ ಸೋನಿಯಾ ಗಾಂಧಿ ತಿಹಾರ್ ಜೈಲ್ಗೆ ಹೋಗಲಿದ್ದಾರೆ ಎಂದು ಡಾ. ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದರು.
ನ್ಯಾಶನಲ್ ಹೆರಾಲ್ಡ್ನ ಶೇ. 76 ಶೇರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೆಸರಿನಲ್ಲಿದೆ. ಶೇ. 24ರಷ್ಟು ಶೇರು ಕಾಂಗ್ರೆಸ್ ಇತರ ಮುಖಂಡರ ಕೈಯಲ್ಲಿದೆ . ಜಯಲಲಿತಾ ಇನ್ನು ಹತ್ತು ವರ್ಷಗಳ ಕಾಲ ಜೈಲಿನಿಂ ದ ಹೊರಗೆ ಬಾರದ ಸ್ಥಿತಿ ಇದೆ ಎಂದರು.
ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂತ್ರ: ನಮ್ಮ ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಅಧಿಕಾರಗಳನ್ನು ಗರಿಷ್ಠ ಪ್ರಮಾಣದಲ್ಲಿ ಕಂಪ್ಯೂಟರ್ ತಂತ್ರಜ್ಞಾನಕ್ಕೆ ನೀಡಬೇಕು. ಇದರಿಂದ ಸಾಕಷ್ಟು ನಿಯಂತ್ರಣ ಸಾಧ್ಯ. ದೊಡ್ಡ ದೊಡ್ಡ ವ್ಯಕ್ತಿಗಳನ್ನು ಹಿಡಿದು ಜೈಲ್ಗೆ ಹಾಕಬೇಕು. ಆಗ ಸಣ್ಣ ಮಟ್ಟದವರಿಗೆ ಭಯ ಹುಟ್ಟುತ್ತದೆ. ಸಾಮಾಜಿಕ ಸ್ಥಾನಮಾನನ್ನು ಸಂಪತ್ತಿನಿಂದ ನೋಡುವುದನ್ನು ಬಿಡಬೇಕು ಎಂದು ಅವರು ಹೇಳಿದರು.
ಭಯೋತ್ಪಾದನೆ ಕ್ಯಾನ್ಸರ್:
ಭಯೋತ್ಪಾದನೆ ಎಂಬುವುದು ಕ್ಯಾನ್ಸರ್ನಂತೆ ಹರಡುತ್ತಿದೆ. ಇದರಲ್ಲಿ ನಾನಾ ಮಾಫಿಯಾಗಳು ಅಡಗಿವೆ. ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ಒಂದು ಗುಂಡು ಹಾರಿಸಿದರೆ ಪ್ರತಿಯಾಗಿ 10 ಗುಂಡು ಹಾರಿಸುವಂತೆ ಪ್ರಧಾನಿ ಸೂಚಿಸಿದ್ದಾರೆ. ಇದೀಗ ಪಾಕಿಸ್ತಾನ ಸುಮ್ಮನಿದೆ. ಭಯೋತ್ಪಾದನೆ ಎದುರಿಸಲು ಸ್ಪಷ್ಟ ನಿಲುವು ಅಗತ್ಯವಿದೆ. ಇದಕ್ಕಾಗಿ ನಮ್ಮ ಸುತ್ತಮುತ್ತಲಿನ ಹಾಗೂ ನಾನಾ ದೇಶಗಳಲ್ಲಿ ಉತ್ತಮ ಬಾಂಧವ್ಯ ಹೊಂದುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೋದಿ ಸ್ಪಷ್ಟ ಹೆಜ್ಜೆಯಲ್ಲಿ ಮುಂದೆ ಸಾಗುತ್ತಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕ , ಇಸ್ರೆಲ್ನಂತ ದೇಶದ ತಂತ್ರಜ್ಞಾನ ಬಳಸಿಕೊಳ್ಳುವ ಅಗತ್ಯವಿದೆ. ಅದಲ್ಲಕ್ಕಿಂತ ನಾವು ಒಂದಾಗಬೇಕಾಗಿದೆ ಎಂದರು.
