ಮಂಗಳೂರು, ಡಿ.23: ಮಂಗಳೂರು ಕೆಥೊಲಿಕ್ ಕ್ರೈಸ್ತರ ಧರ್ಮ ಪ್ರಾಂತದ ವತಿಯಿಂದ ಜಿಲ್ಲೆಯ ಗಡಿಭಾಗದ ಕುಂಜತ್ತೂರು ಗ್ರಾಮದಲ್ಲಿರುವ ಮರಿಯಾಶ್ರಮ ಚರ್ಚ್ ವ್ಯಾಪ್ತಿಯಲ್ಲಿ. 35 ಸೆಂಟ್ಸ್ ಜಾಗದಲ್ಲಿ, ಸಮುದಾಯದಲ್ಲಿ ಸ್ವಂತ ಭೂಮಿ ಹೊಂದದೆ ಇರುವ ಆರ್ಥಿಕವಾಗಿ ದುರ್ಬಲರಾಗಿರುವ 24 ಕುಟುಂಬಗಳಿಗೆ ಉಚಿತವಾಗಿ ಮನೆ ನಿರ್ಮಿಸಿ ಹಸ್ತಾಂತರಿಸುವ ಕಾರ್ಯಕ್ರಮ ಬಿಷಪ್ ಅತಿ ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜರ ನೇತೃತ್ವದಲ್ಲಿ ಸೋಮವಾರ ನಡೆಯಿತು.
ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯ ಮೊದಲ ಕಂತಿನ 24 ಮನೆಗಳನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಜತ್ತೂರು ಗ್ರಾಮದಲ್ಲಿ ತಲಾ 550 ಚ. ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಪ್ರತೀ ಮನೆಯಲ್ಲಿ ಒಂದು ಬೆಡ್ ರೂಂ, ಅಡುಗೆಮನೆ, ಶೌಚಾಲಯ, ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ ಎಂದು ವಂ.ಓಸ್ವಾಲ್ ಮೊಂತೆರೋ ತಿಳಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಬಿಷಪ್ ಅಲೋಶಿಯಸ್ ಪಾವ್ಲ್ ಡಿ ಸೋಜ, ಧರ್ಮಪ್ರಾಂತದ 125ನೆ ವರ್ಷಾಚರಣೆಯ ಸಂದರ್ಭದಲ್ಲಿ ವಿವಿಧ ಚರ್ಚ್ ಗಳ ಪ್ರಾಂತದಲ್ಲಿ 161 ಮನೆಗಳನ್ನು ಅವರ ಸ್ಥಳಗಳಲ್ಲಿ ನಿರ್ಮಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ಸ್ವಂತ ಭೂಮಿ ಹೊಂದಿಲ್ಲದೆ ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದವರಿಗೆ ಮರಿಯ ಕೃಪಾ ಎಂಬ 24 ಮನೆಗಳ ಸಮುಚ್ಛಯವನ್ನು ನಿರ್ಮಿಸಿ ಉಚಿತವಾಗಿ ಫಲಾನುಭವಿಗಳಿಗೆ ನೀಡಲು ತೀರ್ಮಾನಿಸಲಾಯಿತು. ಆ ಪ್ರಯುಕ್ತ ಎಂಟು ತಿಂಗಳಲ್ಲಿ ಎಲ್ಲರ ಪ್ರಯತ್ನದಿಂದ ಮನೆ ನಿರ್ಮಿಸಲು ಸಾಧ್ಯವಾಯಿತು. ಮನೆಯನ್ನು ಪಡೆದ ಕುಟುಂಬಗಳು ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಹಾರೈಸಿದರು. ಬಳಿಕ ಸಾಂಕೇತಿಕವಾಗಿ ಫಲಾನುಭವಿಗಳಾದ ನತಾಲಿಯಾ ಡಿಸೋಜ, ಜೆಸಿಂತ ಡಿಸೋಜ ಅವರಿಗೆ ಮನೆಯನ್ನು ಹತ್ತಾಂತರಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಜೆ.ಆರ್.ಲೋಬೊ ಮಾತನಾಡುತ್ತಾ, ಕ್ರಿಸ್ಮಸ್ ಹಬ್ಬ ಪ್ರತಿಯೊಬ್ಬರ ಬಗ್ಗೆ ಚಿಂತನೆ ಮಾಡುವ ಹಬ್ಬ ಜೊತೆಗೆ ಇನ್ನೊಬ್ಬರಿಗೆ ಸಹಾಯಮಾಡುವ ಹಬ್ಬವಾಗಿದೆ. ಈ ನಿಟ್ಟಿನಲ್ಲಿ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಸಮುದಾಯದ ಆರ್ಥಿಕವಾಗಿ ದುರ್ಬಲರಾದವರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಅರ್ಥಪೂರ್ಣವಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ವಿಕಾರ್ ಜನರಲ್ ವಂ.ಡೆನ್ನಿಸ್ ಪ್ರಭು, ಸಿಒಡಿಪಿ ಕಾರ್ಯದರ್ಶಿ ಓಸ್ವಾಲ್ಡ್ ಮೊಂತೆರೋ, ವಂ.ವಿಲಿಯಂ ಮಿನೇಜಸ್, ಕೆಥೊಲಿಕ್ ಕೌನ್ಸಿಲ್ ಕಾರ್ಯದರ್ಶಿ ಎಂ.ಪಿ.ನರೊನ್ಹ ಮೊದಲಾದವರು ಉಪಸ್ಥಿತರಿದ್ದರು.