ಮಂಗಳೂರು,ಅ.17: ಕರಾವಳಿ ಜಿಲ್ಲೆಯ ವೈದ್ಯಕೀಯ ಇತಿಹಾಸದಲ್ಲಿ 70 ವಯಸ್ಸಿನ ಮಹಿಳೆಗೆ ನಗರದ ಸಿಟಿ ಆಸ್ಪತ್ರೆಯ ಪರಿಣಿತ ಶಸ್ತ್ರ ಚಿಕಿತ್ಸಕ ತಂಡದಿಂದ ಒಂದು ಬಹು ಅಪರೂಪದ, ವಿನೂತನ ತಂತ್ರಜ್ಞಾನ ಶೈಲಿಯ ಶಸ್ತ್ರಚಿಕಿತ್ಸೆಯನ್ನು ಅನುಸರಿಸಿ ಯಶಸ್ವಿಯಾಗಿ ನೆರವೇರಿಸಿ ಮಹಿಳೆಗೆ ಜೀವದಾನ ನೀಡಿದ ಘಟನೆ ಇತ್ತೀಚೆಗೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲಾ ಮೂಲದ ಸುಮಾರು 70 ವರ್ಷ ವಯಸ್ಸಿನ ಮಹಿಳೆ ನಿಶ್ಯಕ್ತಿ, ತೀವ್ರ ಆಯಾಸ ಮತ್ತು ವಿಪರೀತ ರಕ್ತಸ್ರಾವ ಒಳಗೊಂಡ ಭೇದಿ ಸಮಸ್ಯೆಯಿಂದ ಬಳಲುತ್ತಿದ್ದು ಉನ್ನತ ಸಲಹೆ ಮತ್ತು ಉತ್ತಮ ಚಿಕಿತ್ಸೆಗೆ ನಗರದ ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಆಸ್ಪತ್ರೆಯ ನಿರ್ದೇಶಕ ಹಾಗೂ ಖ್ಯಾತ ಪರಿಣಿತ ಸೂಕ್ಷ್ಮ ರಂದ್ರ ಶಸ್ತ್ರ ಚಿಕಿತ್ಸ ತಜ್ಞರಾದ ಡಾ. ರೋಶನ್ ಶೆಟ್ಟಿ ಯವರು ಅಸ್ವಸ್ಥ ಮಹಿಳೆಯನ್ನು ಸೂಕ್ಷ್ಮ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಸಂಪೂರ್ಣವಾಗಿ ಪರೀಕ್ಷಿಸಿದಾಗ ಮಹಿಳೆಯ ಗುದದ್ವಾರ ನಾಳದಲ್ಲಿ ಕ್ಯಾನ್ಸರ್ ಗೆಡ್ಡೆಯ ಬೆಳವಣಿಗೆಯನ್ನು ಪತ್ತೆ ಹಚ್ಚಿದರು. ಮಹಿಳೆಯ ಸಾಮಾನ್ಯ ಆರೋಗ್ಯ ಪರಿಸ್ಥತಿ ಚಿಂತಾಜನಕವಾಗಿದ್ದು, ಹೃದಯದಲ್ಲಿ ರಕ್ತಚಲನೆ ಏರುಪೇರಾಗುತ್ತಿತ್ತು,
ಮಹಿಳೆಗೆ ಪೂರ್ಣ ಅರಿವಳಿಕೆ ನೀಡಿ ಹೊಟ್ಟೆಯ ಮೂಲಕ ಶಸ್ತ್ರ ಚಿಕಿತ್ಸೆ ಜರಗಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅದಲ್ಲದೇ ಮಹಿಳೆಯು ಇತ್ತೀಚೆಗೆ ಮಂಡಿ ಜೋಡಣೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಜೀವಕ್ಕೆ ಅಪಾಯ ಮತ್ತು ಹಾನಿಯನ್ನು ಪರಿಗಣಿಸಿ ಡಾ. ಶೆಟ್ಟಿ ಯವರು ತಕ್ಷಣ ಕಾರ್ಯಪ್ರವೃತ್ತರಾಗಿ, ತಮ್ಮ ನೇತ್ರತ್ವದಲ್ಲಿ ಒಂದು ವೈದ್ಯಕೀಯ ತಂಡವನ್ನು ರಚಿಸಿ ಮುಂಜಾಗ್ರತ ಕ್ರಮವನ್ನು ಕೈಗೊಂಡು ಸ್ಥಳೀಯ ಅರಿವಳಿಕೆಯನ್ನು ನೀಡಿ, 2 ತಾಸಿನ ವಿನೂತನ ತಂತ್ರಜ್ಞಾನದ ಸೂಕ್ಷ್ಮ ರಂದ್ರ ಶಸ್ತ್ರ ಚಿಕಿತ್ಸೆಯನ್ನು ಗುದದ್ವಾರದ ಮೂಲಕ ನೆರವೇರಿಸಿ ಗುದದ್ವಾರ ನಾಳದಲ್ಲಿ ಬೆಳೆಯುತ್ತಿದ್ದ ಕ್ಯಾನ್ಸರ್ ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದರು.
ಮಹಿಳೆಯು ಶಸ್ತ್ರಚಿಕಿತ್ಸೆ ಮತ್ತು ಆರೈಕೆಗ ಸ್ಪಂದಿಸಿ 2 ದಿನಗಳೊಳಗೆ ಚೇತರಿಸಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ತಮ್ಮ ಊರಿನ ನಿವಾಸದಲ್ಲಿ ಆರೋಗ್ಯಕರವಾದ ವಿಶ್ರಾಂತಿ ಜೀವನವನ್ನು ಸಾಗಿಸುತ್ತಿದ್ದಾರೆ ಅಲ್ಲದೇ ವೈದ್ಯರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಯಶಸ್ವೀ ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಕ ಡಾ. ಭಾಸ್ಕರ್ ಶೆಟ್ಟಿ, ಅರಿವಳಿಕೆ ಶಾಸ್ತ್ರ ತಜ್ಞ ಡಾ. ಕಿಶನ್ ಶೆಟ್ಟಿ ಸಹಕರಿಸಿದ್ದರು.