ಮಂಗಳೂರು,ಮಾರ್ಚ್.06: ಮಾನವ ಧರ್ಮದ ಆಧಾರದಲ್ಲಿ ಜಾತಿ, ಧರ್ಮ, ಪಕ್ಷ, ಭೇದ ಮರೆತು ಸಮಾನತೆಯಿಂದ ಸೇವೆ ನಿರ್ವಹಿಸಲು ಬದ್ಧ ಎಂದು ‘ಮುಡ’ದ ನೂತನ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಹೇಳಿದರು. ಉರ್ವಸ್ಟೋರ್ ಸಮೀಪದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡ) ಕಚೇರಿಯಲ್ಲಿ ಶುಕ್ರವಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
‘ಮುಡ’ ದೊಂದಿಗೆ ಜನರು ವಿಶ್ವಾಸದೊಂದಿಗೆ ವ್ಯವಹಾರ ನಡೆಸುವ ವಾತಾವರಣವನ್ನು ಅಧಿಕಾರಿಗಳ ಸಹಕಾರದೊಂದಿಗೆ ನಿರ್ಮಿಸುತ್ತೇನೆ. ಇದು ಜನರ ಸೇವೆಗಾಗಿ ಇರುವ ಕಚೇರಿ. ಜನರು ಮುಕ್ತವಾಗಿ ಇಲ್ಲಿ ವ್ಯವಹರಿಸಬಹುದು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕಳೆದ 45ವರ್ಷಗಳಿಂದ ನಾನಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಅದನ್ನು ಗುರುತಿಸಿ ನನಗೆ ಪಕ್ಷ ಈ ಜವಾಬ್ದಾರಿ ನೀಡಿದೆ. ನಾವೆಲ್ಲರೂ ಭಾರತೀಯರು ಎಂಬ ನೆಲೆಯಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ 150ಭರವಸೆಗಳಲ್ಲಿ ಈಗಾಗಲೇ 90ಭರವಸೆಗಳನ್ನು ಈಡೇರಿಸಿದೆ. ಉಳಿದ ಭರವಸೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಲಿದೆ ಎಂದು ಅವರು ಹೇಳಿದರು. ಶಾಸಕ ಜೆ. ಆರ್ ಲೋಬೋ ಮಾತನಾಡಿ, ಮುಡದಿಂದ ಮನೆ ನಿವೇಶನ, ಬಡಾವಣೆ ನಿರ್ಮಾಣಕ್ಕೆ ಒತ್ತು ನೀಡಬೇಕು. ನಾನಾ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದರು.
ಐವನ್ ಡಿಸೋಜ ಮಾತನಾಡಿ, ಕೋಡಿಜಾಲ್ ಇಬ್ರಾಹಿಂ ಅವರಿಗೆ ಅನುಭವ ಇದೆ. ಅದನ್ನು ಬಳಸಿಕೊಂಡು ಕ್ರೀಯಾಶೀಲ, ಜನಸಾಮಾನ್ಯರ ಅಧ್ಯಕ್ಷರಾಗಿ ಅವರು ಗುರುತಿಸಿಕೊಳ್ಳುವಂತಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಮೊಯ್ದೀನ್ ಬಾವ, ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ಮುಡಾ ಆಯುಕ್ತ ಮೊಹಮ್ಮದ್ ನಜೀರ್, ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ, ಕಾವು ಹೇಮನಾಥ ಶೆಟ್ಟಿ, ಡಿ. ಕೆ. ಅಶೋಕ್ ಕುಮಾರ್, ಅಪ್ಪಿ ಎ. ಸಿ. ವಿನಯರಾಜ್, ಕೃಪಾ ಅಮರ್ ಆಳ್ವ, ಪಿ. ವಿ. ಮೋಹನ್, ವಿಶ್ವಾಸ್ಕುಮಾರ್ ದಾಸ್ ಮುಂತಾದವರು ಉಪಸ್ಥಿತರಿದ್ದರು.