ಹಿಂದೂ ಸ್ತಾನ ಗೊಂದಲ ಬಿಡಿ: ಗಂಗೆಗೆ ಅನೇಕ ನದಿಗಳು ಸೇರಿದರೂ ಅಂತಿಮವಾಗಿ ಅದು ಗಂಗೆ ಎಂದು ಕರೆಯಲಾಗುತ್ತದೆ. ಹಾಗೆಯೇ ಭಾರತದಲ್ಲಿ ಯಾರೇ ಇರಲಿ ಅವರು ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಪರಿಗಣಿಸುವಲ್ಲಿ ಗೊಂದಲ ಪಡಬಾರದು. ಭಾರತೀಯರ ಪೂರ್ವಜರೆಲ್ಲರೂ ಹಿಂದೂಗಳೇ ಆಗಿದ್ದರು. ಜಗತ್ತಿನಲ್ಲಿ ಈ ದೇಶ ಹಿಂದೂಸ್ತಾನ ಎಂಬ ಹೆಗ್ಗುರುತಿನಿಂದ ಗುರುತಿಸುವಂತೆ ಮಾಡಬೇಕು. ಇಂತಹ ಮನೋಸ್ಥಿತಿ ಮೂಡಿಬರಬೇಕು ಎಂದರು.
ಪಂಡಿತ್ ಆಗಬೇಕಾದ್ದು ಅಂಬೇಡ್ಕರ್:
ವಿದೇಶದಲ್ಲಿ ಓದಿದ ನೆಹರೂ ಪರೀಕ್ಷೆ ತೇರ್ಗಡೆಯಾಗಿಲ್ಲ. ಆದರೆ ಅಂಬೇಡ್ಕರ್ ಅತ್ಯಂತ ಪಂಡಿತರಾಗಿದ್ದರು. ಆದರೆ ನಾವು ನೆಹರೂ ಅವರನ್ನು ಪಂಡಿತ್ ನೆಹರೂ ಅಂತಹೇಳುತ್ತಿದ್ದೇವೆ. ನಿಜವಾಗಿಯೂ ಪಂಡಿತ್ ಅಂಬೇಡ್ಕರ್ ಆಗಬೇಕಿತ್ತು ಎಂದು ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದರು.
ಕಾಶ್ಮೀರದಲ್ಲಿ ಹಿಂದು ಮುಖ್ಯಮಂತ್ರಿ: ಮುಸ್ಲಿಂ ಬಹುಸಂಖ್ಯೆ ಇರುವ ಕಾಶ್ಮೀರದಲ್ಲಿ ಮುಸ್ಲಿಂ ಮುಖ್ಯಮಂತ್ರಿಯೇ ಆಗಬೇಕು ಎಂಬ ಇರಾದೆ ಇದೆ. ಮೂಲತ: ಕಾಶ್ಮೀರ ಹಿಂದೂ ಪ್ರದೇಶವಾಗಿದ್ದು, ಈ ಬಾರಿ ಕಾಶ್ಮೀರದಲ್ಲಿ ಹಿಂದೂ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.
ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಅನಂತಕಷ್ಣ ಅಧ್ಯಕ್ಷತೆ ವಹಿಸಿ ದ್ದರು. ಸಿಟಿಜನ್ಸ್ ಕೌನ್ಸಿಲ್ ಸುನಿಲ್ ಆಚಾರ್, ಸಂಚಾಲಕ ನರೇಶ್ ಶೆಣೈ ಉಪಸ್ಥಿತರಿದ್ದರು. ಅರ್ಚನಾ ಬಾಳಿಗಾ ಕಾರ್ಯಕ್ರಮ ನಿರೂಪಿಸಿದರು.