ಮಂಗಳೂರು, ನ. 28: ಮಹಾನಗರ ಪಾಲಿಕೆಗೆ ಪೂರ್ಣಾವಧಿಯ ಆಯುಕ್ತರನ್ನು ನೇಮಕ ಮಾಡುವಂತೆ ಆಗ್ರಹಿಸಿ ಸಾಮಾನ್ಯ ಸಭೆಯ ಕಲಾಪಗಳಿಗೆ ಅವಕಾಶ ನೀಡದೆ ವಿಪಕ್ಷ ಬಿಜೆಪಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ, ಈ ನಡುವೆಯೇ ಕಾರ್ಯಸೂಚಿಯನ್ನು ಸದನದಲ್ಲಿ ಅಂಗೀಕರಿಸುವ ಮೂಲಕ ಸಭೆಯನ್ನು ಮೊಟಕುಗೊಳಿಸಿದ ಪ್ರಸಂಗ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿದೆ.
ಮೇಯರ್ ಮಹಾಬಲ ಮಾರ್ಲ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಆಯುಕ್ತರ ನೇಮಕಾತಿ ಬಗ್ಗೆ ನಾಟಕೀಯ ಬೆಳವಣಿಗೆಯಿಂದಾಗಿ ಕಳೆದ ಜುಲೈಯಿಂದ ಆಯುಕ್ತರಿಲ್ಲದೆ ತೊಂದರೆಯಾಗಿದೆ. ಈ ಬಗ್ಗೆ ಪಕ್ಷದ ವತಿಯಿಂದ ಮನಪಾ ಕಚೇರಿ ಹೊರಗಡೆ ಪ್ರತಿಭಟನೆ ನಡೆಸಲಾಗಿದ್ದು, ಆಯುಕ್ತರ ನೇಮಕ ಆಗುವವರೆಗೆ ಸಭೆ ಮುಂದೂಡಬೇಕೆಂದು ಆಗ್ರಹಿಸಿದರು. ಈ ವೇಳೆ ವಿಪಕ್ಷ ಸದಸ್ಯರನ್ನು ಮನವೊಲಿಸಲು ಯತ್ನಿಸಿದ ಮೇಯರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಧರ್ಮ. ಆದರೆ ಆಯುಕ್ತರು ಇಲ್ಲ ಎಂಬ ಕಾರಣಕ್ಕೆ ಮನಪಾದ ಯಾವುದೇ ಕೆಲಸ ಕಾರ್ಯಗಳು ಸ್ಥಗಿತಗೊಂಡಿಲ್ಲ. ಹೋರಾಟಕ್ಕೆ ಸೀಮಿತ ವ್ಯವಸ್ಥೆ ಇದ್ದು, ಜನಸಾಮಾನ್ಯರ ಸಮಸ್ಯೆ ಗಳ ಬಗ್ಗೆ ಚರ್ಚೆಯಾಗಬೇಕಾದ ಸದನ ನಡೆಸಲು ಅವಕಾಶ ಕಲ್ಪಿಸಬೇಕೆಂದು ಕೋರಿದರು.
