ಮಂಗಳೂರು : ಬಿಜೆಪಿ ಸದಸ್ಯತಾ ಅಭಿಯಾನ 2014-2015 ಕಾರ್ಯಕ್ರಮಕ್ಕೆ ಬಿಜೆಪಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬಿಜೆಪಿಗೆ ಹೆಚ್ಚು ಹೆಚ್ಚು ಜನರು ಸೇರುವ ಮೂಲಕ ಮೋದಿ ಸಾರಥ್ಯದಲ್ಲಿ ದೇಶದ ಏಳಿಗೆಯಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಈಗಾಗಲೇ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಬಿಜೆಪಿ ಸೇರಲಿಚ್ಚಿಸುವವರಿಗೆ ಮುಕ್ತ ಅವಕಾಶ ನೀಡಲಾಗಿದ್ದು, ತಕ್ಷಣ ತಮ್ಮ ಸದಸ್ಯತ್ವ ನೊಂದಯಿಸಿಕೊಳ್ಳುವಂತೆ ಅಹ್ವಾನಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸರಕಾರವೇ ಇಲ್ಲದಂತಾಗಿದೆ. ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ನಿಷ್ಕ್ರೀಯವಾಗಿದೆ ಹಾಗೂ ನಿದ್ರಾವಸ್ಥೆಯಲಿದೆ. ಒಂದೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹಿಂದೆ ಬಿಜೆಪಿ ಸರಕಾರ ಮಾಡಿದ ಯೋಜನೆಗಳನ್ನು ಉದ್ಘಾಟನೆ ಮಾಡುವುದರಲ್ಲಿ ಸಿದ್ಧರಾಮಯ್ಯ ಬ್ಯುಸಿಯಾಗಿದ್ದಾರೆ. ಗೃಹ ಸಚಿವ ಕೆ.ಜೆ ಜಾರ್ಜ್ ಅವರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆಗಳನ್ನು ನಿಯಂತ್ರಿಸಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಚಿವ ಸಂಪುಟದಲ್ಲಿರುವ ಕಳಂಕಿತ ಸಚಿವರನ್ನು ಕೈ ಬಿಡಲು ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ರಾಜ್ಯ ಸರಕಾರ ಈಗಾಗಲೇ 32 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿ ತನ್ನ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸಿದೆ. ಈ ಬಗ್ಗೆ ಮಾಜಿ ಸಚಿವೆ ಮೋಟಮ್ಮ ಹಾಗೂ ಸ್ಪೀಕರ್ ಕಾಗೋಡ್ ತಿಮ್ಮಪ್ಪ ದನಿ ಎತ್ತಿದ್ದಾರೆ ಎಂದು ಅವರು ಹೇಳಿದರು. ಸರಕಾರ ಹಾಗೂ ಗೃಹ ಇಲಾಖೆ ಅಕ್ರಮ ಮರಳುಗಾರಿಕೆ, ಡಿ ನೋಟಿಫೀಕೇಶನ್ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಶೆಟ್ಟರ್ ಅಗ್ರಹಿಸಿದರು.
`ಕಿಸ್ ಆಫ್ ಲವ್’ನಂತಹ ಆಚರಣೆಗೆ ಬಿಜೆಪಿಯಿಂದ ತೀವ್ರವಾದ ವಿರೋಧವಿದೆ. ಇಂತಹ ಕಾರ್ಯಕ್ರಮಗಳು ಎಲ್ಲಿಯೂ ನಡೆಯಬಾರದು. ಬಾರತ ಸಂಸ್ಕೃತಿಯಂತೆ ನಾವು ನಡೆದುಕೊಳ್ಳಬೇಕು. ಬೆಡ್ ರೂಂ ನಲ್ಲಿ ಮಾಡುವ ಕೆಲಸಗಳನ್ನು ರಸ್ತೆಗಳಲ್ಲಿ ಮಾಡಿದರೆ ಅತ್ಯಾಚಾರದಂತಹ ಹೇಯ ಕೃತ್ಯಗಳಿಗೆ ಬೆಂಬಲ ಸೂಚಿಸಿದಂತೆ. ಸರಕಾರ ಕಾನೂನು ವ್ಯಾಪ್ತಿಯೊಳಗೆ ಕಿಸ್ ಆಫ್ ಲವ್ ಅಭಿಯಾನವನ್ನು ಮಾಡಲು ಸಮ್ಮತಿ ಸೂಚಿಸಿದೆ. ಕಾನೂನು ವ್ಯಾಪ್ತಿಯೊಳಗೆ ಕಿಸ್ ನೀಡುವುದು ಹೇಗೆ ಎಂದು ಪ್ರಶ್ನಿಸಿದ ಶೆಟ್ಟರ್ ಕಿಸ್ ಆಫ್ ಲವ್ ನಡೆಸದಂತೆ ರಾಜ್ಯ ಮುಖಂಡರ ಜೊತೆ ಚರ್ಚಿಸುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಕೋಟಾ ಶ್ರೀನಿವಾಸ್ ಪೂಜಾರಿ. ವಿಧಾನ ಪರಿಷತ್ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಪ್ರಮುಖರಾದ ರುಕ್ಮಯ ಪೂಜಾರಿ, ಸುಂದರ್ ರಾವ್, ದೇವದಾಸ್ ಹಾಗೂ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.