ಬಂಟ್ವಾಳ: ಕಡೇಶ್ವಾಲ್ಯ ಗ್ರಾಮದ ದಾಸರಮೂಲೆ ಎಂಬಲ್ಲಿನ ಮನೆಯೊಂದರಲ್ಲಿ ಗಾಢ ನಿದ್ದೆಯಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ಬೀಸು ಕಲ್ಲಿನ ಗುಂಡು ಕಲ್ಲನ್ನು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಕೊಲೆಗೀಡಾದವರನ್ನು ಇಲ್ಲಿನ ಯಾಕೂಬ್ 57 ಎಂದು ಗುರುತಿಸಲಾಗಿದೆ. ಬೆಳಗಿನ ಜಾವ ಸುಮಾರು 3ರಿಂದ 3.30ರ ಮಧ್ಯೆ ಈ ಕೃತ್ಯ ನಡೆದಿರಬೇಕೆಂದು ಶಂಕಿಸಲಾಗಿದೆ. ಯಾಕೂಬ್ ರವರು ಪ್ರತ್ಯೇಕವಾಗಿ ಮಲಗಿದ್ದು, ಅವರ ತಲೆಯ ಮೇಲೆ ಬೀಸುವ ಕಲ್ಲಿನ ಗುಂಡು ಕಲ್ಲನ್ನು ಎತ್ತಿ ಹಾಕಲಾಗಿದ್ದು ತೀವ್ರ ಗಾಯಗೊಂಡ ಯಾಕೂಬ್ ಸ್ಥಳದಲ್ಲೇ ದಾರುಣವಾಗಿ ಮೃತ ಪಟ್ಟಿದ್ದಾರೆ.
ಇವರ ಮನೆಯ ಒಂದು ಭಾಗದಲ್ಲಿ ಮಣ್ಣಿನ ಗೋಡೆಯಿದ್ದು ಅಲ್ಲಿ ಪ್ಲಾಸ್ಟಿಕ್ ಶೀಟನ್ನು ಮಾಡಿನಂತೆ ಅಳವಡಿಸಲಾಗಿತ್ತು. ಹಂತಕರು ಇಲ್ಲಿಂದ ಮನೆಯೊಳಗೆ ಪ್ರವೇಶಿಸಿ ಯಾಕೂಬ್ರವರನ್ನು ಹತ್ಯೆಗೈದು ಪರಾರಿಯಾಗಿದ್ದಾರೆಂಬ ಅಂಶವನ್ನು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಹಂತಕರು ಕಲ್ಲನ್ನು ಅವರ ತಲೆಯ ಮೇಲೆ ಎತ್ತಿ ಹಾಕುತ್ತಿದ್ದ ವೇಳೆ ಯಾಕೂಬರ ಅಕ್ರಂದನ ಕೇಳಿ ಮನೆಯವರು ಎದ್ದು ಬರುವಷ್ಟರಲ್ಲಿ ಯಾಕೂಬ್ ಕೊನೆಯುಸಿರು ಎಳೆದಿದ್ದಾರೆಂದು ತಿಳಿದು ಬಂದಿದೆ. ಸುದ್ದಿ ತಿಳಿದ ಬಂಟ್ವಾಳ ಎಎಸ್ಪಿ ರಾಹುಲ್, ಇನ್ಸ್ಪೆಕ್ಟರ್ ಬೆಳಿಯಪ್ಪ ,ಗ್ರಾಮಾಂತರ ಠಾಣಾ ಎಸೈ ರಕ್ಷಿತ್ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡರು.
ಶ್ವಾನದಳ,ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಯಿತ್ತಾದರೂ ಹಂತಕರ ಬಗ್ಗೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ.ಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದರೂ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈ ಕೃತ್ಯ ನಡೆದಿರಬೇಕೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಕೇಸು ದಾಖಲಿಸಿಕೊಂಡಿರುವ ಬಂಟ್ವಾಲ ಗ್ರಾಮಾಂತರ ಠಾಣೆಯ ಪೊಲೀಸರು ಹಂತಕರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.