ಬೆಂಗಳೂರು,ನ.22: 1998, 99, 2004ರ ಕೆಪಿಎಸ್ಸಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ವಿಚಾರಣೆ ತಡೆ ಕೋರಿ ಅಭ್ಯರ್ಥಿಗಳು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಮುಖ್ಯನ್ಯಾಯಮೂರ್ತಿ ದತ್ತುಪೀಠ ಈ ಕುರಿತು ಅರ್ಜಿ ಪರಿಶೀಲನೆ ಮಾಡಿ ವಿಚಾರಣೆಗೆ ತಡೆನೀಡಿದೆ. ಹೈಕೋರ್ಟ್ನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿತ್ತು.
ಬಸವರಾಜ್, ಗೋಪಾಲಕೃಷ್ಣ ಮತ್ತಿತರರು ವಿಚಾರಣೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. 8 ವರ್ಷಗಳ ನಂತರ ಹುದ್ದೆಯಿಂದ ಅಧಿಕಾರಿಗಳನ್ನು ತೆಗೆಯುವುದು ಸರಿಯಲ್ಲ ಮತ್ತು ಅರ್ಜಿಯನ್ನು ಪಿಐಎಲ್ ಆಗಿ ಪರಿಗಣಿಸುವುದೂ ಸರಿಯಲ್ಲ.
ಹೀಗಾಗಿ ಹೈಕೋರ್ಟ್ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಕೆಎಎಸ್ ಅಧಿಕಾರಿಗಳ ಪರ ವಕೀಲ ಎಸ್. ಚಂದ್ರಶೇಖರ್ ವಾದ ಮಂಡಿಸಿದ್ದರು. ನಾವು ಇಷ್ಟುವರ್ಷಗಳಿಂದ ಸರ್ಕಾರಿ ಸೇವೆ ಸಲ್ಲಿಸಿದ್ದು, ಈಗ ಏಕಾಏಕಿ ಹುದ್ದೆಯಿಂದ ತೆಗೆಯುವುದು ಸರಿಯಲ್ಲ ಎಂದು ಅಬ್ಯರ್ಥಿಗಳು ಅರ್ಜಿಯಲ್ಲಿ ತಿಳಿಸಿದ್ದರು. ಅಭ್ಯರ್ಥಿಗಳ ಪರ ವಾದವನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಹೈಕೋರ್ಟ್ ವಿಚಾರಣೆಗೆ ತಡೆಯಾಜ್ಞೆ ನೀಡಿತು.