ಉಳ್ಳಾಲ,ಮಾರ್ಚ್.13 : ಮುಸ್ಲಿಂ ಸಮುದಾಯ ಝಿಯಾರತ್ನ ವಿಚಾರದಲ್ಲಿ ಭಿನ್ನ ನಿಲುವು ಅಗತ್ಯವಿಲ್ಲ. ವಿಚಾರ ಚರ್ಚೆ ಮಾಡುವ ಮೊದಲು ವಿಚಾರದ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳ ಬೇಕಾದುದು ಅನಿವಾರ್ಯ ಎಂದು ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದರು. ಅವರು ಕಿನ್ಯದಲ್ಲಿ ಗುರುವಾರ ಹುಸೈನ್ ಮುಸ್ಲಿಯಾರ್ ಅವರ ಹೆಸರಿನಲ್ಲಿ ನಡೆಯುತ್ತಿದ್ದ ಕೂಟು ಝಿಯಾರತ್ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರವಾದಿಯವರ ಕಾಲದಲ್ಲಿ ಇದ್ದ ಕೆಲವು ಆಚಾರ ವಿಚಾರಗಳು ಅವರ ನಂತರ ಮುಸ್ಲಿಂ ಸಮುದಾಯದಲ್ಲಿ ಬೆಳೆದು ಬರಲಿದೆ ಎಂದು ಪ್ರವಾದಿಯವ ಕಾಲದಲ್ಲಿಯೇ ಹೇಳಲಾಗಿತ್ತು. ಅದೇ ರೀತಿ ತನ್ನ ಕಾಲದಲ್ಲಿ ಇದ್ದ ಆಚಾರ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಪ್ರವಾದಿಯವರು ಕೂಡಾ ಹೇಳಿದ್ದರು. ಈ ಕಾರಣದಿಂದಲೇ ಪ್ರಸಕ್ತ ಕಾಲದಲ್ಲಿ ಜೀವನವನ್ನೇ ಇಸ್ಲಾಂಗಾಗಿ ಮುಡಿಪಾಗಿಟ್ಟಿದ್ದಾರೆ. ಜೀವನದ ಪೂರ್ಣ ಭಾಗವನ್ನು ಇಸ್ಲಾಂನ ಬೋಧನೆಯಲ್ಲಿಯೇ ಕಳೆದು ಹೆಸರು ಪಡೆದಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಕಿನ್ಯ ಮುಸ್ಲಿಂ ಜಮಾಅತ್ ಅಧ್ಯಕ್ಷ ಸಾಧುಕುಂಞಿ ಮಾಸ್ಟರ್ ಅತಿಥಿಗಳನ್ನು ಸ್ವಾಗತಿಸಿದರು. ಪಿಟಿಸಿ ಮಹಮ್ಮದ್ ಮುಸ್ಲಿಯಾರ್,ಕಿನ್ಯ ಜುಮಾ ಮಸೀದಿ ಖತೀಬ್ ಖಾಸಿಂ ದಾರಿಮಿ, ಮುದರ್ರಿಸ್ ಸಿರಾಜುದ್ದೀನ್ ಪೈಝಿ,ಸೆಯ್ಯಿದ್ ಅಮೀರ್ ತಂಙಳ್, ಸೆಯ್ಯಿದ್ ಬಾತಿಶ್ ತಂಙರ್ಳ, ಕಿನ್ಯ ಸದ್ರ್ ಮುಅಲ್ಲಿಂ ಫಾರೂಕ್ ದಾರಿಮಿ, ಮಹಮ್ಮದ್ ಶರೀಫ್ ಅಝ್ಹರಿ, ಕುತುಬಿನಗರ ಮಸೀದಿ ಖತೀಬ್ ಅಬ್ದುರಝ್ಝಾಕ್ ಮದನಿ, ಕಿನ್ಯ ಮಸೀದಿ ಕಾರ್ಯದರ್ಶಿ ಅಬೂಸಾಲಿ, ಜಿ.ಪಂ. ಸದಸ್ಯ ಎನ್.ಎಸ್. ಕರೀಂ ಮೊದಲಾದವರು ಉಪಸ್ಥಿತರಿದ್ದರು.