ಮಂಗಳೂರು, ಡಿ.9 :ದುಷ್ಕರ್ಮಿಗಳ ತಂಡವೊಂದು ಯುವಕನೊಬ್ಬನಿಗೆ ಹಾಡುಹಗಲೇ ಮಾರಕಾಯುದ್ಧಗಳಿಂದ ಕಡಿದು ಕೊಲೆಗೆ ಯತ್ನಿಸಿ ಪರಾರಿಯಾದ ಘಟನೆ ಬುಧವಾರ ಬಂಟ್ವಾಳ ತಾಲೂಕಿನ ಮಾರಿಪಳ್ಳದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ರೌಡಿ ಶೀಟರ್ ಹನೀಫ್ ಯಾನೆ ಮಾದ (38) ಎಂದು ಗುರುತಿಸಲಾಗಿದೆ. ದಾಳಿಯಿಂದ ಮಾರಣಾಂತಿಕ ಹಲ್ಲೆಗೊಳಗಾದ ಹನೀಪ್ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಈತನನ್ನು ತೀವೃ ನಿಗಾ ಘಟಕದಲ್ಲಿರಿಸಲಾಗಿದೆ.
ಆಟೋ ಚಾಲಕ ರಿಫಾಯಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಇತ್ತೀಚಿಗೆ ತಾನೇ ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದ ಎನ್ನಲಾಗಿದೆ. ಇದು ರಿಫಾಯಿ ಹತ್ಯಗೆ ಪ್ರತಿಕಾರವಾಗಿ ನಡೆದ ಹಲ್ಲೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇಂದು ತನ್ನ ಸ್ನೇಹಿತನೊಂದಿಗೆ ಹೋಂಡಾ ಆ್ಯಕ್ಟೀವಾ ಸ್ಕೂಟರ್ನಲ್ಲಿ ಬರುತ್ತಿದ್ದ ವೇಳೆ ಫರಂಗಿಪೇಟೆಯಿಂದ ಆನತಿ ದೂರದಲ್ಲಿರುವ ಮಾರಿಪಳ್ಳದ ಕಟ್ಟೆ ಅಂಗಡಿ ಸಮೀಪ ಮಾರುತಿ ಆಲ್ಟೋ ಕಾರು ಮತ್ತು ಬೈಕ್ನಲ್ಲಿ ಬಂದು ಸುಮಾರು 11 ಮಂದಿ ದುಷ್ಕರ್ಮಿಗಳ ತಂಡ ಹನೀಫ್ ಮೇಲೆ ಏಕಾಏಕಿ ದಾಳಿ ನಡೆಸಿ, ಮಾರಕಾಯುದ್ಧಗಳಿಂದ ಯದ್ವತದ್ವ ಕಡಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಹನೀಫ್ ನನ್ನು ಸ್ಥಳೀಯರು ತಕ್ಷಣ ಮಂಗಳೂರಿನ ಯುನಿಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಹನೀಫ್ ನನ್ನು ದಾಖಲಿಸಲಾಗಿರುವ ಯುನಿಟ್ ಆಸ್ಪತ್ರೆಗೆ ಡಿಸಿಪಿ ಸಂಜೀವ ಎಂ. ಪಾಟೀಲ್ ಭೇಟಿ ನೀಡಿದ್ದಾರೆ.
2014ರ ಜೂ.21ರಂದು ನೌಷಾದ್ ಹತ್ಯೆಯ ಪ್ರತಿಕಾರವಾಗಿ ರಿಫಾಯಿ ಕೊಲೆ ನಡೆದಿತ್ತು. ಆದರೆ ರಿಫಾಯಿ, ನೌಷಾದ್ ಕೊಲೆ ಆರೋಪಿಯ ಸಹೋದರನಾಗಿದ್ದ. ರಿಫಾಯಿಯನ್ನು ಚಿತ್ರಹಿಂಸೆ ನೀಡಿ ಕೊಲೆಗೈಯಲಾಗಿತ್ತು. ಇದೀಗ ರಿಫಾಯಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಹನೀಫ್ನನ್ನು ಕೊಲೆ ನಡೆಸಲು ಯತ್ನಿಸಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಘಟನಾ ಸ್ಥಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿಚಾರ್ಜ್ ಮೂಲಕ ಗುಂಪನ್ನು ಚದುರಿಸಿದ್ದಾರೆ.
ಎ.ಎಸ್.ಪಿ ವಿನ್ಸೆಂಟ್ ಶಾಂತಕುಮಾರ್, ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಬೆಳಿಯಪ್ಪ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.