ಮಂಗಳೂರು,ನ.02: ನಗರದ ಕೇಂದ್ರೀಯ ರೈಲ್ವೇ ನಿಲ್ದಾಣ ಕಾಲನಿ ಬಳಿ ಓಳಚರಂಡಿ ಕಾಮಗಾರಿ ದುರಸ್ತಿ ವೇಳೆ ಮಣ್ಣು ತೆಗೆಯುತ್ತಿದ್ದ ಕಾರ್ಮಿಕರು ಮಣ್ಣಿನಡಿಗೆ ಸಿಲುಕಿ ಮೃತ ಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟವರನ್ನು ಬಾದಾಮಿಯ ರಾಘು(35) ಹಾಗೂ ಬಾಗಲಕೋಟೆಯ ಬಾಬು(32) ಎಂದು ಗುರುತಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಒಳಚರಂಡಿ ದುರಸ್ತಿಗೊಳಿಸಿ ಹೊಸತಾಗಿ ಪೈಪ್ಲೈನ್ ಅಳವಡಿಸುವ ಕಾಮಗಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪೈಪ್ ಅಳವಡಿಕೆಯ ಕಾರ್ಯ ಮುಕ್ತಾಯಗೊಂಡ ನಂತರ ಹತ್ತು ಅಡಿ ಆಳದಲ್ಲಿ ಅಳವಡಿಸಲಾದ ಪೈಪ್ಗೆ ಮಣ್ಣು ಸುರಿಯುತ್ತಿದ್ದ ಸಂದರ್ಭ ಈ ಇಬ್ಬರು ಕಾರ್ಮಿಕರು ಹೊಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭ ಸಮೀಪದ ನೀರಿನ ಓವರ್ಹೆಡ್ ಟ್ಯಾಂಕ್ನಿಂದ ಹೊರ ಹೋಗುವ ನೀರಿನ ಪೈಪ್ ಒಡೆದುಹೋಗಿ ಏಕಾಏಕಿ ನೀರು ರಭಸವಾಗಿ ಹರಿದ ಪರಿಣಾಮ ಹೊಂಡದ ಮೇಲ್ಗಡೆ ಹಾಕಲಾದ ಮಣ್ಣು ಕುಸಿದಿದೆ. ಮಣ್ಣು ಏಕಾಏಕಿ ಬಿದ್ದ ಪರಿಣಾಮ ಹೊಂಡದಲ್ಲಿದ್ದ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಯ ಕಾರ್ಯಾಚರಣೆ ಮಾಡಿ ಜೆಸಿಬಿಯ ಮೂಲಕ ಕುಸಿದ ಮಣ್ಣನ್ನು ತೆಗೆದು ಮೃತದೇಹವನ್ನು ಹೊರತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ , ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ದೀಪಕ್ ಪೂಜಾರಿ, ಕಾರ್ಪೊರೇಟರ್ಗಳಾದ ಎ.ಸಿ.ವಿನಯ್ರಾಜ್, ಅಶೋಕ್ ಡಿ.ಕೆ. ಭೇಟಿ ನೀಡಿದರು.ಪಾಂಡೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.