ಕುಂದಾಪುರ: ಬೈಕೊಂದರಲ್ಲಿ ಬಂದು ಜಾನುವಾರುಗಳನ್ನು ಕಟ್ಟಿಹಾಕಿ ಕಳವಿಗೆ ಯತ್ನ ನಡೆಸುತ್ತಿದ್ದರೆನ್ನಲಾದ ಇಬ್ಬರು ವ್ಯಕ್ತಿಗಳಿಗೆ ಸಾರ್ವಜನಿಕರೇ ಹಿಡಿದು ಥಳಿಸಿದ ಘಟನೆ ಕುಂದಾಪುರ ತಾಲೂಕಿನ ಬಿದ್ಕಲಕಟ್ಟೆ ಸಮೀಪದ ಹುಣ್ಸೆಮಕ್ಕಿ ಎಂಬಲ್ಲಿ ಬುಧವಾರ ನಡೆದಿದೆ.
ಮಂಗಳೂರು ಸಮೀಪದ ಸುರತ್ಕಲ್ ನಿವಾಸಿಗಳಾದ ಇಕ್ಬಾಲ್ (36) ಮತ್ತು ಹುಸ್ಸೇನ್ (42) ದನ ಕಳವಿಗೆ ಬಂದು ಸಾರ್ವಜನಿಕರಿಂದ ಥಳಿಸಿಕೊಂಡವರು.
ಘಟನೆ ವಿವರ: ಬಿದ್ಕಲಕಟ್ಟೆ ಸಮೀಪದ ಹುಣ್ಸೆಮಕ್ಕಿ ಎಂಬಲ್ಲಿನ ಹಾಡಿಯೊಂದರಲ್ಲಿ ಬುಧವಾರದಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಪಲ್ಸರ್ ಬೈಕಿನಲ್ಲಿ ಬಂದು ನಾಲ್ಕು ದನಗಳನ್ನು ಮರಕ್ಕೆ ಕಟ್ಟಿಹಾಕುವ ಸಂದರ್ಭ ಗಮನಿಸಿದ ಸ್ಥಳಿಯರು ಸ್ಥಳಕ್ಕೆ ಹೋಗಿ ಇಬ್ಬರನ್ನು ವಿಚಾರಿಸಿದ್ದಾರೆ. ಇದೇ ವೇಳೆ ಇಬ್ಬರು ಶಂಕಾಸ್ಪದವಾದ ಹೇಳಿಕೆಯನ್ನು ನೀಡಿದ್ದು ಮಾತ್ರವಲ್ಲದೇ ಓಡಲು ಯತ್ನಿಸಿದಾಗ ಅನುಮಾನಗೊಂಡ ಸಾರ್ವಜನಿಕರು ಇಬ್ಬರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದೇ ವೇಳೆ ಮಾಹಿತಿ ಪಡೆದ ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಈ ಇಬ್ಬರನ್ನು ಸಾರ್ವಜನಿಕರಿಂದ ಬಿಡಿಸಿ ಠಾಣೆಗೆ ಕರೆದೊಯ್ದು ಬಳಿಕ ಇಬ್ಬರನ್ನು ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕರೆತಂದಿದ್ದರು.
ಇಬ್ಬರ ಪೈಕಿ ಇಕ್ಬಾಲ್ ಎಂಬಾತನಿಗೆ ಥಳಿತದಿಂದ ಗಂಭಿರವಾಗಿ ಗಾಯವಾಗಿದೆ. ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ ಪೊಲೀಸರು ಆರೋಪಿಗಳು ಮರಕ್ಕೆ ಕಟ್ಟಿದ್ದರೆನ್ನಲಾದ ನಾಲ್ಕು ಗೋವುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ತಂದಿದ್ದ ಪಲ್ಸರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ವಶಪಡಿಸಿಕೊಂಡ ಗೋವುಗಳನ್ನು ಗೋಶಾಲೆಗೆ ರವಾನಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸರು ವಿಚಾರಣೆ ಆರಂಭಿಸಿದ್ದು ತನಿಖೆ ನಡೆಯುತ್ತಿದೆ.