ಕುಂದಾಪುರ: ಪಾರ್ಸ್ಪೋರ್ಟ್ ನೆಪದಲ್ಲಿ ವಿವಾಹಿತ ಮಹಿಳೆ ಮನೆಗೆ ಇತ್ತೀಚೆಗೆ ಕೆಲ ತಿಂಗಳುಗಳಿಂದ ಹೋಗುತ್ತಿದ್ದ ಬೈಂದೂರು ಪೊಲೀಸ್ ಪೇದೆಯನ್ನು ಸೋಮವಾರ ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ಮಾತ್ರವಲ್ಲದೇ ಥಳಿಸಿ ಪೊಲೀಸ್ ವಶಕ್ಕೆ ಒಪ್ಪಿಸಿದ ಘಟನೆ ಶಿರೂರು ಮಾರ್ಕೆಟ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿಯಾಗಿರುವ ಕಿರಣ್ ಹೋಗಬಾರದಲ್ಲಿಗೆ ಹೋಗಿ ಸಾರ್ವಜನಿಕರಿಂದ ಧರ್ಮದೇಟನ್ನು ಪಡೆದಾತ. ಆತ ಶಿರೂರಿನ ಮಹಿಳೆಯ ಮನೆಗೆ ಯಾವುದೋ ‘ಡ್ಯೂಟಿ’ ಮಾಡಲು ತೆರಳಿದ್ದ ಎನ್ನಲಾಗಿದೆ.
ಈತ ಶಿರೂರು ಮಾರ್ಕೆಟ್ ಬಳಿಯಿರುವ ಅನ್ಯಕೋಮಿನ ಮಹಿಳೆಯೋರ್ವರ ಮನೆಗೆ ಆಗಾಗ ಬಂದು ಹೋಗುತ್ತಿದ್ದನ್ನು ಕಂಡು ಆಕೆಯೊಂದಿಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾನೆ ಎಂಬ ಸಂಶಯದಿಂದ ಸಾರ್ವಜನಿಕರು ಈತನ ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ. ಸುಮಾರು ಆರು ತಿಂಗಳುಗಳಿಂದ ಇದೇ ಚಾಳಿ ಮುಂದುವರಿದಿತ್ತೆನ್ನಲಾಗಿದ್ದು ಸೋಮವಾರ ಮಧ್ಯಾಹ್ನದ ಸುಮಾರಿಗೆ ಈ ಕಿರಣ್ ಆಕೆಯ ಮನೆ ಒಳಗೆ ಹೋಗಿದ್ದು ಸೇರಿದ ಸಾರ್ವಜನಿಕರು ಮನೆ ಹೊರಗಿನಿಂದ ಚಿಲಕ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರು ವೇಳೆ ಅದ್ಯೇಗೋ ಹೊರಗೆ ಬಂದ ಕಿರಣಗೆ ನೆರೆದಿದ್ದವರು ಕೈಯಲ್ಲಾದಷ್ಟು ಧರ್ಮದೇಟು ನೀಡಿದ್ದರೆನ್ನಲಾಗಿದೆ.
ಸಾರ್ವಜನಿಕರು ಕೇಳಿದಾಗ ನಾನು ಪಾಸ್ಪೋರ್ಟ್ ಮಾಡಿಸಿ ಕೊಡುವ ಕಾರಣಕ್ಕೆ ಬಂದಿದ್ದೆ ಎಂದು ಕಿರಣ್ ಹೇಳಿಕೊಂಡಿದ್ದಾರೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರೇ ಇಂತಹ ಕೃತ್ಯ ಮಾಡುವಾಗ ಜನರಿಗೆ ರಕ್ಷಣೆ ದೊರಕುವುದೇ ಎಂಬುವುದು ಸಾರ್ವಜನಿಕರ ಮಾತಾಗಿದೆ. ನಂತರ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದ್ದು ಪ್ರಕರಣ ಪೊಲೀಸ್ ಮೆಟ್ಟಿಲಿಗೇರಿದೆ. ಬೈಂದೂರು ಪೊಲೀಸರು ಸ್ಥಳಕ್ಕಾಗಮಿಸಿ ಕಿರಣರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಕಿರಣ್ ಯಾವುದೋ ಜಾಗದ ತಕರಾರನ್ನು ಬಗೆಹರಿಸಿ ಕೊಡುವ ಬಗ್ಗೆ ಈ ಮಹಿಳೆಗೆ ಪರಿಚಯವಾಗಿದ್ದ ಎನ್ನುವ ಬಗ್ಗೆ ಊರಿನಲ್ಲಿ ಮಾತುಗಳು ಕೇಳಿಬರುತ್ತಲಿದೆ.
ಆರೋಪಿ ಪೊಲೀಸ್ ಸಿಬ್ಬಂದಿ ಕಿರಣ್ ವಿರುದ್ಧ ಬೈಂದೂರು ಠಾಣೆಯಲ್ಲಿ 354 ಅನ್ವಯ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.