ಕುಂದಾಪುರ: ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪಡಿತರ ಚೀಟಿ ಸಮಸ್ಯೆಯನ್ನು ಪರಿಹರಿಸುವಂತೆ ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಕುಂದಾಪುರ ತಹಶೀಲ್ದಾರ್ ಅವರನ್ನು ಒತ್ತಾಯಿಸಿದೆ.
ಪಡಿತರ ಚೀಟಿ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಮನವಿಯನ್ನು ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರವೀಂದ್ರ ಪಟೇಲ್ ಅವರು ಗಂಗೊಳ್ಳಿ ಗ್ರಾಮ ಕರಣಿಕ ರಾಘವೇಂದ್ರ ಡಿ. ಅವರ ಮೂಲಕ ತಹಶೀಲ್ದಾರ್ ಸಲ್ಲಿಸಿದರು.
ಕಳೆದ ಎರಡು ವರ್ಷಗಳಿಂದ ಗಂಗೊಳ್ಳಿ ಗ್ರಾಮದಲ್ಲಿ ಪಡಿತರ ಚೀಟಿ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ. ಈ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಗೊಂದಲದಿಂದ ಜನಸಾಮಾನ್ಯರಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಬಡವರಿಗೆ ಪಡಿತರ ಚೀಟಿ ಸಮಸ್ಯೆಯಿಂದ ಆಹಾರ ಸಾಮಾಗ್ರಿ ಪಡೆಯಲು, ಸರಕಾರದ ಅನುದಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಗಂಗೊಳ್ಳಿ ಗ್ರಾಮದ ಪಡಿತರ ಚೀಟಿ ಸಮಸ್ಯೆಯನ್ನು ಆದಷ್ಟು ಶೀಘ್ರದಲ್ಲಿ ಬಗೆಹರಿಸಬೇಕಾಗಿ ಆಗ್ರಹಿಸಿರುವ ಸ್ಥಾನೀಯ ಬಿಜೆಪಿ ಸಮಸ್ಯೆ ಇದೇ ರೀತಿಯಲ್ಲಿ ಮುಂದುವರಿದಲ್ಲಿ ಗಂಗೊಳ್ಳಿ ಗ್ರಾಮಸ್ಥರನ್ನು ಒಗ್ಗೂಡಿಸಿ ಗ್ರಾಮ ಪಂಚಾಯತ್ ಎದುರುಗಡೆ ಉಗ್ರ ಹೋರಾಟ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದೆ.
ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಸ್ಥಾನೀಯ ಬಿಜೆಪಿ ಕಾರ್ಯದರ್ಶಿ ಬಿ.ಗಣೇಶ ಶೆಣೈ, ಅಶೋಕ ಪೂಜಾರಿ, ಮಾಜಿ ಗ್ರಾಪಂ ಸದಸ್ಯ ರಾಘವೇಂದ್ರ ದೇವಾಡಿಗ, ಶಂಕರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.