ಮಂಗಳೂರು : ನೈತಿಕ ಪೊಲೀಸ್ ಗಿರಿ ವಿರುದ್ಧ ಪ್ರಗತಿಪರ ಹೋರಾಟಗಾರರು ಬೆಂಗಳೂರಿನಲ್ಲಿ ಆಯೋಜಿಸಿರುವ `ಕಿಸ್ ಆಫ್ ಲವ್’ ಅಭಿಯಾನವನ್ನು ಯಾವುದೇ ರೀತಿಯಲ್ಲೂ ನಡೆಯಲು ಬಿಡುವುದಿಲ್ಲ. ಒಂದು ವೇಳೆ ನಡೆದರೆ ಕಿಸ್ ಆಫ್ ಲವ್ ಅಭಿಯಾನದ ಮೇಲೆ ಹಿಂದೂ ಮಹಾಸಭಾ ದಾಳಿ ನಡೆಸುತ್ತದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಯವರು, ನ.29ರಂದು ಕಿಸ್ ಆಫ್ ಲವ್ ಕಾರ್ಯಕ್ರಮದ ಮೇಲೆ ದಾಳಿ ನಡೆಸುವ ಸಲುವಾಗಿ ಬೆಂಗಳೂರು ಚಲೋ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ದಾಳಿಯಲ್ಲಿ ಭಾಗವಹಿಸಲು ಆಗಮಿಸುವ ಎಲ್ಲಾ ಧರ್ಮ ರಕ್ಷಕರ ಪ್ರಯಾಣದ ವೆಚ್ಚ 1001 ರೂ ಹಾಗೂ ಧರ್ಮ ರಕ್ಷ ದೀಕ್ಷೆಯನ್ನು ನೀಡುವುದಾಗಿ ತಿಳಿಸಿದರು. ತಮ್ಮ ಜೊತೆ ಕೈ ಜೋಡಿಸಿ ಈ ಅಭಿಯಾನದಲ್ಲಿ ಭಾಗವಹಿಸಲಿಚ್ಚಿಸುವವರು ನವೆಂಬರ್ ೨೯ರಂದು ಬೆಂಗಳೂರಿನ ಎಂ.ಜಿ.ರೋಡಿಗೆ ಆಗಮಿಸುವಂತೆ ಸ್ವಾಮೀಜಿ ತಿಳಿಸಿದರು.
ಬೆಂಗಳೂರು ಅಭಿಯಾನ ಚಳುವಳಿಗೆ ಹಲವು ಶಾಸಕರ ಸಂಸದರ ಮತ್ತು ಹಿಂದೂ ಸಂಘಟನೆಯ ಹಿತೈಷಿಗಳ ಬೆಂಬಲವಿದ್ದು ಅವರು ಆರ್ಥಿಕ ನೆರವನ್ನು ನೀಡುವುದಾಗಿ ತಿಳಿಸಿದ ಸ್ವಾಮೀಜಿಯವರು, ಹಿಂದುತ್ವದ ಬಗ್ಗೆ ಒಲವಿರುವ ೪೫ ಶಾಸಕರು ಮತ್ತು ಹನ್ನೆರಡು ಸಂಸದರು ಬೆಂಬಲ ಸೂಚಿಸಿರುವುದಾಗಿ ಹೇಳಿದರು.
ಕಿಸ್ ಆಫ್ ಲವ್ ಬಾರತದ ಸಂಸ್ಕೃತಿಯನ್ನು ನಾಶ ಮಾಡುತ್ತದೆ. ಇದರಲ್ಲಿ ಕ್ರಿಶ್ಚಿಯನ್ ಮಿಶನರಿಗಳ ಕೈವಾಡವಿದೆ. ಕಿಸ್ ಆಫ್ ಲವ್ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಕಿಸ್ ಕೊಡಲೇಬೇಕೆಂದಿದ್ದರೆ ಭಿಕ್ಷುಕರಿಗೆ, ಮಾನಸಿಕ ಅಸ್ವಸ್ಥರಿಗೆ ಕಿಸ್ ನೀಡಲಿ ಅದನ್ನು ಹೊರತುಪಡಿಸಿ ತಮ್ಮ ದಾಹವನ್ನು ತಿರಿಸಕೊಳ್ಳಲು ರಸ್ತೆ ಮಧ್ಯದಲ್ಲಿ ಚುಂಬಿಸುವುದು ಸರಿಯಲ್ಲ ಎಂದರು.
ಕಿಸ್ ಆಫ್ ಲವ್ ವಿರುದ್ಧ ನ.26ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಮರಣಾಂತ ಉಪವಾಸ ಕೈಗೊಳ್ಳಲಿದ್ದೇವೆ. ಅಂತೆಯೇ ಏ.24, 25, 26ರಂದು ನಗರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಸಮಾವೇಶವನ್ನು ನಡೆಸಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಹಿಂದೂ ಕಾರ್ಯಕರ್ತರ ವಿರುದ್ಧ ವಿನಾ ಕಾರಣ ಸುಳ್ಳು ಕೇಸ್ ದಾಖಲಿಸುತ್ತಿದೆ. ಭಯೋತ್ಪಾದಕ ಮದನಿಯ ಜಾಮೀನು ವಿಸ್ತರಣೆಯನ್ನು ರದ್ದುಗೊಳಿಸಬೇಕು. ನಂದಿತಾ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು. ಮುತಾಲಿಕ್ ವಿರುದ್ಧ ಕದ್ರಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ಆಗ್ರಹಿಸಿದರು.