ಕುಂದಾಪುರ: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ನಾಗರಿಕರ ದಶಕಗಳ ಬೇಡಿಕೆಯಾಗಿರುವ ಗಂಗೊಳ್ಳಿ 33 ಕೆ.ವಿ. ಉಪ ಕೇಂದ್ರದ ಕಾರ್ಯಾರಂಭಕ್ಕೆ ಮೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡು ವರ್ಷಗಳೇ ಕಳೆದಿದ್ದು, ವಿದ್ಯುತ್ ಮಾರ್ಗ ಎಳೆಯಲು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಎತ್ತಿದ ಕ್ಯಾತೆ ಇನ್ನೂ ಇತ್ಯರ್ಥವಾಗದಿರುವುದರಿಂದ ವಿದ್ಯುತ್ ಉಪಕೇಂದ್ರ ಇನ್ನೂ ಕಾರ್ಯಾರಂಭ ಮಾಡಿಲ್ಲ.
ಮೆಸ್ಕಾಂನ ಬೈಂದೂರು ಉಪವಿಭಾಗದ ವ್ಯಾಪ್ತಿಗೆ ಬರುವ ಗಂಗೊಳ್ಳಿಯಲ್ಲಿ 33 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ 2011ರಲ್ಲಿ ಸರಕಾರ ಹಸಿರು ನಿಶಾನೆ ತೋರಿತ್ತು. ಆ ಬಳಿಕ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಗಂಗೊಳ್ಳಿ ಪ್ರದೇಶದಲ್ಲಿ ಮೆಸ್ಕಾಂ ಇಲಾಖೆಗೆ ಸೇರಿದ ಸ್ಥಳದಲ್ಲಿ ಉಪ ವಿದ್ಯುತ್ ಕೇಂದ್ರ ನಿರ್ಮಾಣ ಆರಂಭಗೊಂಡು ಇದೀಗ ಬಹುತೇಕ ಪೂರ್ಣಗೊಂಡಿದೆ. ನೂತನ ಉಪಕೇಂದ್ರದಲ್ಲಿ ಎಲ್ಲಾ ವಿದ್ಯುತ್ ಉಪಕರಣಗಳ ಜೋಡಣೆ ಸಹಿತ ಶೇ.90 ರಷ್ಟು ಕಾಮಗಾರಿ ಮುಗಿದಿದೆ. ಆದರೆ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ವಿದ್ಯುತ್ ಮಾರ್ಗ ನಿರ್ಮಾಣದ ವಿಚಾರದಲ್ಲಿ ತೆಗೆದಿರುವ ಹೊಸ ಕ್ಯಾತೆ ಇನ್ನೂ ಇತ್ಯರ್ಥವಾಗದಿರುವುದರಿಂದ ಉಪಕೇಂದ್ರದ ಕಾರ್ಯಾರಂಭ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರದ ವಿದ್ಯುತ್ ಮಾರ್ಗವು ಗುಜ್ಜಾಡಿ ಹಾಗೂ ಹೊಸಾಡು ಗ್ರಾಮದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಸ್ಥಳದ ಮಧ್ಯದಲ್ಲಿ ಹಾದು ಹೋಗಲಿರುವುದರಿಂದ ಕೆಸಿಡಿಸಿ ವಿದ್ಯುತ್ ಮಾರ್ಗ ನಿರ್ಮಾಣ ಮಾಡದಂತೆ ಮೆಸ್ಕಾಂಗೆ ತಡೆಯೊಡ್ಡಿತ್ತು ಎನ್ನಲಾಗಿದೆ. ತಮ್ಮ ಇಲಾಖೆಯ ಸ್ಥಳದ ಮೂಲಕ ವಿದ್ಯುತ್ ಮಾರ್ಗ ನಿರ್ಮಾಣ ಮಾಡಬೇಕಾದರೆ 67 ಲಕ್ಷ ರೂ. ಜಮೆ ಮಾಡುವಂತೆ ಕೆಸಿಡಿಸಿ ಮೆಸ್ಕಾಂಗೆ ಬೇಡಿಕೆ ಇಟ್ಟಿತ್ತು. ಬಳಿಕ ಸುಮಾರು 11 ಲಕ್ಷ ಪಾವತಿಸುವ ಬಗ್ಗೆ ಕೆಸಿಡಿಸಿ ಹಾಗೂ ಮೆಸ್ಕಾಂ ನಡುವೆ ಒಪ್ಪಂದವಾಗಿ 11 ಲಕ್ಷ ರೂ.