ಕನ್ನಡ ವಾರ್ತೆಗಳು

ವಿಕೋಪಗಳನ್ನು ಎದುರಿಸಲು ಸಜ್ಜಾಗಿ : ವಿಕೋಪ ನಿರ್ವಹಣೆ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

Pinterest LinkedIn Tumblr

Dc_meet_photo_1

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಬಹುದಾದ ಯಾವುದೇ ಸಂಭಾವ್ಯ ವಿಕೋಪಗಳನ್ನು ಎದುರಿಸಲು ಸಾರ್ವಜನಿಕ, ಖಾಸಗಿ ರಂಗದ ಎಲ್ಲ ಬೃಹತ್ ಉದ್ಯಮಗಳು, ವಿಮಾನ ನಿಲ್ದಾಣ, ರೈಲ್ವೆ ಇಲಾಖೆ ಸಮನ್ವಯದಿಂದ ಸಜ್ಜಾಗಿರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ವಿಕೋಪ ನಿರ್ವಹಣೆ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೈಗಾರಿಕೆಗಳ ದುರ್ಘಟನೆಗಳ ಬಗ್ಗೆ ಆಗಾಗ ಅಣಕು ಪ್ರದರ್ಶನ, ಎಲ್ಲ ಉದ್ಯಮಗಳ ವಿಕೋಪ ನಿರ್ವಹಣೆ ಯಂತ್ರ, ಪರಿಕರಗಳ ಪ್ರದರ್ಶನ ಮಾಡಬೇಕು. ಪೈಪ್‌ಲೈನ್‌ಗಳ ಸೋರಿಕೆ ಮತ್ತಿತರ ದುರಂತಗಳ ಸಂದರ್ಭದಲ್ಲಿ ಸಾರ್ವಜನಿಕರ ಪಾಲುದಾರಿಕೆ, ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಬೇಕು ಎಂದು ಡಿಸಿ ಸೂಚಿಸಿದರು.

Dc_meet_photo_2

ವಿದೇಶದಿಂದ ಆಮದು ಮಾಡುವ ತೈಲವನ್ನು ಇಳಿಸುವಲ್ಲಿ ಸಮುದ್ರದಲ್ಲಿ ತೈಲ ಮಾಲಿನ್ಯವಾಗುತ್ತಿದ್ದು, ಇದನ್ನು ನಿಯಂತ್ರಿಸುವ ಕುರಿತು ಎನ್‌ಎಂಪಿಟಿ ಮತ್ತು ಬಳಕೆದಾರ ಉದ್ಯಮಿಗಳ ನಡುವಿನ ಪರಸ್ಪರ ತಿಳಿವಳಿಕೆ ಒಪ್ಪಂದ ಬಗ್ಗೆ ಚರ್ಚೆ ನಡೆದರೂ ಎಂಆರ್‌ಪಿಎಲ್‌ನ ಅಸಹಕಾರದಿಂದ ಸಾಧ್ಯವಾಗಿಲ್ಲ. ಸಮುದ್ರದಲ್ಲಿ ಸಾಕಷ್ಟು ಜಲ ಮಾಲಿನ್ಯವಾಗುತ್ತಿದೆ. ಇದನ್ನು ನಿಯಂತ್ರಿಸಲು ಎಂಟು ಕೋಟಿ ರೂ. ಮೊತ್ತದ ಪರಿಕರಗಳ ಅಗತ್ಯವಿದೆ. ಅದರ ಅರ್ಧ ಭಾಗವನ್ನು ಕೇಂದ್ರ ಸರಕಾರ ಭರಿಸಲಿದೆ. ಉಳಿದ ನಾಲ್ಕು ಕೋಟಿ ರೂ.ನಲ್ಲಿ ಶೇ.90ರಷ್ಟು ತೈಲವನ್ನು ಎಂಆರ್‌ಪಿಎಲ್ ಆಮದು ಮಾಡುತ್ತಿದ್ದು, ಆ ಮೊತ್ತವನ್ನು ಎಂಆರ್‌ಪಿಎಲ್ ಭರಿಸಬೇಕು ಎಂದು ಎನ್‌ಎಂಪಿಟಿ ಅಧಿಕಾರಿ ಹೇಳಿದರು. ಅಷ್ಟು ಮೊತ್ತ ಕೊಡಲು ಸಾಧ್ಯವಿಲ್ಲ ಎಂದು ಎಂಆರ್‌ಪಿಎಲ್ ಅಧಿಕಾರಿಗಳು ಹೇಳಿದರು. ಎರಡೂ ಉದ್ಯಮಗಳ ಮುಖ್ಯಸ್ಥರು ಕುಳಿತು ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಡಿಸಿ ಸೂಚಿಸಿದರು.