ಆದರೆ ಇದಕ್ಕೆೆ ಮಣಿಯದ ವಿಪಕ್ಷ ಸದಸ್ಯರು ಮೇಯರ್ ಪೀಠದ ಎದುರು ಕುಳಿತು ಸರಕಾರದ ವಿರುದ್ಧ ಘೋಷಣೆ ಕೂಗಿದರು. ‘‘ಕಾಂಗ್ರೆಸ್ ಆಡಳಿತದಲ್ಲಿ ಆಸ್ತಿ ತೆರಿಗೆ ಹೆಚ್ಚಾಯಿತು…, ನೀರಿನ ಬಿಲ್ ಸಿಗದಾಯಿತು…, ರೈ ಸೊರಕೆ ಜಗಳಕ್ಕೆ ಆಯುಕ್ತರ ನೇಮಕವೇ ಆಗದಾಯ್ತು.. ಓ ರೈಕುಲೇ ಕಮಿಶನರ್ನ ಬೇಗ ಕಡಪುರ್ಲೆ…’’ ಎಂಬ ಕವನ ರೀತಿಯಲ್ಲಿ ಬಿಜೆಪಿ ಸದಸ್ಯರು ಘೋಷಣೆ ಕೂಗಲಾರಂಭಿಸಿದರು. ಈ ಸಂದರ್ಭ ಮೇಯರ್ 15 ನಿಮಿಷಗಳ ಕಾಲ ಸಭೆಯನ್ನು ಮುಂದೂಡಿದರು. ಬಳಿಕ ಸಚೇತಕ ಶಶಿಧರ ಹೆಗ್ಡೆ ಹಾಗೂ ಹರಿನಾಥ್ ವಿಪಕ್ಷ ಸದಸ್ಯರ ಮನವೊಲಿಕೆ ಯತ್ನ ನಡೆಸಿದರು. ಅನಂತರ ಮತ್ತೆ ಸಭೆ ಆರಂಭಿಸಲು ಮೇಯರ್ ಮುಂದಾದಾಗ ಪಟ್ಟು ಬಿಡದೆ ಆಯುಕ್ತರ ನೇಮಕ ಆಗುವವರೆಗೆ ಸಭೆಯನ್ನು ಮುಂದೂಡಿ ಎಂದು ಹೇಳುತ್ತಾ ವಿಪಕ್ಷ ಸದಸ್ಯರು ಮತೆತ ಘೋಷಣೆ ಗಳನ್ನು ಕೂಗಲಾರಂಭಿಸಿದರು.
ವಿಪಕ್ಷದ ಈ ಆಗ್ರಹಕ್ಕೆ ಮಣಿಯದ ಮೇಯರ್, ಓರ್ವ ಅಧಿಕಾರಿಗಾಗಿ ಸದನವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಲು ಜನರಿಂದ ಆಯ್ಕೆ ಯಾದ ಸದಸ್ಯರು ಈ ರೀತಿ ಅಧಿಕಾರಿಗಾಗಿ ಲಾಬಿ ಮಾಡುತ್ತಿರುವುದು ಸರಿಯಲ್ಲ ಎನ್ನುತ್ತಾ ಕಾರ್ಯ ಸೂಚಿ ಮಂಡಿಸುವಂತೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆಗೆ ಸೂಚಿಸಿದರು. ಕಾರ್ಯಸೂಚಿ ಓದಲು ಮುಂದಾದಾಗ ಇತ್ತ ವಿಪಕ್ಷ ಸದಸ್ಯರ ಘೋಷಣೆಯೂ ಜೋರಾಯಿತು. ಈ ಸಂದರ್ಭ ವಿಪಕ್ಷ ಸದಸ್ಯೆ ರೂಪಾ ಡಿ. ಬಂಗೇರ ಸಚೇತಕರ ಕೈಯಲ್ಲಿದ್ದ ಕಾರ್ಯಸೂಚಿ ಪುಸ್ತಕವನ್ನೇ ಕಿತ್ತುಕೊಂಡ ಪ್ರಸಂಗ ನಡೆಯಿತು. ಈ ವೇಳೆ ಕಾರ್ಯಸೂಚಿಗಳನ್ನು ಮಂಜೂರುಗೊಳಿಸುವುದಾಗಿ ಹೇಳಿ ಮೇಯರ್ ಸಭೆಯನ್ನು ಮುಕ್ತಾಯಗೊಳಿಸಿದರು. 288.87 ಲಕ್ಷ ರೂ.ಗಳ 122 ರಸ್ತೆ ದುರಸ್ತಿ ಕಾಮಗಾರಿಗೆ ಮಂಜೂರು ಮನಪಾ ವ್ಯಾಪ್ತಿಯ 122 ಮುಖ್ಯ ರಸ್ತೆಗಳ ಹೊಂಡಗಳನ್ನು ಮುಚ್ಚಿ ಡಾಮರು ತೇಪೆಗೊಳಿಸುವ ನಿಟ್ಟಿನಲ್ಲಿ 288.87 ಲಕ್ಷ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.