ಗಳನ್ನು ಮೆಸ್ಕಾಂ ಈಗಾಗಲೇ ಕೆಸಿಡಿಸಿಗೆ ಪಾವತಿಸಿದೆ. ಆದರೆ ಇದೀಗ ಕೆಸಿಡಿಸಿ ಹೊಸ ತಗಾದೆ ತೆಗೆದಿದ್ದು ಇನ್ನೂ ಸುಮಾರು 22 ಲಕ್ಷ ಪಾವತಿಸುವಂತೆ ಹೊಸ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿದೆ. ಹೀಗಾಗಿ ಮೆಸ್ಕಾಂನ ಹಿರಿಯ ಅಧಿಕಾರಿಗಳು ದಿಕ್ಕು ತೋಚದಂತಾಗಿದ್ದು, ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರದ ಕಾರ್ಯಾರಂಭಕ್ಕೆ ಎದುರಾಗಿರುವ ವಿಘ್ನಗಳನ್ನು ನಿವಾರಿಸಲು ಪ್ರಯತ್ನ ಆರಂಭಿಸಿದ್ದಾರೆ ಅಲ್ಲದೆ ಸ್ಥಳೀಯ ಉದ್ಯಮಿಗಳು ಸರಕಾರದ ಸಚಿವರ ಮೂಲಕ ಗಂಗೊಳ್ಳಿ ಉಪಕೇಂದ್ರದ ಬಗ್ಗೆ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕೆ ನಡೆಸಿದ ಪ್ರಯತ್ನ ವ್ಯರ್ಥವಾಗಿದ್ದು, ಈವರೆಗೆ ಯಾವುದೇ ಆಶಾದಾಯಕ ಬೆಳವಣಿಗೆ ಆಗಿಲ್ಲ. ಈ ಎಲ್ಲಾ ಬೆಳವಣಿಗೆಯಿಂದ ಉಪಕೇಂದ್ರದಲ್ಲಿ ಅಳವಡಿಸಲಾಗಿರುವ ವಿದ್ಯುತ್ ಸಂಬಂಧಿ ಉಪಕರಣಗಳು ತುಕ್ಕು ಹಿಡಿಯಲು ಆರಂಭಿಸಿದೆ.
ಗಂಗೊಳ್ಳಿ ಉಪಕೇಂದ್ರಕ್ಕೆ ಸಂಬಂಧಿಸಿದ ಬಹುತೇಕ ಎಲ್ಲಾ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯುತ್ ತಂತಿ ಎಳೆಯುವ ಕಾರ್ಯ ಮಾತ್ರ ಬಾಕಿ ಉಳಿದಿದೆ ಅಲ್ಲದೆ ಕೆಸಿಡಿಸಿ ಆಕ್ಷೇಪದಿಂದ ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ಮಾಣ ಮಾಡುವ ಕಾರ್ಯ ಬಾಕಿ ಉಳಿದಿದೆ. ಸರಕಾರದ ಎರಡು ಇಲಾಖೆಗಳ ನಡುವಿನ ಜಟಾಪಟಿಯಿಂದ ಗಂಗೊಳ್ಳಿ ಸುತ್ತಮುತ್ತಲಿನ ಗ್ರಾಹಕರಿಗೆ ಈ ಉಪಕೇಂದ್ರದ ಪ್ರಯೋಜನ ದೊರೆಯದಂತಾಗಿದೆ ಅಲ್ಲದೆ ಕಳೆದ ಎರಡು ವರ್ಷಗಳಿಂದ ಕೋಟ್ಯಾಂತರ ರೂ.ಗಳನ್ನು ವಿನಿಯೋಗಿಸಿರುವ ಮೆಸ್ಕಾಂ ಕೂಡ ಕೆಸಿಡಿಸಿ ತೆಗೆದ ವರಸೆಯಿಂದ ಹೈರಾಣಾಗಿದೆ.
ಗಂಗೊಳ್ಳಿ ಉಪಕೇಂದ್ರ ಕಾರ್ಯಾರಂಭ ಮಾಡಿದ್ದಲ್ಲಿ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರ ಬಹುತೇಕ ಸಮಸ್ಯೆಗಳು ಪರಿಹಾರಗೊಳ್ಳಲಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಈ ಭಾಗದ ಜನಪ್ರತಿನಿಧಗಳು ಈ ವಿಚಾರದಲ್ಲಿ ಕಾಳಜಿ ವಹಿಸಿ ಎದುರಾಗಿರುವ ಎಲ್ಲಾ ಅಡತಡೆಗಳನ್ನು ನಿವಾರಿಸಿಕೊಳ್ಳುವಲ್ಲಿ ಮತ್ತು ಅತಿ ಶೀಘ್ರ ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರ ಕಾರ್ಯಾಚರಿಸಲು ಶ್ರಮಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.