ನೋ ಫ್ಲೈ ಝೋನ್: ಎಂಆರ್‌ಪಿಎಲ್ ಮೇಲೆ ವಿಮಾನ ನಿಲ್ದಾಣ ಹಾರಾಟಕ್ಕೆ ಅವಕಾಶ ನೀಡದ ‘ನೋ ಫ್ಲೈ ಝೋನ್’ ಬಗ್ಗೆ ಚರ್ಚೆ ನಡೆಯಿತು. ಇಂಥ ಪ್ರಸ್ತಾವನೆ ಎಲ್ಲೂ ಇಲ್ಲ ಎಂದು ವಿಮಾನ ಯಾನ ಸಚಿವಾಲಯ ಉತ್ತರ ನೀಡಿದೆ ಎಂದು ಎಂಆರ್‌ಪಿಎಲ್ ಅಧಿಕಾರಿ ಹೇಳಿದರು. ನಿಷೇಧಿತ ವಲಯ ಎಂದು ಘೋಷಿಸುವ ಬಗ್ಗೆ ಮತ್ತೆ ವಿಮಾನ ಯಾನ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.

Dc_meet_photo_3

ಎನ್‌ಎಂಪಿಟಿಯಲ್ಲಿ ತೈಲ ಇಳಿಸುವ ಎಸ್‌ಎಂಪಿ(ಸಿಂಗಲ್ ಮೂರಿಂಗ್ ಪಾಯಿಂಗ್) ಇರುವ ಜಾಗ ವಿಷಕಾರಿ ಆಗಿರುವುದರಿಂದ ಅದರ 500 ಮೀ. ವ್ಯಾಪ್ತಿಯನ್ನು ಮೀನುಗಾರಿಕೆ ಮುಕ್ತ ಪ್ರದೇಶ ಎಂದು ಘೋಷಿಸಬೇಕು ಎಂದು ಎನ್‌ಎಂಪಿಟಿ ಅಧಿಕಾರಿ ಕೋರಿದ್ದು, ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಯಿತು.

ಮಂಗಳೂರು- ಬೆಂಗಳೂರು ತೈಲ ಪೈಪ್‌ಲೈನ್‌ನಲ್ಲಿ ಕಳ್ಳತ ನ ನಿಯಂತ್ರಣ ಕ್ರಮ, ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವಿನ ಪಶ್ಚಿಮ ಘಟ್ಟದಲ್ಲಿ ಭೂಕುಸಿತ ಇನ್ನಿತರ ಕಾರಣಗಳಿಂದ ರೈಲು ದುರಂತ ತಪ್ಪಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ರೈಲ್ವೆ ಅಧಿಕಾರಿಗಳ ಜತೆ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಚರ್ಚೆ ನಡೆಸಿದರು.

Dc_meet_photo_4

ಅಗ್ನಿ ನಂದಕಗಳನ್ನು ಬಳಸುವ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿ, ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಎಸಿಪಿ ಮದನ್ ಗಾಂವ್ಕರ್ ಸಲಹೆ ಮಾಡಿದರು. ವಿವಿಧ ಪೆಟ್ರೋಲಿಯಂ ಕಂಪನಿಗಳು ನೀಡುತ್ತಿರುವ ತರಬೇತಿ ಬಗ್ಗೆ ಮಾಹಿತಿ ನೀಡಲಾಯಿತು.

ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜಿ.ಟಿ.ರಾಧಾಕೃಷ್ಣ, ಮಹಾನಗರ ಪಾಲಿಕೆ ಅಧೀಕ್ಷಕ ಎಂಜಿನಿಯರ್ ಶಿವಶಂಕರ್ ಮೂರ್ತಿ, ಮಹಾನಗರ ಪಾಲಿಕೆ ಪ್ರಭಾರ ಆಯುಕ್ತ ಗೋಕುಲ್‌ದಾಸ್ ಪ್ರಭು, ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಚ್.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಫ್ಯಾಕ್ಟರಿ ಮತ್ತು ಬಾಯ್ಲರ್‌ಗಳ ಇಲಾಖೆ ಉಪನಿರ್ದೇಶಕ ಕೆ.ಜಿ.ನಂಜಪ್ಪ ಸಭೆ ನಿರ್ವಹಣೆ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿ, ವಂದಿಸಿದರು.

ವರದಿ ಕೃಪೆ : ವಿಕೆ

Write A Comment