ಉಡುಪಿ: ಎರಡು ರಾಷ್ಟ್ರಪ್ರಶಸ್ತಿ ಪಡೆದ ‘ನಾನು ಅವನಲ್ಲ, ಅವಳು’ ಚಲನಚಿತ್ರ ಅ.29 ರಂದು ಉಡುಪಿ ಅಲಂಕಾರ್ ಚಿತ್ರಮಂದಿರದಲ್ಲಿ ಸಂಜೆ 4.30 ಹಾಗೂ 7.30ಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ಪ್ರದರ್ಶನವನ್ನು ಆಯೋಜಿಸಿರುವ ‘ಓದುಗರು’ ವಾಟ್ಸ್ಯಾಪ್ ಗ್ರೂಪ್ನ ಮಂಜುನಾಥ ಕಾಮತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಪ್ರದರ್ಶನದಲ್ಲಿ ನಿರ್ದೇಶಕರು, ನಟರು ಸೇರಿದಂತೆ ಬಹುತೇಕ ಚಿತ್ರತಂಡ ಭಾಗವಹಿಸಲಿದೆ.
‘ನಾನು ಅವನಲ್ಲ ಅವಳು’ ಮಂಗಳಮುಖಿಯರ ಜೀವನ ಆಧಾರಿತ ಚಿತ್ರ. ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳಬೇಕೆಂಬ ಮಾನವೀಯ ಸಂದೇಶ ಈ ಚಿತ್ರದಲ್ಲಿದೆ. ವಾಣಿಜ್ಯ ಸಿನಿಮಾಗಳ ಭರಾಟೆಯಲ್ಲಿ ಸದಭಿರುಚಿಯ ಸಿನಿಮಾಗಳಿಗೆ ಇಂದು ಚಿತ್ರಮಂದಿರಗಳು ಸಿಗುತ್ತಿಲ್ಲ. ಹೀಗಾಗಿ ಅಂತಹ ಸಿನಿಮಾಗಳನ್ನು ನೋಡಲಿಚ್ಚಿಸುವ ವೀಕ್ಷಕರಿಗೆ ನಿರಾಸೆಯಾಗುತ್ತಿದೆ. ಈ ಕಾರಣಕ್ಕೆ ‘ಓದುಗರು’ ಎಂಬ ವಾಟ್ಸ್ಯಾಪ್ ಗ್ರೂಪ್ನ ಸದಸ್ಯರು ಸೇರಿಕೊಂಡು ಚಿತ್ರಮಂದಿರದ ಬಾಡಿಗೆಯನ್ನು ಕಟ್ಟಿ, ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದೆ ನಿಗದಿತ ಶುಲ್ಕದಲ್ಲೇ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ‘ಓದುಗರು’ ಬಳಗದ ಗುರುರಾಜ್ ಸನಿಲ್, ಸುಧೀರ್ ಶಾನುಭಾಗ್, ವಿದ್ಯಾನಾಥ ಕೆ., ಸಂಜೀವ ವಂಡ್ಸೆ ಉಪಸ್ಥಿತರಿದ್ದರು.