ಮಂಗಳೂರು, ನ.22: ಕರ್ನಾಟಕ ಆಯುರ್ವೇದ ಯುನಾನಿ ಮಂಡಳಿ, ಆಯುಷ್ ಇಲಾಖೆ, ಆಯುಷ್ನ ವಿವಿಧ ಸಂಘಟನೆಗಳು, ಎಎಫ್ಐ, ನೀಮಾ, ಆಯುಷ್ ಫಾರ್ಮಸ್ಯೂಟಿಕಲ್ ಅಸೋಸಿಯೇಶನ್, ಆಯುಷ್ ಪ್ರಿನ್ಸಿಪಲ್ಸ್ ಅಸೋಸಿಯೇಶನ್ಸ್ ಇವರ ಜಂಟಿ ಆಶ್ರಯದಲ್ಲಿ ನಗರದ ನೆಹರೂ ಮೈದಾನದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಜ್ಯ ಮಟ್ಟದ ಆಯುಷ್ ವೈದ್ಯರ ಸಮಾವೇಶ “ಅಯುಷ್ ಉತ್ಸವಕ್ಕೆ ಶನಿವಾರ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಅಯುಷ್ ಮುಂಚೂಣಿಯತ್ತ ಎಂಬ ಧ್ಯೇಯ ವಾಕ್ಯದಡಿ ಆಯುಷ್ ವೈದ್ಯರ ವೃತ್ತಿ ನೈಪುಣ್ಯತೆ ಹೆಚ್ಚಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕರ್ನಾಟಕ ಆಯುರ್ವೇದ ಯುನಾನಿ ಮಂಡಳಿ, ಆಯುಷ್ ಇಲಾಖೆ, ಆಯುಷ್ನ ವಿವಿಧ ಸಂಘಟನೆಗಳು, ಎಎಫ್ಐ, ನೀಮಾ, ಆಯುಷ್ ಫಾರ್ಮಸ್ಯೂಟಿಕಲ್ ಅಸೋಸಿಯೇಶನ್, ಆಯುಷ್ ಪ್ರಿನ್ಸಿಪಲ್ಸ್ ಅಸೋಸಿಯೇಶನ್ಸ್ ಜಂಟಿ ಆಶ್ರಯದಲ್ಲಿ ಆಯೀಜಿಸಲಾಗಿರುವ ಈ ಸಮಾವೇಶದಲ್ಲಿ ಆಯುಷ್ ಘಟಕಗಳಾದ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಹಾಗೂ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ವಿಭಾಗಗಳ ವೈದ್ಯರು ಭಾಗವಹಿಸಿದ್ದಾರೆ ಎಂದರು.
ಅಲೋಪತಿ ಹಾಗೂ ಆರ್ಯವೇದ ಆರೋಗ್ಯ ಇಲಾಖೆಯ ಎರಡು ಕಣ್ಣುಗಳಿದ್ದಂತೆ. ಜನ ಸಾಮಾನ್ಯರ ಆರೋಗ್ಯ ನಮಗೆ ಮುಖ್ಯ. ಆ ದೃಷ್ಟಿಯಲ್ಲಿ ನಾವು ನಿಮ್ಮೊಂದಿಗೆ ಸದಾ ಕೈ ಜೋಡಿಸುತ್ತೇವೆ. ತಾಲೂಕು ಮಟ್ಟದಲ್ಲಿ ಆಯುಷ್ ಕೇಂದ್ರ ಸ್ಥಾಪನೆಗೆ ಈಗಾಗಲೇ ಚಾಲನೆ ನೀಡಿದ್ದು, ಉಳ್ಳಾಲದಲ್ಲಿ ಆಯುಷ್ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದರು.ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವೈದ್ಯರು ಹಾಗೂ ಜೌಷಧಿಗಳನ್ನು ನೀಡುವ ಕಾರ್ಯ ಮಾಡಲಾಗುವುದು. ಸಮಗ್ರ ಜೌಷಧಿ ಬಗ್ಗೆ ಕೇಂದ್ರ ಸರಕಾರದಿಂದ ಸ್ಪಷ್ಟ ನಿರ್ದೆಶನ ಬರಬೇಕು. ಹಾಗೂ ಪ್ರತಿ ರಾಜ್ಯಗಳಲ್ಲೂ ಆಯುಷ್ ವಿಶ್ವವಿದ್ಯಾನಿಲಯ ನಿರ್ಮಾಣ ಮಾಡುವತ್ತ ಸರಕಾರ ಚಿಂತನೆ ನಡೆಸಬೇಕು. ಕರ್ನಾಟಕದಲ್ಲಿ ಮುಂದಿನ ವರ್ಷ ಆಯುಷ್ ವಿಶ್ವವಿದ್ಯಾನಿಲಯ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಆಯುರ್ವೇದ ಜೌಷಧಿಯ ಸಸ್ಯಗಳಿಗೆ ಬೇಡಿಕೆ ಇದ್ದು, ಭಾರತ 2000 ಕೋಟಿಗಳಷ್ಟು ಜೌಷಧಿಯ ಸಸ್ಯಗಳನ್ನು ರಫ್ತು ಮಾಡುತ್ತಿದ್ದೇವೆ. ಬೇಡಿಕೆಯ 10 ಶೇಕಡಾ ಮಾತ್ರ ನಾವು ರಫ್ತು ಮಾಡುತ್ತಿದ್ದೇವೆ. ನಮ್ಮಲ್ಲೂ ಆಯುರ್ವೇದ ಜೌಷಧಿಯ ಸಸ್ಯಗಳ ಕೊರತೆ ಇದೆ. ಮುಂದೆ ತಂಬಾಕು ಸಸ್ಯಗಳನ್ನು ಬೆಳೆಸುವ ಬೆಳೆಗಾರರು ಮುಂದೆ ಈ ಸಸ್ಯಗಳನ್ನು ಬೆಲೆಸುವತ್ತ ಚಿಂತನೆ ಮಾಡಬೇಕಾಗಿದೆ. ಇದು ಒಂದು ಲಾಭದಾಯಕ ಕೆಲಸವಾಗಿದೆ ಎಂದರು.
ಸಮ್ಮೇಳನದ ಪ್ರಯುಕ್ತ ವಿಶೇಷವಾಗಿ ಹಮ್ಮಿಕೊಳ್ಳಲಾದ “ಎಕ್ಸ್ಪೋ” ವನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸಿ, ಗ್ರಾಮೀಣ ಆರೋಗ್ಯದಲ್ಲಿರುವ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಸಹಕಾರಿಯಾಗಲಿದೆ. ಪಶ್ಚಿಮ ಘಟ್ಟದಲ್ಲಿರುವ ಔಷಧಿ ಸಸ್ಯಗಳನ್ನು ಗುರುತಿಸಿ, ಉಳಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತಿಸಿ, ಪ್ರಸ್ತಾವನೆಗೈದ ಆಯುರ್ವೇದಿಕ್ ಮತ್ತು ಯುನಾನಿ ಪ್ರಾಕ್ಟೀಸ್ ಬೋರ್ಡ್ನ ಅಧ್ಯಕ್ಷ ಡಾ| ಸತ್ಯಾಮೂರ್ತಿ ಭಟ್ ಅವರು, ರಾಜ್ಯದಲ್ಲಿ ಒಟ್ಟು 38,000 ಆಯುರ್ವೇದಿಕ್, 12,000 ಹೋಮಿಯೋಪತಿ ಹಾಗೂ 1,05,000 ಅಲೋಪತಿ ವೈದ್ಯರು ನೋಂದಾವಣೆಗೊಂಡಿದ್ದರೂ, ರಾಜ್ಯದಲ್ಲಿ ಸೇವೆ ನೀಡುತ್ತಿರುವವರ ಸಂಖ್ಯೆ ಶೇ.40ರಷ್ಟು ಮಾತ್ರ. ಇದರಲ್ಲೂ ಶೇ.90ರಷ್ಟು ವೈದ್ಯರೂ ನಗರ ಪ್ರದೇಶಗಳಲ್ಲೇ ಸೇವೆ ನೀಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಸೇವೆಯನ್ನು ಹಂಚುವ ಅಗತ್ಯವಿದೆ. ಈ ಬಗ್ಗೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೊಯ್ದಿನ್ ಬಾವ, ಟಿ.ಶಂಕುತಲ ಶೆಟ್ಟಿ, ಎಮ್.ಎಲ್.ಸಿ.ಐವನ್ ಡಿ’ಸೋಜಾ, ಮಂಗಳೂರು ಮೇಯರ್ ಮಹಾಬಲ ಮಾರ್ಲ, ಸಿಸಿಐಎಮ್ ನವದೆಹಲಿ ಇದರ ಅಧ್ಯಕ್ಷರಾದ ಡಾ| ವನಿತಾ ಮುರಳೀ ಕುಮಾರ್, ಅಯುಷ್ ನಿರ್ದೇಶಕ ವಿಜಯ ಕುಮಾರ್ ಗೋಗಿ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಯುಷ್ ಉತ್ಸವ ಸಮಿತಿಯ ಸಹಾಅಧ್ಯಕ್ಷ ಡಾ| ಮೊಹಮ್ಮದ್ ಇಕ್ಬಾಲ್ ಧನ್ಯವಾದ ಸಮರ್ಪಿಸಿದರು.